ವಿಷಯಕ್ಕೆ ಹೋಗಿ

56. ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳು : ಉಚಿತ ತಂತ್ರಾಂಶಗಳ ರೀ-ಇಂಜಿನಿಯರಿಂಗ್









ಕನ್ನಡದ ಉಚಿತ ತಂತ್ರಾಂಶಗಳು ‘ರೀ-ಇಂಜಿನಿಯರಿಂಗ್’ ಮಾಡಲಾದವು ಎಂಬುದು ಬಹುತೇಕ ಕನ್ನಡ ತಂತ್ರಾಂಶ ತಯಾರಕರ ಆರೋಪವಾಗಿದೆ. ಇದರಲ್ಲಿ ಹುರುಳಿಲ್ಲ ಎನ್ನುವಂತಿಲ್ಲ. ಯಾವುದೇ ಫಾಂಟುಗಳ ಗ್ಲಿಫ್‌ಗಳನ್ನು (ಅಕ್ಷರಭಾಗಗಳು) ಎರಡು ರೀತಿಯಲ್ಲಿ ಮಾರ್ಪಡಿಸಬಹುದು. ಒಂದು, ಅದರ ಸಂಕೇತ ಸಂಖ್ಯೆಯನ್ನು ಬದಲಿಸುವುದು ಮತ್ತು ಅದರ ರೂಪವನ್ನು ತಿದ್ದಿ ಬೇರೊಂದು ರೂಪವನ್ನು ನೀಡಿ ತಮ್ಮದೇ ಸ್ವಂತ ಫಾಂಟು ಎಂದು ಇತರರ ಬಳಕೆಗೆ ಉಚಿತವಾಗಿಯೂ ನೀಡಬಹುದು ಅಥವಾ ಮಾರಾಟವನ್ನೂ ಮಾಡಬಹುದು. ಇವೇ ಅಕ್ಷರಭಾಗಗಳು ಪೂರ್ಣಾಕ್ಷರವನ್ನಾಗಿ ರೂಪುಗೊಳ್ಳುವಂತೆ ತಮ್ಮದೇ ಒಂದು ಕೀ-ಬೋರ್ಡ್ ಡ್ರೈವರ್ ಅನ್ನು ಸಿದ್ಧಪಡಿಸುವುದು. ಮೊದಲೇ ಸಿದ್ಧಗೊಂಡ ತಂತ್ರಾಂಶಗಳ ಬಿಡಿಭಾಗಗಳನ್ನು ತಮ್ಮಿಚ್ಛೆಯಂತೆ ಬದಲಾಯಿಸಿಕೊಂಡು ಬಳಸುವುದನ್ನೇ ತಾಂತ್ರಿಕ ಪರಿಭಾಷೆಯಲ್ಲಿ ರೀ-ಇಂಜಿನಿಯರಿಂಗ್ ಎನ್ನಲಾಗಿದೆ. ಹೀಗೆ ಮಾಡುವುದು ಕಾನೂನುಬಾಹಿರವಾದರೂ. ಇಂತಹ ರೀ-ಇಂಜಿನಿಯರಿಂಗ್ ಸಾಬೀತುಪಡಿಸಲೂ ಸಾಧ್ಯವಿಲ್ಲ. ಹೀಗಾಗಿ, ಇಂಥದ್ದನ್ನು ತಡೆಗಟ್ಟಲೂ ಆಗುವುದಿಲ್ಲ.






೨೦೦೪ರ ಆಗಸ್ಟ್ ತಿಂಗಳಲ್ಲಿ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿ ಸಮಸ್ಯೆಗಳ ಕುರಿತು ಹಲವು ಲೇಖನಗಳು, ಅವುಗಳಿಗೆ ಪ್ರತಿಕ್ರಿಯೆಗಳ ಸರಣಿ ವಾದವಿವಾದಗಳು ಪ್ರಕಟಗೊಂಡವು. ಕನ್ನಡ ತಂತ್ರಾಂಶ ಅಭಿವೃದ್ಧಿಯು ದಿಕ್ಕುತಪ್ಪಿದೆ, ಸಮಸ್ಯೆಗಳನ್ನು ಪರಿಹರಿಸುವ ಬದಲಾಗಿ ಮತ್ತಷ್ಟು ಗೊಂದಲಗಳನ್ನು ಸೃಷ್ಟಿಸಲಾಗಿದೆ ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಖ್ಯಾತ ಬರಹಗಾರ, ಲೇಖಕ ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಈ ಚರ್ಚೆಯನ್ನು ಆರಂಭಿಸಿದರು. ಈ ಸರಣಿ ಚರ್ಚೆಯಲ್ಲಿ ಅವರ ಅಭಿಪ್ರಾಯಗಳಿಗೆ ಪರ ಮತ್ತು ವಿರೋಧಗಳು ವ್ಯಕ್ತವಾಗಿ, ಕೆಲವು ಅಂಶಗಳು ಕನ್ನಡಿಗರಿಗೆ ಸ್ಪಷ್ಟಗೊಂಡವು. ಅವುಗಳೆಂದರೆ : ‘ನುಡಿ’ ಕನ್ನಡ ತಂತ್ರಾಂಶ ತಯಾರಿಕೆಯು ತಳಮಟ್ಟದಿಂದ ಆದದ್ದಲ್ಲ, ‘ಬರಹ’ ಹೆಸರಿನ ಕನ್ನಡ ಉಚಿತ ಲಿಪಿ ತಂತ್ರಾಂಶದ ಫಾಂಟ್‌ನ್ನು ನುಡಿಯಲ್ಲಿ ಬಳಸಿಕೊಳ್ಳಲಾಗಿದೆ. ಬರಹದವರು ಆಕೃತಿಯ ಫಾಂಟನ್ನು ಅವರ ಅನುಮತಿ ಪಡೆಯದೆ ಬಳಸಿಕೊಂಡಿದ್ದಾರೆ ಎಂಬ ಅಂಶಗಳು ಹೊರಬಂದವು. ಇದರಿಂದಾಗಿ, ತಂತ್ರಾಂಶ ಕದ್ದ ಆರೋಪ ಕನ್ನಡ ಗಣಕ ಪರಿಷತ್ತಿನ (ಕಗಪ) ಮೇಲೆ ಬಂದಿತು. ತಮ್ಮ ತಂತ್ರಾಂಶಗಳ ಮಾರಾಟ ಕುಸಿದ ಪರಿಣಾಮವಾಗಿ, ಫಾಂಟ್ ಬಳಸಿರುವ ಆರೋಪವನ್ನು ತಂತ್ರಾಂಶ ತಯಾರಕರು ದೊಡ್ಡದು ಮಾಡಿದರು. ಲೋಕಾಯುಕ್ತಕ್ಕೆ ದೂರು ನೀಡುವ ಮತ್ತು ನ್ಯಾಯಾಲಯದಲ್ಲಿ ದಾವೆ ಹೂಡಿದರು. ಈ ವಾದವಿವಾದಗಳಿಂದಾಗಿ, ಕಗಪ ಎಂಬುದು ಕನ್ನಡ ಸಾಹಿತ್ಯ ಪರಿಷತ್ತಿನ ರೀತಿಯಲ್ಲಿ ಕಂಪ್ಯೂಟರ್ ಮತ್ತು ಕನ್ನಡ ಕ್ಷೇತ್ರದ ಕನ್ನಡಿಗರ ಪ್ರಾತಿನಿಧಿಕ ಪರಿಷತ್ತು ಅಲ್ಲ, ಅದು ಕೆಲವೇ ಜನ ಸದಸ್ಯರಿರುವ ಒಂದು ಕನ್ನಡ ಮತ್ತು ಕಂಪ್ಯೂಟರ್ ಕ್ಷೇತ್ರದ ಆಸಕ್ತರ ಒಂದು ಗುಂಪು ಎಂಬ ವಾಸ್ತವವು ಹೊರಜಗತ್ತಿಗೆ ತಿಳಿದುಬಂತು.



ಈ ವಿವಾದಗಳ ಹಿಂದೆ ಹಲವು ವಾಸ್ತವಾಂಶಗಳಿವೆ. ಕನ್ನಡ ಲಿಪಿ ತಂತ್ರಾಂಶದ ಮಾರುಕಟ್ಟೆಯಲ್ಲಿ ರಾಜ್ಯ ಸರಕಾರವೇ ಅತಿದೊಡ್ಡ ಗ್ರಾಹಕ. ತಂತ್ರಾಂಶ ತಯಾರಕರ ದೃಷ್ಟಿಯಲ್ಲಿ ಏನೇನೂ ತಾಂತ್ರಿಕ ಪರಿಣಿತಿಯಿಲ್ಲದ ಕಗಪ ತಮ್ಮ ತಂತ್ರಾಂಶಗಳನ್ನು ಪ್ರಮಾಣೀಕರಿಸುವ ಸಂಸ್ಥೆ ಎಂದು ಸರಕಾರದಿಂದ ಘೋಷಿಸಲ್ಪಟ್ಟಾಗ, ತಂತ್ರಾಂಶ ತಯಾರಕರೂ ಆಗಿದ್ದ ಕ.ಗ.ಪರಿಷತ್ತಿನ ಕಾರ್ಯಕಾರಿ ಸದಸ್ಯರಾದವರಲ್ಲಿ ಆಂತರಿಕವಾಗಿ ಆರಂಭವಾದ ಅಸಮಾಧಾನವು ಕ್ರಮೇಣ ಬಹಿರಂಗಗೊಂಡಿತು. ‘ನುಡಿ’ ಕನ್ನಡ ಲಿಪಿ ತಂತ್ರಾಂಶವು ಉಚಿತವಾಗಿ ದೊರೆತ ಪರಿಣಾಮ ತಯಾರಕರ ಮಾರುಕಟ್ಟೆಯನ್ನು ಗಣನೀಯವಾಗಿ ಘಾಸಿಗೊಂಡು, ಅವರ ಆದಾಯ ಕುಸಿದದ್ದೇ ಅಸಮಾಧಾನಕ್ಕೆ ಪ್ರಮುಖ ಕಾರಣ. ಲಿಪಿತಂತ್ರಾಂಶದ ಮಾರಾಟವನ್ನು ಕೈಬಿಟ್ಟು ಆನ್ವಯಿಕ ತಂತ್ರಾಂಶದ ಕಡೆಗೆ ಗಮನ ಹರಿಸುವಂತೆ ಸರಕಾರದ ಮಟ್ಟದಲ್ಲಿ ನಡೆದ ವಿವಿಧ ಸಭೆಗಳಲ್ಲಿ ತಂತ್ರಾಂಶ ತಯಾರಕರಿಗೆ ಕಿವಿಮಾತನ್ನು ಹೇಳಲಾಗಿತ್ತು. ಅದರಲ್ಲಿ ಕನ್ನಡ ಗಣಕ ಪರಿಷತ್ತು ಸಹ ಪ್ರಮುಖ ಪಾತ್ರವೂ ವಹಿಸಿತ್ತು. ಆದರೆ, ಯಾವುದೇ ತಂತ್ರಾಂಶ ತಯಾರಕರಿಗೂ ಅವರ ನಿರೀಕ್ಷೆಯ ಮಟ್ಟದಲ್ಲಿ ಸರಕಾರದ ಬೆಂಬಲ ದೊರೆಯಲಿಲ್ಲ ಎಂದು ಖಾಸಗಿ ಸಂಸ್ಥೆಗಳು ಎಲ್ಲರಲ್ಲಿಯೂ ತಮ್ಮ ಅಸಮಾಧಾನವನ್ನು ತೋಡಿಕೊಳ್ಳತೊಡಗಿದರು. ಹಲವಾರು ವರ್ಷಗಳಿಂದ ವೃತ್ತಿಪರ ಪ್ರಾವೀಣ್ಯತೆ ಇದ್ದು ತಂತ್ರಾಂಶಗಳನ್ನು ತಯಾರಿಸಿರುವ ಸಂಸ್ಥೆಗಳ ತಂತ್ರಾಂಶಗಳನ್ನು ಪ್ರಮಾಣೀಕರಿಸುವ ಕೆಲಸವು ಅಗಾಧವಾದ ತಾಂತ್ರಿಕ ಪರಿಣತಿಯನ್ನು ನಿರೀಕ್ಷಿಸುತ್ತದೆ. ಗಣಕ ಪರಿಷತ್ತಿಗೆ ಅಂತಹ ಪರಿಣತರ ಪೂರ್ಣ ಪ್ರಮಾಣದ ನೆರವು ಇಲ್ಲ ಮತ್ತು ಪರಿಷತ್ತಿಗೆ ಅಂತಹ ಸಾಮರ್ಥ್ಯವಿರಲಿಲ್ಲ. ಪರಿಷತ್ತು ಪ್ರಮಾಣೀಕರಣ ಹೊಣೆಗಾರಿಕೆಯನ್ನು ವಹಿಸಿಕೊಂಡು, ತಂತ್ರಾಂಶ ತಯಾರಿಕರಿಂದ ಅನೇಕ ಆರೋಪಗಳನ್ನು ಹೊತ್ತುಕೊಳ್ಳುವಂತಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಸಭೆಯೊಂದರಲ್ಲಿ ಕಗಪದ ತಂತ್ರಾಂಶ ಪ್ರಮಾಣೀಕರಣ ಹೊಣೆಗಾರಿಕೆಯನ್ನು ಉದ್ದೇಶಿಸಿ ಪ್ರಾಜ್ಞರೊಬ್ಬರು ‘ಪರಿಷತ್ತು ಸುಮ್ಮನೆ ಸೀಲ್ ಒತ್ತಿಕೊಂಡು ಕೂತರೆ ಪ್ರಯೋಜನವಿಲ್ಲ ಸಂಶೋಧನಾತ್ಮಕ ಕೆಲಸ ಮಾಡಬೇಕು’ ಎಂದು ಮಾರ್ಮಿಕವಾಗಿ ನುಡಿದಿದ್ದರು. ಮುಂದೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿರ್ಣಯದ ಅನುಸಾರ ಕಗಪಕ್ಕೆ ನೀಡಲಾಗಿದ್ದ ತಂತ್ರಾಂಶ ಪ್ರಮಾಣೀಕರಣದ ಹೊಣೆಗಾರಿಕೆಯನ್ನು ಸರ್ಕಾರವು ಹಿಂಪಡೆಯಿತು.






ಕಗಪ ಪರ್ಯಾಯ ತಂತ್ರಾಂಶ ತಯಾರಕಾ ಕಂಪನಿಯಾಗಿ ಮಾರ್ಪಡುವುದು ಬೇಡ, ಕನ್ನಡಕ್ಕಾಗಿ ಇಂದು ತುರ್ತಾಗಿ ಅಗತ್ಯವಾಗಿರುವ ತಾಂತ್ರಿಕ ಸಂಶೋಧನಾ ಕೆಲಸಗಳನ್ನು ಅದು ನಿರ್ವಹಿಸಿದರೆ ಸಾಕು. ಆ ಕೆಲಸವೇ ಅಗಾಧವಾಗಿದೆ. ಎಂಬುದು ಹಲವಾರು ಕಾರ್ಯಕಾರಿ ಸಮಿತಿ ಸದಸ್ಯರ ಅಭಿಪ್ರಾಯವಾಗಿತ್ತು. ‘ನುಡಿ’ ಕದ್ದದ್ದು ಎಂಬ ವಿಚಾರವಾಗಿ ಮತ್ತು ಕಗಪದ ಕುರಿತು ಅಂತರಜಾಲದಲ್ಲಿ ಬಹಳಷ್ಟು ಚರ್ಚೆಗಳು, ವಾಗ್ಯುದ್ಧಗಳು ನಡೆದ ಪರಿಣಾಮವಾಗಿ ‘ಬರಹ’ದ ಶ್ರೀ ಶೇಷಾದ್ರಿವಾಸುರವರು ವಾಸ್ತವವನ್ನು (ಅಂದರೆ, ಬರಹದಲ್ಲಿ ಆಕೃತಿ ಫಾಂಟನ್ನು ಬಳಸಿಕೊಂಡಿರುವುದು) ಒಪ್ಪಿಕೊಂಡು ಆಕೃತಿಯ ಶ್ರೀ ಆನಂದ್‌ರವರಿಗೆ ಇ-ಮೇಲ್ ಮಾಡಿದ್ದಾರೆ ಮತ್ತು ಇದನ್ನು ತಡವಾಗಿ ಒಪ್ಪಿಕೊಳ್ಳುತ್ತಿರುವುದಕ್ಕೆ ಕ್ಷಮೆಯನ್ನೂ ಸಹ ಕೋರಿದ್ದಾರೆ. ನುಡಿಯಲ್ಲಿ ಬರಹದ ಫಾಂಟನ್ನೇ ಆರಂಭದಲ್ಲಿ ಬಳಸಿಕೊಂಡಿದ್ದು ನಿಜ ಎಂದು ಒಪ್ಪಿಕೊಳ್ಳುವ ಮೂಲಕ ಕಗಪ ಎಲ್ಲ ವಿವಾದಕ್ಕೆ ಮತ್ತು ಚರ್ಚೆಗಳಿಗೆ ಮಂಗಳ ಹಾಡಬಹುದಿತ್ತು. ಕಗಪದ ಅಂದಿನ ಪ್ರಧಾನ ಕಾರ್ಯದರ್ಶಿ ‘ನುಡಿ’ ಸಿದ್ಧಗೊಂಡಿರುವ ಹಿನ್ನೆಲೆಯನ್ನು ಪತ್ರಿಕಾ ಸಂದರ್ಶನದಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ. ತಂತ್ರಾಂಶ ಕದ್ದದ್ದು ಎಂಬ ಆರೋಪ ಏಕೆ ಬಂತು ಎಂಬ ಸಂದರ್ಶಕರ ಪ್ರಶ್ನೆಗೆ ಉತ್ತರಿಸಿರುವ ಅವರು "ಹಿಂದೆ ಹೆಣ್ಣು ಮಕ್ಕಳು ಉರುವಲು ಒಲೆಗಳ ಮೇಲೆ ಅಡುಗೆ ಮಾಡಲು ಬಹಳ ವೇಳೆ ಹಿಡಿಯುತ್ತಿತ್ತು. ಈಗ ಕುಕ್ಕರ್ ಕಾಲ. ಹಾಗೆಂದು ಕುಕ್ಕರ್ ಅನ್ನು ದೂರಿದರೆ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ. ಮತ್ತು "ನಮ್ಮ ಅದೃಷ್ಟಕ್ಕೆ ಈ ಕಾಲದಲ್ಲಿ ಕಂಪ್ಯೂಟರ್ ಕ್ಷೇತ್ರದಲ್ಲಿ ಆದ ಬೆಳವಣಿಗೆಯೇ ನಮ್ಮ ನೆರವಿಗೆ ಬಂತು ಎಂದು ಮಾತ್ರ ಹೇಳಬಹುದು" ಎಂದಿದ್ದಾರೆ. ಮತ್ತೊಂದು ಪ್ರಶ್ನೆಗೆ ಉತ್ತರಿಸಿರುವ ಅವರು "ಲಿಪಿ ರೂಪಿಸುವ ಸಂಕೇತ ಜನರಿಗೆ ಗೊತ್ತಾದರೆ ಯಾರು ಬೇಕಾದರೂ ಅದನ್ನು (ಲಭ್ಯವಿರುವ ಲಿಪಿ) ‘ಸುಧಾರಿಸಬಹುದು’ ತಮಗೆ ಬೇಕಾದ ರೀತಿಯಲ್ಲಿ ಸುಂದರ ಕನ್ನಡ ಲಿಪಿಯನ್ನು ರೂಪಿಸಿಕೊಳ್ಳಲು ಜನರು ಸ್ವತಂತ್ರರು ನಾವೂ ಈ ದಿಸೆಯಲ್ಲಿ ಕಾರ‍್ಯನಿರತರಾಗಿದ್ದೇವೆ" ಎಂದಿದ್ದಾರೆ.


ಇದೆಲ್ಲಾ ‘ಕನ್ನಡದ ಉದ್ಧಾರಕ್ಕಾಗಿ’ ಎಂಬುದು ಕಗಪದ ಉದಾತ್ತ ಧ್ಯೇಯವಾದರೂ, ಇತರರು ತಯಾರಿಸಿರುವ ಮತ್ತು ಬಳಕೆಗೆ ಲಭ್ಯವಿರುವ ಲಿಪಿಯನ್ನು ಸುಂದರವಾಗಿಸಲು ಜನರು ಸ್ವತಂತ್ರರು ಎಂಬ ಅವರ ಆಭಿಪ್ರಾಯವನ್ನು ಮಾತ್ರ ಯಾರೂ ಒಪ್ಪಲಾರರು. ಯಾವುದೇ ಲಿಪಿಯನ್ನು ತಯಾರಿಸಿರುವವರು ಅವರ ಬೌದ್ಧಿಕ ಆಸ್ತಿ ಹಕ್ಕನ್ನು ಪ್ರತಿಪಾದಿಸಿಯೇ ತೀರುತ್ತಾರೆ. ಅವರ ಅನುಮತಿ ಪಡೆಯದೆ, ಅವರ ಲಿಪಿಯನ್ನು ಅಲ್ಪಸ್ವಲ್ಪ ಬದಲಿಸಿ ಅದನ್ನೇ ಕನ್ನಡ ಭಾಷಾ ಉದ್ಧಾರದ ಹೆಸರಿನಲ್ಲಿ ಎಲ್ಲರಿಗೂ ಉಚಿತವಾಗಿ ಹಂಚುವುದು ನ್ಯಾಯ ಸಮ್ಮತವಲ್ಲ. ಸರಕಾರದಿಂದ ಅನುದಾನವನ್ನು ಪಡೆದೂ ಸಹ, ತಮ್ಮದೇ ಪ್ರತ್ಯೇಕ ಫಾಂಟುಗಳನ್ನು ಸಿದ್ಧಪಡಿಸದೆ, ಉಚಿತ ತಂತ್ರಾಂಶದಲ್ಲಿನ ಫಾಂಟ್‌ಗಳ ಗ್ಲಿಫ್‌ಗಳನ್ನು ತಗೆದುಕೊಂಡು ಸರಕಾರಕ್ಕೇ ನೀಡಿರುವುದು ಅಕ್ಷಮ್ಯ ಎಂಬುದು ತಂತ್ರಾಂಶ ತಯಾರಕರ ಆರೋಪ. ಇಲ್ಲಿ ಉದ್ದೇಶ ಒಳ್ಳೆಯದೇ ಆದರೂ ಮಾರ್ಗ ಒಳ್ಳೆಯದಾಗಿಲ್ಲ, ಉದ್ದೇಶ ಮತ್ತು ಅದನ್ನು ಸಾಧಿಸಲು ಹೊರಟ ಮಾರ್ಗ ಎರಡೂ ಒಳ್ಳೆಯದಾಗಿರಬೇಕು. ಸರ್ಕಾರದ ಅನುದಾನದಿಂದ ಸಿದ್ಧಗೊಂಡಿರುವ ‘ನುಡಿ’ ತಂತ್ರಾಂಶದ ಸೋರ್ಸ್‌ಕೋಡ್ ಮುಕ್ತವಾಗಿರಿಸಬೇಕು ಎಂಬ ದಶಕಗಳ ಬೇಡಿಕೆಗೆ ಇನ್ನೂ ಬೆಂಬಲ ದೊರೆತಿಲ್ಲ. ನುಡಿ ತಂತ್ರಾಂಶದ ೬೪ಬಿಟ್ ಆವೃತ್ತಿ ಸಿದ್ಧಗೊಂಡಿದೆ ಎಂಬ ಸುದ್ದಿಗಳು ವರ್ಷದ ಹಿಂದೆಯೇ ಪ್ರಕಟವಾಗಿದೆ. ಆದರೆ, ಇನ್ನೂ ಬಿಡುಗಡೆಗೆ ಆಗಿಲ್ಲ. ‘ಇದು ಸದ್ಯದಲ್ಲೇ ಬಿಡುಗಡೆ ಆಗಲಿದೆ’ ಎಂದು ಕಗಪದ ಜಾಲತಾಣವು ವರ್ಷಗಳಿಂದ ಭರವಸೆ ನೀಡುತ್ತಲೇ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...