ವಿಷಯಕ್ಕೆ ಹೋಗಿ

57. ನಿಂತ ನೀರಾಗಿರುವ ಕನ್ನಡ ತಂತ್ರಾಂಶ ಕ್ಷೇತ್ರ





ನಾಲ್ಕು ವರ್ಷಗಳ ಹಿಂದೆ ರಾಜ್ಯ ಸರ್ಕಾರವು ಕನ್ನಡದ ಉಚಿತ ತಂತ್ರಾಂಶ ಸಲಕರಣೆಗಳನ್ನು ಸಾರ್ವಜನಿಕರ ಬಳಕೆಗೆ ನೀಡಿದ್ದು ಇವುಗಳನ್ನು ವಾಣಿಜ್ಯೇತರ ಉದ್ದೇಶಗಳಿಗೆ ಒದಗಿಸಲಾಗಿದೆಎಂದು ತಿಳಿಸಲಾಗಿದೆ. ವಾಣಿಜ್ಯಿಕ ಉದ್ದೇಶಗಳಿಗೆ ಬಳಸುವ ತಂತ್ರಾಂಶಗಳನ್ನು ಬಳಕೆದಾರರು ಮಾರುಕಟ್ಟೆಯಲ್ಲಿ ದೊರೆಯುವ ಅತ್ಯುತ್ತಮ ತಂತ್ರಾಂಶಗಳೊಂದಿಗೆ ಹೋಲಿಸಿ ತಮಗೆ ಸೂಕ್ತವಾದುದನ್ನೇ ಎಚ್ಚರಿಕೆಯಿಂದ ಆಯ್ದುಕೊಳ್ಳುತ್ತಾರೆ. ತಂತ್ರಾಂಶ ಉಚಿತ ಎಂದಾದರೆ ಗುಣಮಟ್ಟಕ್ಕೆ ಯಾವ ಖಾತರಿಯೂ ಇಲ್ಲ. ಎಲ್ಲಿ ಹೇಗಿದೆಯೋ ಹಾಗೆಬಳಸಬಹುದಷ್ಟೇ. ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಅದನ್ನು ಕಾಲಕಾಲಕ್ಕೆ ಪರಿಷ್ಕರಿಸಿ ನೀಡುವ ಹೊಣೆಗಾರಿಕೆ ಏನಿಲ್ಲ. ಕನ್ನಡದ ಎಲ್ಲ ಉಚಿತ ತಂತ್ರಾಂಶಗಳ ಹೊಸ ಆವೃತ್ತಿಗಳು ಕಾಲಕಾಲಕ್ಕೆ ಹೊರಬರದಿರುವುದೇ ಇದಕ್ಕೆ ಸಾಕ್ಷಿ.

ಮೈಕ್ರೋಸಾಫ್ಟ್ ವಿಂಡೋಸ್ ಸೇರಿದಂತೆ ಆಧುನಿಕ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಯುನಿಕೋಡ್ ಬೆಂಬಲಿತ ಕನ್ನಡದ ಲಿಪಿವ್ಯವಸ್ಥೆಯಿಂದಾಗಿ ನುಡಿ, ಬರಹ ಅಥವಾ ಕುವೆಂಪು ತಂತ್ರಾಂಶಗಳಂತಹ ಪ್ರತ್ಯೇಕ ಕನ್ನಡ ಲಿಪಿವ್ಯವಸ್ಥೆಯ ಅಗತ್ಯಗಳು ಇಲ್ಲವಾಗಿವೆ. ಆಸ್ಕಿ ಫಾಂಟುಗಳನ್ನು ಹೊಂದಿರುವ ಈ ಲಿಪಿತಂತ್ರಾಂಶಗಳು ಅನುಪಯುಕ್ತ ಸ್ಥಿತಿಗೆ ತಲುಪಿವೆ ಎಂದರೆ ತಪ್ಪಿಲ್ಲ. ನುಡಿಹೆಸರಿನಲ್ಲಿ, ಕನ್ನಡ ಗಣಕ ಪರಿಷತ್ತಿನ ಮೂಲಕ, ಸರಕಾರವೇ ಒಂದು ಉಚಿತ ತಂತ್ರಾಂಶವನ್ನು ಸಿದ್ಧಪಡಿಸಿರುವುದರಿಂದ ಸರಕಾರದ ಬಹುತೇಕ ಇಲಾಖೆಗಳಲ್ಲಿ ಅದನ್ನು ಇಂದಿಗೂ ಬಳಸಲಾಗುತ್ತಿದೆ. ಇಲಾಖೆಗಳಲ್ಲಿನ ಡಿ.ಟಿ.ಪಿ. ಕೆಲಸಗಳಿಗೂ ಸಹ ಖಾಸಗಿ ತಂತ್ರಾಂಶ ತಯಾರಕರ ಫಾಂಟ್ ಸಾಫ್ಟ್‌ವೇರ್‌ಗಳ ಸ್ಥಾನದಲ್ಲಿ ಈಗ ನುಡಿತಂತ್ರಾಂಶವನ್ನು ಬಳಸಲಾಗುತ್ತಿದೆ. ಉಚಿತ ಲಿಪಿತಂತ್ರಾಂಶಗಳು ಬಳಕೆಗೆ ಬಂದ ನಂತರದಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದ ಕನ್ನಡ ಲಿಪಿತಂತ್ರಾಂಶಗಳಿಗೆ ಬೇಡಿಕೆ ಕುಸಿದಿತ್ತು. ಈಗಂತೂ ಕನ್ನಡ ತಂತ್ರಾಂಶಗಳ ತಯಾರಿಕೆ ಮತ್ತು ಮಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದೇ ಹೇಳಬಹುದು. ಹಿಂದೆ, ರಾಷ್ಟ್ರೀಯ ಮಾಹಿತಿ ಮತ್ತು ಸೂಚನಾ ಕೇಂದ್ರದವು (ಎನ್‌ಐಸಿ) ಸರಕಾರದ ವಿವಿಧ ಇಲಾಖೆಗಳ ಕೆಲಸಕಾರ್ಯಗಳನ್ನು ನುಡಿಬಳಸಿ ಗಣಕೀಕರಿಸುತ್ತಿತ್ತು. ಈಗ ಯೂನಿಕೋಡ್ ಕನ್ನಡಕ್ಕೂ ಕಡ್ಡಾಯ ಎಂಬ ಆದೇಶ ಹೊರಬಿದ್ದ ನಂತರದಲ್ಲಿ, ಅಂತರ್ಜಾಲತಾಣಗಳ ಸಹಿತ ಎಲ್ಲ ಕಂಪ್ಯೂಟರೀಕರಣದ ಕೆಲಸಗಳು ಯೂನಿಕೋಡ್ ಆಧಾರಿತವಾಗಿ ನಡೆಯುತ್ತಿವೆ.
ವೇತನ ಲೆಕ್ಕಾಚಾರ, ಸಿಬ್ಬಂದಿ ಸೇವಾ ವಿವರಗಳು ಮತ್ತಿತರ ಕಛೇರಿ ಕೆಲಸಕಾರ್ಯಗಳ ನಿರ್ವಹಣೆಗಾಗಿ, ಖಾಸಗಿ ತಂತ್ರಾಂಶ ತಯಾರಕರು, ಸಿದ್ಧಪಡಿಸಿದ್ದ ಕನ್ನಡದ ಆನ್ವಯಿಕ ತಂತ್ರಾಂಶ ಉತ್ಪನ್ನಗಳನ್ನು (ಪ್ರಾಡಕ್ಟ್‌ಗಳು) ಸರಕಾರವು ಈಗ ಖರೀದಿಸುತ್ತಿಲ್ಲ. ಸರಕಾರದ ವಿವಿಧ ಇಲಾಖೆಗಳಲ್ಲಿ ಏಕರೂಪವಾಗಿ ಬಳಕೆಗೆ ಬರುವ ಇಂತಹ ತಂತ್ರಾಂಶ ಉತ್ಪನ್ನಗಳನ್ನು ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯೇ ಸಿ-ಡ್ಯಾಕ್ ಮತ್ತು ಎನ್.ಐ.ಸಿ.ಯಂತಹ ಸರಕಾರೀ ಸಂಸ್ಥೆಗಳ ಸಹಯೋಗದೊಂದಿಗೆ ಸಿದ್ಧಪಡಿಸುತ್ತಿರುವುದರಿಂದ ಖಾಸಗಿಯವರ ಉತ್ಪನ್ನಗಳು ಸರಕಾರದಲ್ಲಿ ಮಾರಾಟಗೊಳ್ಳುತ್ತಿಲ್ಲ. ಇನ್ನು ಸರಕಾರದ ಗಣಕೀಕರಣ ಯೋಜನೆಗಳು (ಪ್ರಾಜೆಕ್ಟ್‌ಗಳು) ದೊಡ್ಡ ಕಂಪನಿಗಳ ಪಾಲಾಗುತ್ತಿವೆ. ವಾರ್ಷಿಕವಾಗಿ ನಿರ್ದಿಷ್ಟ ಮೊತ್ತದ ವಹಿವಾಟು ನಡೆಸಿರುವ ಕಂಪನಿಗಳು ಮಾತ್ರ ಸರಕಾರದ ಕಂಪ್ಯೂಟರೀಕರಣದ ಕೆಲಸಗಳನ್ನು ನಿರ್ವಹಿಸಲು ಅರ್ಹರಾಗಿವೆ ಎಂಬ ಸರಕಾರದ ನೀತಿಯೇ ಇದಕ್ಕೆ ಕಾರಣವಾಗಿದೆ. ತಂತ್ರಾಂಶ ಉತ್ಪನ್ನಗಳು (ಪ್ರಾಡಕ್ಟ್‌ಗಳು) ಇಂದು ಸರಕಾರದಲ್ಲಿಯೂ ಬಳಕೆಯಾಗುತ್ತಿಲ್ಲ. ಜಾರಿಗೆ ಬರುತ್ತಿರುವುದೆಲ್ಲವೂ ತಂತ್ರಾಂಶ ಯೋಜನೆಗಳು (ಪ್ರಾಜೆಕ್ಟ್‌ಗಳು).  ಪ್ರತಿಯೊಂದೂ ಕಂಪ್ಯೂಟರುಗಳಲ್ಲಿ ತಂತ್ರಾಂಶದ ಪ್ರತಿಯೊಂದನ್ನು ಅನುಸ್ಥಾಪಿಸಿ ಬಳಸುವ ಕಾಲ ಈಗಿಲ್ಲ. ಈಗೇನಿದ್ದರೂ ಕ್ಲೌಡ್ ಕಂಪ್ಯೂಟಿಂಗ್ನ ಯುಗ. ಇ-ಆಡಳಿತದ (ವಿದ್ಯುನ್ಮಾನ ಆಡಳಿತ) ಜಾಗದಲ್ಲಿ ಎಂ-ಆಡಳಿತ (ಮೊಬೈಲ್ ಆಡಳಿತ) ಜಾರಿಯಾಗಿದೆ. ಯಾವುದೋ ಅಜ್ಞಾತಸ್ಥಳದಲ್ಲಿ ಸರ್ವರ್ ಇರುತ್ತದೆ.  ಅದರಲ್ಲಿ ಇಟ್ಟಿರುವ ತಂತ್ರಾಂಶವನ್ನು ಅಂತರ್ಜಾಲದ ಮೂಲಕ ಸಂಪರ್ಕಿಸಿ ಬಳಸಲು ಪ್ರತಿಯೊಂದೂ ಕಂಪ್ಯೂಟರಿಗೂ ಬಳಕೆಯ ಪರವಾನಗಿ ನೀಡಲಾಗುತ್ತಿದೆ. ಸ್ಮಾರ್ಟ್‌ಫೋನ್ ಉಪಯೋಗಿಸಿ ಸರ್ವರ್‌ನಲ್ಲಿನ ತಂತ್ರಾಂಶವನ್ನು ಬಳಸಲು ಆಪ್‌ಗಳನ್ನು (ಕಿರುತಂತ್ರಾಂಶಗಳು) ಸಿದ್ಧಪಡಿಸಲಾಗುತ್ತಿದೆ. ಬಹಳ ಹಿಂದಿನಿಂದ ಕನ್ನಡ ಲಿಪಿತಂತ್ರಾಂಶ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಚಿಕ್ಕಚಿಕ್ಕ ಕಂಪನಿಗಳು ಈ ಎಲ್ಲ ಕಾರಣಗಳಿಂದ ಕನ್ನಡದ ತಂತ್ರಾಂಶ ತಯಾರಿಕೆಯಿಂದ ಈಗ ಅನಿವಾರ್ಯವಾಗಿ ವಿಮುಖವಾಗಿವೆ.
ಬಹಳ ಹಿಂದೆ ಬಿಡುಗಡೆಯಾಗಿದ್ದ ಉಚಿತ ಯುನಿಕೋಡ್ ಫ಼ಾಂಟ್‌ಗಳು ಲಿಪಿಸೌಂದರ್ಯದ ದೃಷ್ಟಿಯಲ್ಲಿ ಬಳಕೆಗೆ ಸೂಕ್ತವಾಗಿರಲಿಲ್ಲ. ಅವುಗಳ ಸಾಮಾನ್ಯ ಬಳಕೆಯಲ್ಲಿ ಹಲವಾರು ತಾಂತ್ರಿಕ ಸಮಸ್ಯೆಗಳು ಸಹ ಇದ್ದವು. ಈಗ ಸುಧಾರಿತ ರೀತಿಯಲ್ಲಿ ಕನ್ನಡದ ಹಲವಾರು ಯೂನಿಕೋಡ್ ಫಾಂಟುಗಳು ಉಚಿತ ಬಳಕೆಗೆ ಲಭ್ಯವಿವೆ. ತಂತ್ರಾಂಶಗಳ ತಯಾರಿಕೆಯಲ್ಲಿ ಶಿಷ್ಟತೆಗಳು ಜಾರಿಯಾಗಿರುವ ಕಾರಣ ಯಾವುದೇ ತಂತ್ರಾಂಶದ ಕೀಬೋರ್ಡ್‌ಡ್ರೈವರ್ (ಲಾಂಗ್ವೇಜ್ ಎಂಜಿನ್) ಬಳಸಿ, ಮತ್ತಾವುದೋ ತಯಾರಕರು ನೀಡಿರುವ ಫಾಂಟುಗಳನ್ನು ಬಳಸಿ ಕನ್ನಡವನ್ನು ಟೈಪ್ ಮಾಡಬಹುದು. ಅದು ಆಸ್ಕಿ ಫಾಂಟುಗಳಿರಬಹುದು ಅಥವಾ ಯೂನಿಕೋಡ್ ಫಾಂಟುಗಳೇ ಆಗಿರಬಹುದು. ಫಾಂಟುಗಳನ್ನು ನಕಲಿಸಿಕೊಂಡು ಬಳಸುವುದನ್ನು (ಪೈರಸಿ) ತಡೆಗಟ್ಟಲು ಸಾಧ್ಯವಿಲ್ಲ. ಹಿಂದೆ, ಖಾಸಗಿ ತಂತ್ರಾಂಶ ತಯಾರಕರು ತಮ್ಮ ಫಾಂಟುಗಳಲ್ಲಿ ಬೇರೆಬೇರೆ ಅಕ್ಷರಸಂಕೇತಗಳನ್ನು ಬಳಸುತ್ತಿದ್ದ ಕಾರಣ ಆ ಫಾಂಟುಗಳನ್ನು ಬಳಸಿ ಪಠ್ಯವನ್ನು ಟೈಪ್‌ಮಾಡಬೇಕಾದರೆ ಅವರದೇ ಕೀಬೋರ್ಡ್ ಡ್ರೈವರ್ ಬಳಸಬೇಕಾಗಿತ್ತು. ಅವರ ತಂತ್ರಾಂಶವನ್ನು ನಕಲು ಮಾಡಲಾಗದಂತೆ ಮಾಡಿ ಪಾವತಿಸಿ ಬಳಸುವುದನ್ನು ಖಚಿತಪಡಿಸಿಕೊಳ್ಳಲು ಕೀ-ಡಿಸ್ಕ್’/ ‘ಡಾಂಗಲ್ಗಳಿದ್ದವು.   
ಸಮಯ, ಶ್ರಮ ಮತ್ತು ಹಣವನ್ನು ಹೂಡಿ ತಯಾರಿಸಿದ ಫಾಂಟುಗಳ ಬಳಕೆಯ ಹಕ್ಕನ್ನು ಇಡಿಯಾಗಿ ಒಂದು ಸಂಸ್ಥೆಯೋ ಸರ್ಕಾರವೋ ಖರೀದಿಸಿ ಸಾರ್ವಜನಿಕರಿಗೆ ಮತ್ತು ಸರ್ಕಾರದ ಕಚೇರಿಗಳಿಗೆ ಉಚಿತ ಹಂಚಿಕೆ ಮಾಡಿದರೆ ಫಾಂಟ್ ತಯಾರಿಸಿದ ಕಂಪನಿ ತನ್ನ ಬಂಡವಾಳ ಒಮ್ಮೆಲೇ ಹಿಂಪಡೆಯಬಹುದು. ಆದರೆ, ದಶಕಗಳ ಹಿಂದೆ ಇದ್ದಂತೆ, ವೈಯಕ್ತಿಕ ಬಳಕೆಗೆ ಬಿಡಿ ತಂತ್ರಾಂಶದ ಪ್ರತಿಗಳನ್ನು  ಮಾರಾಟಮಾಡುವುದು ಈಗ ಸಾಧ್ಯವಿಲ್ಲ. ಅದಕ್ಕೇ ಈಗ ಖಾಸಗಿಯವರು ಉತ್ತಮವಾದ ಯುನಿಕೋಡ್ ಫ಼ಾಂಟ್‌ಗಳನ್ನು ತಯಾರಿಸುತ್ತಿಲ್ಲ. ಚಿಕ್ಕಚಿಕ್ಕ ಕಂಪನಿಗಳಿಗೆ ಈಗ ಕೆಲಸವಿಲ್ಲದಂತಾಗಿದೆ. ಹಿಂದೆ ತಾವು ತಯಾರಿಸಿದ ಹಳೆಯ ತಂತ್ರಾಂಶಗಳಿಗೆ ಬಳಕೆಯ ಬೆಂಬಲವನ್ನು ನೀಡುತ್ತಾ. ಆಸ್ಕಿ-ಎನ್‌ಕೋಡಿಂಗ್ ಉಳ್ಳ ಹಳೆಯ ಡೇಟಾವನ್ನು ಯೂನಿಕೋಡ್ ಎನ್‌ಕೋಡಿಂಗ್‌ಗೆ ಬದಲಾಯಿಸುವ ಡೇಟಾ ಕನ್‌ವರ್ಷನ್‌ನಂತಹ ಕೆಲಸಗಳಲ್ಲಿ ಅವು ನಿರತವಾಗಿವೆ.
ಅಂತರ್‌ರಾಷ್ಟ್ರೀಯ ಡಿ.ಟಿ.ಪಿ.ತಂತ್ರಾಂಶಗಳಲ್ಲಿ ಭಾರತೀಯ ಭಾಷೆಗಳನ್ನು ಬಳಸುವಲ್ಲಿ ಯೂನಿಕೋಡ್ ಫಾಂಟ್‌ಗೆ ಸೂಕ್ತ ಬೆಂಬಲ ಲಭ್ಯವಾಗಿ ಆಸ್ಕಿ ಫಾಂಟುಗಳ ಬಳಕೆ ಸಂಪೂರ್ಣವಾಗಿ ನಿಂತುಹೋದರೆ ಚಿಕ್ಕಕಂಪನಿಗಳು ಶಾಶ್ವತವಾಗಿ ಕಣ್ಣುಮುಚ್ಚಿಕೊಳ್ಳುತ್ತವೆ. ಭಾಷಾ ಲಿಪಿತಂತ್ರಾಂಶದ ವಿಷಯದಲ್ಲಿ ಅಂತರ್‌ರಾಷ್ಟ್ರೀಯ ಕಂಪನಿಗಳು ಭಾರತೀಯ ಭಾಷೆಗಳನ್ನು ತಮ್ಮ ಉತ್ಪನ್ನಗಳಲ್ಲಿ ಅಳವಡಿಸಿ ನೀಡುವ ಸುಳಿವು ದೊರೆತಾಗಲೇ ಬಹಳಷ್ಟು ಕಂಪನಿಗಳು ಭಾರತೀಯ ಭಾಷಾ ತಂತ್ರಾಂಶ ತಯಾರಿಕೆಯಿಂದ ವಿಮುಖಗೊಂಡು ಲಾಭದಾಯಕ ಸೇವೆಗಳನ್ನು ನೀಡುವತ್ತ ಹೊರಳಿಕೊಂಡವು. ಕನ್ನಡವಷ್ಟೇ ಅಲ್ಲದೆ ಇತರ ಬೇರೆಬೇರೆ ಭಾರತೀಯ ಭಾಷೆಗಳ ಫಾಂಟ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಮಾರಾಟಮಾಡುತ್ತಿದ್ದ ಕೆಲವೇ ದೊಡ್ಡ ಕಂಪನಿಗಳು ಸಹ ಈಗ ಕುಟುಕುಜೀವವನ್ನು ಹಿಡಿದು ಉಸಿರಾಡುತ್ತಿವೆ. ಅತ್ತ ಸರ್ಕಾರದಿಂದಲೂ ಯಾವುದೇ ರೀತಿಯ ಪ್ರೋತ್ಸಾಹವಿಲ್ಲದೆ ಅಂತಹ ಕಂಪನಿಗಳು ಬಾಗಲುಮುಚ್ಚುವ ಹಂತಕ್ಕೆ ಬಂದಿವೆ. ಕನ್ನಡ ತಂತ್ರಾಂಶ ತಯಾರಿಕೆಯು ಈಗ ನಿಂತ ನೀರಾಗಿದೆ.
ಅಂತರ್‌ರಾಷ್ಟ್ರೀಯ ಕಂಪನಿಗಳು ತಮ್ಮ ತಂತ್ರಾಂಶಗಳಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಅಳವಡಿಸಿ ನೀಡುತ್ತಿರುವುದರಲ್ಲಿ ಖಂಡಿತವಾಗಿಯೂ ಭಾಷಾಭಿವೃದ್ಧಿಯ ಕಳಕಳಿ, ಕಾಳಜಿಗಳೇನಿಲ್ಲ.  ಮಾರುಕಟ್ಟೆಯನ್ನು ವಿಸ್ತರಿಸುವ ಕಾರ್ಯತಂತ್ರದ ಒಂದು ಭಾಗವಾಗಿ ತಂತ್ರಾಂಶಗಳು ಪ್ರಾದೇಶೀಕರಣದ ಪ್ರಕ್ರಿಯೆಗೆ ಒಳಗಾಗಿವೆ.  ಹೀಗಾಗಿ, ‘ಬಳಕೆಯ ಭಾಷೆಮತ್ತು ತಂತ್ರಾಂಶದ ಸಂವಹನ ಭಾಷೆಇವುಗಳೆರಡನ್ನೂ ನಿಗದಿಪಡಿಸಿಕೊಳ್ಳುವ ಅವಕಾಶವನ್ನು ಬಳಕೆದಾರರಿಗೇ ಒದಗಿಸಲಾಗುತ್ತಿದೆ. ಕಾರ್ಯಾಚರಣೆ ವ್ಯವಸ್ಥೆ, ಆನ್ವಯಿಕ ತಂತ್ರಾಂಶ ಮತ್ತು ಲಿಪಿತಂತ್ರಾಂಶ ಈ ಮೂರೂ ಹಂತದ ವ್ಯವಸ್ಥೆಗಳು ಪ್ರತ್ಯೇಕವಾಗಿದ್ದಾಗ ಅವುಗಳನಡುವೆ ಹೊಂದಾಣಿಕೆ ಇರುವುದಿಲ್ಲ. ಈ ಮೂರನ್ನೂ ಸಹ ಒಂದೇ ತಂತ್ರಾಂಶ ತಯಾರಿಕಾ ಕಂಪನಿ/ಸಂಸ್ಥೆಯು ನಿರ್ವಹಿಸಿದ್ದರೆ ಇವುಗಳ ನಡುವೆ ಹೊಂದಾಣಿಕೆ ತರಲು ಸಾಧ್ಯ. ಶಿಷ್ಟತೆಗಳು (ಸ್ಟ್ಯಾಂಡರ್ಡ್‌ಗಳು) ಇಲ್ಲದ ಕಾರಣ ತಂತ್ರಾಂಶ ತಯಾರಿಕಾ ಕ್ಷೇತ್ರದಲ್ಲಿ ಇದುವರೆವಿಗೂ ಹಲವು ಗೊಂದಲಗಳಿದ್ದವು. ಶಿಷ್ಟತೆಗಳು ಜಾರಿಗೆ ಬಂದ ನಂತರದಲ್ಲಿ ಎಲ್ಲ ಗೊಂದಲಗಳು ನಿವಾರಣೆಯಾಗಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾಷಾ ತಂತ್ರಜ್ಞಾನವು ಬಹುದೊಡ್ಡ ವೇದಿಕೆಯನ್ನು ಒದಗಿಸಿದೆ. ಈ ವೇದಿಕೆಯನ್ನು ಬಳಸಿಕೊಂಡು ಸ್ಥಳೀಯ ತಂತ್ರಾಂಶ ತಯಾರಕರು ದೇಶೀಯ ಅಗತ್ಯಕ್ಕೆ ತಕ್ಕಂತೆ ಭಾಷಾ ಬಳಕೆಗಾಗಿ ಡಿಜಿಟಲ್ ನಿಘಂಟುಗಳು, ಪದಕೋಶಗಳು, ಟ್ಯಾಗ್‌ಮಾಡಲಾದ ಮಾಹಿತಿ ಆಕರಗಳು ಇತ್ಯಾದಿ ಭಾಷಾ ತಂತ್ರಾಂಶ ಸಲಕರಣೆಗಳನ್ನು ಸಿದ್ಧಪಡಿಸಲು ಈಗ ವಿಫುಲ ಅವಕಾಶಗಳಿವೆ. ಆದರೆ, ಅವುಗಳನ್ನು ಮೊದಲಿಗೆ ಸಿದ್ಧಪಡಿಸಿಕೊಂಡು ನಂತರ ಮಾರಾಟಮಾಡುವಷ್ಟು ಆರ್ಥಿಕವಾಗಿ ಸದೃಢವಾದ ಸ್ಥಳೀಯ ಕಂಪನಿಗಳಿಲ್ಲ. ಬಳಕೆದಾರ ಸಮುದಾಯ ಅಥವಾ ಸರ್ಕಾರದಿಂದ ಅಂತಹ ಬೇಡಿಕೆಗಳು ಬಂದರೆ, ಬೇಡಿಕೆಗೆ ತಕ್ಕಂತೆ ತಂತ್ರಾಂಶ ಸಲಕರಣೆಗಳನ್ನು ತಯಾರಿಸಿ ನೀಡುವ ಸಾಮರ್ಥ್ಯವುಳ್ಳ ಚಿಕ್ಕಚಿಕ್ಕ ಕಂಪನಿಗಳು ಸಾಕಷ್ಟಿವೆ. ಇಂತಹ ಸಾಂಪ್ರದಾಯಿಕ ತಂತ್ರಾಂಶ ತಯಾರಕರು ಎಲ್ಲ ಸವಾಲುಗಳನ್ನು ಸ್ವೀಕರಿಸಿ ದಶಕಗಳ ಕಾಲದಿಂದ ಭಾಷಾ ಉತ್ಪನ್ನಗಳನ್ನು ತಯಾರಿಸಿ ನೀಡಿದ್ದಾರೆ. ತಂತ್ರಜ್ಞಾನಗಳ ಭರದ ಬೀಸಿನ ನಡುವೆ ಕಂಪನಿಗಳು ತಮ್ಮ ಅಸ್ತಿತ್ವಕ್ಕಾಗಿ ಹೋರಾಡುವುದು ಅನಿವಾರ್ಯವಾಗಿದೆ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...