ವಿಷಯಕ್ಕೆ ಹೋಗಿ

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ





ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ಗಣಕಯಂತ್ರಗಳುಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ, ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ಕಂಪ್ಯೂಟರ್ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು, ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.

          ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ, ಕಂಪ್ಯೂಟರ್ ತಜ್ಞರಾದ ಪ್ರೊ||ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ಪ್ರಾಥಮಿಕ ಮಾಹಿತಿಗಳೊಂದಿಗೆ, ಪ್ರಮುಖವಾಗಿ ಡಾಸ್ ಕಾರ್ಯಾಚರಣೆ ವ್ಯವಸ್ಥೆಯನ್ನು ವಿವರವಾಗಿ ಇದರಲ್ಲಿ ತಿಳಿಸಲಾಗಿದೆ ಹಾಗೂ ಬೇಸಿಕ್ ಪ್ರೋಗ್ರಾಮಿಂಗ್ ಕುರಿತು ವಿವರಿಸಲಾಗಿದೆ.        ಕನ್ನಡ ಪುಸ್ತಕ ಪ್ರಾಧಿಕಾರವು ೧೯೯೫ರಲ್ಲಿ ಮೂಲಭೂತ ಶೈಕ್ಷಣಿಕ ಪುಸ್ತಕ ಮಾಲೆಯ ಅಡಿಯಲ್ಲಿ ನಿಮಗಾಗಿ ಗಣಕಗಳುಎಂಬ ಪುಸ್ತಕವನ್ನು ಪ್ರಕಟಿಸಿದೆ. ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗಾಲಯದ (ಎನ್‌ಎಎಲ್) ವಿಜ್ಞಾನಿ ಶ್ರೀ ಬಿ.ಬಿ.ಚಿನ್ಮಯ ಕುಮಾರ್ ಈ ಪುಸ್ತಕವನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ಪ್ರಾಥಮಿಕ ವಿಷಯಗಳು ಮತ್ತು ಅವುಗಳ ಕಾರ್ಯವೈಖರಿ, ಕೆಲವು ತಂತ್ರಾಂಶಗಳ ರಚನೆ ಕುರಿತು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಕನ್ನಡದಲ್ಲಿ ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದ ಕುರಿತ ಸಿಲಿಕಾನ್ ಸಿಟಿಮಾಸಿಕ ಪತ್ರಿಕೆಯು (ದಿಕ್ಸೂಚಿ ಪ್ರಕಾಶನ) ೨೦೦೦ರಲ್ಲಿ ಎರಡು ವಿಶೇಷಾಂಕಗಳನ್ನು ಹೊರತಂದಿದೆ. ಯಾವುದೇ ಪಠ್ಯಪುಸ್ತಕಗಳಿಗೂ ಕಡಮೆಯಿಲ್ಲದಂತೆ, ವಿಷಯ ಮಾಹಿತಿಯನ್ನು ಅತಿವಿಸ್ತಾರವಾಗಿ ನೀಡಿರುವ ಈ ಎರಡೂ ಸಂಚಿಕೆಗಳು ಸಂಗ್ರಹಯೋಗ್ಯ ಸಂಚಿಕೆಗಳಾಗಿದ್ದು, ಕನ್ನಡದಲ್ಲಿ ಕಂಪ್ಯೂಟರ್ ಕುರಿತ ವಿವರಗಳನ್ನು ಇತಿಹಾಸದ ಸಹಿತ ನೀಡಿವೆ. ಯಂತ್ರಾಂಶ, ತಂತ್ರಾಂಶಗಳು, ಇಂಟರ್‌ನೆಟ್, ಸೈಬರ್ ಲೋಕ ಪ್ರೋಗ್ರಾಮಿಂಗ್ ಭಾಷೆಗಳು ಇವುಗಳು ಮೊದಲ ವಿಶೇಷಾಂಕದ ಪ್ರಮುಖ ವಿಷಯಗಳಾದರೆ, ಎರಡನೆಯ ವಿಶೇಷಾಂಕದಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂಗಳು ಮತ್ತು ಇತರೆ ಕಾರ್ಯಾಚರಣೆ ವ್ಯವಸ್ಥೆಗಳ ಕುರಿತು ವಿಸ್ತೃತವಾದ ವಿವರಣೆಯು ಲಭ್ಯವಿದೆ.

          ಕನ್ನಡ ಗಣಕ ಪರಿಷತ್ತು ೧೯೯೯ರಲ್ಲಿ ಕನ್ನಡ ಗಣಕ ಕೀಲಿಮಣೆ ವಿನ್ಯಾಸಮತ್ತು ಕನ್ನಡ ಗಣಕ ಪದಕೋಶಎಂಬ ಎರಡು ಕಿರುಪುಸ್ತಕಗಳನ್ನು ಪ್ರಕಟಿಸಿದೆ. ಕನ್ನಡಕ್ಕೊಂದು ಶಿಷ್ಟ ಕೀಲಿಮಣೆ ವಿನ್ಯಾಸವನ್ನು ಸರಕಾರವು ಘೋಷಿಸಿರುವ ಕುರಿತ ಮಾಹಿತಿ ಮತ್ತು ಈ ವಿನ್ಯಾಸವನ್ನು ಬಳಸುವ ಕ್ರಮಗಳನ್ನು ವಿವರಿಸಲಾಗಿದೆ. ಕಂಪ್ಯೂಟರ್ ಕಾರ್ಯಕ್ಷೇತ್ರದಲ್ಲಿ ಬಳಕೆಯಲ್ಲಿರುವ ಕೆಲವು ಪ್ರಮುಖ ಪದಗಳಿಗೆ ಕನ್ನಡದ ಸಮಾನಾಂತರ ಪದಗಳನ್ನು ಪದಕೋಶದಲ್ಲಿ ನೀಡಲಾಗಿದೆ. ಪ್ರೊ|| ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ೨೦೦೨ರಲ್ಲಿ ಪ್ರಕಟಿತ ಕಂಪ್ಯೂಟರ್ ಪದವಿವರಣ ಕೋಶಕನ್ನಡದ ಪ್ರಥಮ ವಿಸ್ತೃತ ಕಂಪ್ಯೂಟರ್ ಪದವಿವರಣ ಕೋಶವಾಗಿದೆ. ಡಾ|| ಕೆ.ಚಿದಾನಂದ ಗೌಡ ಮತ್ತು ಶ್ರೀ ಚಿ.ವಿ.ಶ್ರೀನಾಥ ಶಾಸ್ತ್ರಿಗಳ ಸಂಪಾದಕತ್ವದಲ್ಲಿ ಇದು ಹೊರಬಂದಿದೆ. ಸಹಲೇಖಕಿಯೊಂದಿಗೆ ಶ್ರೀಮತಿ ಎಸ್.ಕ್ಷಮಾ ರಚಿಸಿರುವ ಕ್ರಾಂತಿಕಾರಿ ಗಣಕಯಂತ್ರ’, ‘ಅದ್ಭುತ ಗಣಕಯಂತ್ರಮತ್ತು ಮಾನವ ಮಿತ್ರ ಗಣಕಗಳುಎಂಬ ಮೂರು ಪುಸ್ತಕಗಳನ್ನು ಕನ್ನಡ ಸಾಹಿತ್ಯ ಪರಿಷತ್ತು ೨೦೦೨ರಲ್ಲಿ ಪ್ರಕಟಿಸಿದೆ. ಕಂಪ್ಯೂಟರ್‌ಗಳ ಇತಿಹಾಸ ಸೇರಿದಂತೆ ಅವುಗಳ ಯಂತ್ರಾಂಶ ಭಾಗಗಳು ಮತ್ತು ಇತರೆ ಉಪಯೋಗಗಳ ಕುರಿತು ಸಾಮಾನ್ಯ ಓದುಗರನ್ನು ಉದ್ದೇಶಿಸಿ ಈ ಪುಸ್ತಕಗಳನ್ನು ರಚಿಸಲಾಗಿದೆ.

          ನವದೆಹಲಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ಸಂಸ್ಥೆಯ ಒಂದು ಘಟಕವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್, ಕಮ್ಯುನಿಕೇಷನ್ ಅಂಡ್ ಇನ್‌ಫಾರ‍್ಮೇಷನ್ ರಿಸೋರ್ಸಸ್ತನ್ನ ಎಲ್ಲರಿಗೂ ಐಟಿ ಸೀರೀಸ್ಎಂಬ ಮಾಲಿಕೆಯಲ್ಲಿ ಭಾರತೀಯ ಭಾಷೆಗಳಲ್ಲಿ ಹಲವು ಪುಸ್ತಕಗಳನ್ನು ೨೦೦೪ರಲ್ಲಿ ಪ್ರಕಟಿಸಿದೆ. ಅವುಗಳಲ್ಲಿ ಕನ್ನಡದ ಪುಸ್ತಕಗಳು ಸಹ ಇವೆ. ಕನ್ನಡದಲ್ಲಿ ವಿಂಡೋಸ್ ಮತ್ತು ಎಂ.ಎಸ್.ಆಫೀಸ್‌ನ ವರ್ಡ್, ಎಕ್ಸೆಲ್ ಮತ್ತು ಪವರ್‌ಪಾಯಿಂಟ್, ಸಿ, ಸಿ++ ಮತ್ತು ವಿಷುಅಲ್‌ಬೇಸಿಕ್ ಕುರಿತ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಕನ್ನಡ ಭಾಷೆಯ ಅನುವಾದವನ್ನು ನಿರ್ವಹಿಸಿರುವವರು ಡಾ.ವಿಕ್ರಮ ವಿ.ಅಗಡಿ ಹಾಗೂ ಈ ಕನ್ನಡ ಪುಸ್ತಕಗಳ ಸಂಪಾದಕತ್ವವನ್ನು ವಹಿಸಿದವರು ಡಾ.ಆರ್.ದೊರೆಸ್ವಾಮಿ.

          ಭಾರತ ಸರಕಾರದ ಹಿಂದಿನ ವಿದ್ಯುನ್ಮಾನ ಇಲಾಖೆ ಹಾಗೂ ಇಂದಿನ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಭಾರತೀಯ ಭಾಷೆಗಳ ಕಂಪ್ಯೂಟಿಂಗ್ ಕುರಿತಾಗಿ ಹಲವಾರು ಸಂಶೋಧನಾತ್ಮಕ ಯೋಜನೆಗಳನ್ನು ಕೈಗೊಂಡಿದೆ. ಭಾರತೀಯ ಭಾಷಾ ತಂತ್ರಜ್ಞಾನಗಳು, ಲಿಪಿತಂತ್ರಜ್ಞಾನಗಳು, ತಂತ್ರಾಂಶ ಸೌಲಭ್ಯಗಳು ಕುರಿತಾದ ಮಾಹಿತಿಯನ್ನು ಕ್ರೋಢೀಕರಿಸಿ ಪ್ರಕಟಿಸುವ ವಿಶ್ವಭಾರತ@ಟಿಡಿಐಎಲ್ಎಂಬ ಹೆಸರಿನಲ್ಲಿ ನಿಯತಕಾಲಿಕಗಳನ್ನು ಹೊರತರಲಾಗಿದೆ. ಟೆಕ್ನಾಲಜಿ ಡೆವಲಪ್‌ಮೆಂಟ್ ಫ಼ಾರ್ ಇಂಡಿಯನ್ ಲಾಂಗ್ವೇಜಸ್ (ಟಿಡಿಐಎಲ್) ಎಂಬ ಹೆಸರಿನಲ್ಲಿ ಹಲವು ಯೋಜನೆಗಳಲ್ಲಿ ಇಂತಹ ಮಾಹಿತಿ ಪ್ರಕಟಣೆ ಸಹ ಒಂದಾಗಿದೆ. ಈ ನಿಯತಕಾಲಿಕೆಯು ಇಂಗ್ಲಿಷ್ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿದೆ. (http://tdil.meity.gov.in/Publications/Vishwabharat.aspx) ವಿವಿಧ ಕಾಲಘಟ್ಟದಲ್ಲಿ ಬಳಕೆಗೆ ಬಂದ ಕನ್ನಡ ಭಾಷೆಯ ಕಂಪ್ಯೂಟಿಂಗ್ ಸೌಲಭ್ಯಗಳು, ತಂತ್ರಾಂಶಗಳು, ಕನ್ನಡ ಭಾಷಾ ತಂತ್ರಜ್ಞಾನಗಳು ಇತ್ಯಾದಿ ಕುರಿತಾಗಿ ಈ ಪತ್ರಿಕೆಯ ವಿವಿಧ ಸಂಚಿಕೆಗಳಲ್ಲಿ ಮಾಹಿತಿಗಳು ಲಭ್ಯವಿವೆ. ಈ ಮಾಹಿತಿಗಳು ತಾಂತ್ರಿಕ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಿವೆ, ಹೊರತಾಗಿ, ಸಾಮಾನ್ಯ ಬಳಕೆದಾರರಿಗೆ ಬಳಕೆಯ ಮಾಹಿತಿಯನ್ನು ಒದಗಿಸಿಲ್ಲ. ಆದರೂ ಸಹ, ಕನ್ನಡ ಭಾಷೆಯ ತಂತ್ರಜ್ಞಾನಗಳು ಮತ್ತು ತಂತ್ರಾಂಶಗಳ ಕುರಿತು ಪ್ರಾಥಮಿಕ ಮಾಹಿತಿಗಳು ಅವುಗಳಲ್ಲಿ ದೊರೆಯುತ್ತವೆ.

          ಎರಡು ದಶಕಗಳ ಹಿಂದೆ, ಕಂಪ್ಯೂಟರ್ ಶಿಕ್ಷಣದ ಮಾಹಿತಿ ಸಿಂಧುಕಾರ್ಯುಕ್ರಮ ಆರಂಭಗೊಂಡಿತ್ತು. ಕನ್ನಡ ಮಾಧ್ಯಮದ ಪ್ರೌಢಶಾಲೆಗಳಲ್ಲಿ ಕೇವಲ ಪಠ್ಯಪುಸ್ತಕಗಳು ಮಾತ್ರ ಕನ್ನಡದಲ್ಲಿದ್ದವೇ ಹೊರತು ಕಂಪ್ಯೂಟರ್ ಬಳಕೆಯ ಶಿಕ್ಷಣವು ಪೂರ್ಣವಾಗಿ ಇಂಗ್ಲಿಷ್‌ನಲ್ಲಿ ನಡೆದಿದೆ.  ಆದಾಗ್ಯೂ, ‘ಎನ್‌ಐಐಟಿಮತ್ತು ಆಪ್‌ಟೆಕ್ಸಂಸ್ಥೆಗಳು ಸಿದ್ಧಪಡಿಸಿದ್ದ ಕಂಪ್ಯೂಟರ್ ಶಿಕ್ಷಣದ ಕನ್ನಡ ಪಠ್ಯಪುಸ್ತಕಗಳು ಉತ್ತಮವಾಗಿದ್ದವು. ಅದೇ ಕಾಲಘಟ್ಟದಲ್ಲಿ, ಪ್ರಥಮ ದ್ವಿತೀಯ ಪಿ.ಯು.ಸಿ.ಯ ಕಂಪ್ಯೂಟರ್ ಅಪ್ಲಿಕೇಷನ್ವಿಷಯದ ಪಠ್ಯಕ್ರಮಕ್ಕೆ ಅನುಗುಣವಾಗಿ ರಚಿಸಲಾದ ಪುಸ್ತಕವನ್ನು ಡಾ.ಅ.ಶ್ರೀಧರ್ ಅನುವಾದಿಸಿ ಪ್ರಕಟಿಸಿದ್ದರು. ಕನ್ನಡದಲ್ಲಿ ಕಂಪ್ಯೂಟರ್ ಕಲಿಕಾ ಅಭ್ಯಾಸಕ್ಕಾಗಿ ಎಚ್.ಶಿವರಾಂ ವಿರಚಿತ ವಿನ್ ಕಂಪ್ಯೂಟರ‍್ಸ್’; ‘ಮೇಜಿನ ಮೇಲಿನ ಪ್ರಕಾಶನ’ (ಡಿಟಿಪಿ) ವಿನ್ ಯುವರ್ ಪಿ.ಸಿ’ (ಯಂತ್ರಾಂಶ ತಂತ್ರಾಂಶಗಳ ತೊಡಕುಗಳ ನಿವಾರಣೆ ಕುರಿತ ಕೈಪಿಡಿ) ಇವುಗಳು ಜನಪ್ರಿಯ ಪ್ರಕಟಣೆಗಳ ಹಲವಾರು ಪರಿಷ್ಕೃತ ಆವೃತ್ತಿಗಳು ಹೊರಬಂದಿವೆ.
ಕನ್ನಡ ತಂತ್ರಜ್ಞಾನ ಲೇಖಕ ಶ್ರೀ ಟಿ.ಜಿ.ಶ್ರೀನಿಧಿ ಕಂಪ್ಯೂಟರ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ನುಡಿಯ ನಾಳೆಗಳು’,‘ ಕಂಪ್ಯೂಟರ್ ತಂತ್ರಜ್ಞಾನ ಪದವಿವರಣ ಕೋಶ’, ‘ಟೆಕ್ಸ್ಟ್‌ಬುಕ್ ಅಲ್ಲ, ಇದು ಟೆಕ್ ಬುಕ್!’, ‘ಕಂಪ್ಯೂಟರ್‌ಗೆ ಪಾಠ ಹೇಳಿ...’, ‘ಕ್ಲಿಕ್ ಮಾಡಿ ನೋಡಿ!’, ‘ಕಂಪ್ಯೂಟರ್ ಪ್ರಪಂಚ’, ‘ತಿನ್ನಲಾಗದ ಬಿಸ್ಕತ್ತು ನುಂಗಲಾಗದ ಟ್ಯಾಬ್ಲೆಟ್ಟು’, ಫ್ಲಾಪಿಯಿಂದ ಫೇಸ್‌ಬುಕ್‌ವರೆಗೆ’, ‘ವೆಬ್ ವಿಹಾರ’, ‘ಅವಕಾಶ ಅಪಾರ’ - ಶ್ರೀನಿಧಿಯವರ ಈ ಪುಸ್ತಕಗಳನ್ನು ಇ-ಜ್ಞಾನ http://www.ejnana.com/ ಜಾಲತಾಣದಿಂದ ಆನ್‌ಲೈನ್‌ನಲ್ಲಿ ಖರೀದಿಸಬಹುದು. ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಕಟಿಸಲಾದ ಕಂಪ್ಯೂಟರ್ ಮತ್ತು ಕನ್ನಡಪುಸ್ತಕವನ್ನು ಉಚಿತ ಪುಸ್ತಕ ಸಂಸ್ಕೃತಿಅಡಿಯಲ್ಲಿ http://freebookculture.com/?p=37#comment-131 ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಕಂಪ್ಯೂಟರ್ ವಿಷಯದ ಕುರಿತು ಪುಸ್ತಕ ಮುದ್ರಣಕ್ಕಿಂತ ಈಗ ಡಿಜಿಟಲ್ ಪ್ರಕಟಣೆಗಳು ಹೆಚ್ಚಾಗಿವೆ. ಕನ್ನಡದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ವಿಷಯಕ್ಕೆ ಸಂಬಂಧಿಸಿದ ಇತಿಹಾಸ ಮತ್ತು ಕನ್ನಡ ಮತ್ತು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಆಸಕ್ತಿಕರ ಬಿಡಿ ಲೇಖನಗಳು ಡಾ.ಯು.ಬಿ.ಪವನಜರವರ ವಿಶ್ವಕನ್ನಡhttp://vishvakannada.com ಜಾಲತಾಣದಲ್ಲಿ ಲಭ್ಯವಿವೆ. ಕನ್ನಡದ ಸ್ವತಂತ್ರ (ಮುಕ್ತ) ತಂತ್ರಾಂಶಗಳ ಕುರಿತಾಗಿ ಹಲವು ಮಾಹಿತಿಗಳು ಓಂಶಿವಪ್ರಕಾಶ್ ಎಚ್.ಎಲ್.ರವರ ಲಿನಕ್ಸಾಯಣhttps://www.linuxaayana.net/ ಜಾಲತಾಣದಲ್ಲಿ ಲಭ್ಯ. ಕನ್ನಡ ಕಂಪ್ಯೂಟರ್ ಮತ್ತು ತಂತ್ರಜ್ಞಾನ ಕುರಿತ ಹಲವಾರು ಉಪಯುಕ್ತ ಬ್ಲಾಗ್‌ಗಳು ಸಹ ಇವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...