ವಿಷಯಕ್ಕೆ ಹೋಗಿ

49.ಸಮಾಜಮುಖಿ ವಿದ್ಯುನ್ಮಾನ ತಂತ್ರಜ್ಞಾನಕ್ಕೆ ಉಚಿತ ಮತ್ತು ಮುಕ್ತ ತಂತ್ರಾಂಶಗಳ ಕೊಡುಗೆ




ಕಂಪ್ಯೂಟರ್ ಬಳಕೆದಾರರು ಪ್ರತಿಯೊಬ್ಬರೂ ಸಹ ಮಾರುಕಟ್ಟೆಯಲ್ಲಿ ದೊರೆಯುವ, ಹಣಕೊಟ್ಟು ಖರೀದಿಸುವ, ದುಬಾರಿ ತಂತ್ರಾಂಶಗಳನ್ನೇ ಬಳಸಬೇಕಾದರೆ, ದುರ್ಬಲವರ್ಗದವರು, ವಿದ್ಯಾರ್ಥಿಗಳು ಕಂಪ್ಯೂಟರ್‌ಗಳನ್ನು ಬಳಸುವುದೇ ಅಸಾಧ್ಯವಾಗುತ್ತದೆ. ತಂತ್ರಾಂಶ ಬಳಕೆಯನ್ನು ವ್ಯಾಪಕಗೊಳಿಸಲು ಮತ್ತು ಆರ್ಥಿಕವಾಗಿ ದುರ್ಬಲರೂ ಸಹ ಕಂಪ್ಯೂಟರ್‌ಗಳನ್ನು ಬಳಸುವಂತೆ ಪ್ರೇರೇಪಿಸಲು, ಉಚಿತ ಮತ್ತು ಮುಕ್ತ ತಂತ್ರಾಂಶಗಳು ಲಭ್ಯವಿವೆ. ಪೈರಸಿಗೆ ಬೆಂಬಲ ನೀಡದವರು, ಹಣ ನೀಡಿ ಪರವಾನಗಿ ಪಡೆಯಲಾಗದವರು, ಮುಕ್ತ ಮತ್ತು ಉಚಿತ ತಂತ್ರಾಂಶಗಳನ್ನು ಬಳಸುತ್ತಾರೆ. ತಂತ್ರಾಂಶ ಬಳಕೆಯು ಸಮಾಜಮುಖಿಯಾಗಲು ಉಚಿತ ಮತ್ತು ಮುಕ್ತ ತಂತ್ರಾಂಶಗಳು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಿವೆ. ಕನ್ನಡ ಭಾಷಾ ಬಳಕೆಯನ್ನು ಕಂಪ್ಯೂಟರ್‌ಗಳಲ್ಲಿ ಸಮಾಜಮುಖಿಯನ್ನಾಗಿಸಲು ಇಂಥದೇ ಕನ್ನಡದ ಉಚಿತ ಮತ್ತು ಮುಕ್ತ ತಂತ್ರಾಂಶಗಳು ಅಗತ್ಯವಿವೆ.

ಬಳಕೆಯ ಬೆಂಬಲದ ಕೊರತೆಯನ್ನು ಎದುರಿಸುವ ಉಚಿತ ಮತ್ತು ಮುಕ್ತ ತಂತ್ರಾಂಶಗಳು ಮಾಲಕತ್ವ ತಂತ್ರಾಂಶಗಳಿಗಿಂತ ಹೇಗೆ ಭಿನ್ನವಾಗಿವೆ ಎಂಬುದನ್ನೂ ಸಹ ಗಮನಿಸಬೇಕಾಗಿದೆ. ಸಮಾಜವಾದದ ಹಿನ್ನೆಲೆಯಲ್ಲಿ, ಉಚಿತ ಮತ್ತು ಮುಕ್ತ ತಂತ್ರಾಂಶಗಳು ಹೇಗೆ ಉಪಯುಕ್ತವಾಗಿವೆ ಎಂಬುದನ್ನು ತಿಳಿಯಲು ತಂತ್ರಾಂಶ ತಯಾರಿಕಾ ವರ್ಗಗಳು ಮತ್ತು ಅವುಗಳ ಮುಖ್ಯ ಉದ್ದೇಶಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ. 

ತಂತ್ರಾಂಶ ತಯಾರಕರಲ್ಲಿ ಪ್ರಮುಖವಾಗಿ ಎರಡು ವರ್ಗಗಳನ್ನು ಗುರುತಿಸಬಹುದು. ಮೊದಲನೆಯದು, ಮಾರಾಟದ ಉದ್ದೇಶ ಉಳ್ಳ ಮತ್ತು ಏಕಸ್ವಾಮ್ಯ ಮಾಲಕತ್ವದ ತಂತ್ರಾಂಶ ತಯಾರಕರು. ಎರಡನೆಯದು, ಉಚಿತ ಮತ್ತು ಮುಕ್ತ ತಂತ್ರಾಂಶ ತಯಾರಕರು. ಮಾಲಕತ್ವ ತಂತ್ರಾಂಶ ತಯಾರಕರ ಉದ್ದೇಶ ಲಾಭ ಗಳಿಕೆಯಾಗಿದೆ. ಲಾಭದ ಉದ್ದೇಶವಿಲ್ಲದೆ, ತಂತ್ರಜ್ಞಾನದ ಮೂಲಕ ಕಂಪ್ಯೂಟರ್‌ಗಳ ಬಳಕೆಯನ್ನು ಉತ್ತೇಜಿಸುವುದು, ತನ್ಮೂಲಕ ವಿದ್ಯುನ್ಮಾನ ಕ್ಷೇತ್ರದ ಬೆಳವಣಿಗೆಗೆ ಕೊಡುಗೆ ನೀಡುವುದು ಮುಕ್ತ ತಂತ್ರಾಂಶ ತಯಾರಕರ ಉದ್ದೇಶವಾಗಿದೆ. ಮೊದಲನೆ ವರ್ಗದ ತಂತ್ರಾಂಶ ತಯಾರಕರು ಸಾಮಾನ್ಯವಾಗಿ ಕಂಪನಿಗಳ ರೂಪದಲ್ಲಿ ಇರುತ್ತಾರೆ, ಉದಾಹರಣೆಗೆ, ವಿಶ್ವವಿಖ್ಯಾತ ತಂತ್ರಾಂಶ ತಯಾರಿಕಾ ಕಂಪನಿಯಾದ ಮೈಕ್ರೋಸಾಫ್ಟ್ ಕಾರ್ಪೊರೇಷನ್’. ಎರಡನೆಯ ವರ್ಗದ ತಯಾರಕರು ವ್ಯಕ್ತಿಗತ ನೆಲೆಯಲ್ಲಿ ತಂತ್ರಾಂಶ ತಯಾರಿಸುತ್ತಿರಬಹುದು ಅಥವಾ ಒಂದು ತಜ್ಞ ಸಮುದಾಯಕ್ಕೆ ಸೇರಿದ ತಂತ್ರಾಂಶ ತಜ್ಞರಾಗಿ ತಂತ್ರಾಂಶ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರಬಹುದು. ಉದಾಹರಣೆಗೆ, ’ಲಿನಕ್ಸ್’ - ಉಚಿತ ಮತ್ತು ಮುಕ್ತ ತಂತ್ರಾಂಶ ತಯಾರಿಕಾ ಸಮುದಾಯ. ಮಾಲಕತ್ವದ ತಂತ್ರಾಂಶಗಳ ವಿಚಾರದಲ್ಲಿ, ತಂತ್ರಾಂಶದ ಮೂಲ ಆಕರ ಅಂದರೆ, ಸೋರ್ಸ್‌ಕೋಡ್ ಬಳಕೆದಾರರಿಗೆ ಲಭ್ಯವಿಲ್ಲ. ಬಳಕೆದಾರರಿಗೆ ತಂತ್ರಾಂಶದಲ್ಲಿ ಏನೇ ಬದಲಾವಣೆ ಬೇಕಿದ್ದರೂ ಅದನ್ನು ಮಾಲಕರೇ ಮಾಡಿಕೊಡಬೇಕು ಮತ್ತು ಬಳಕೆಯ ಬೆಂಬಲವನ್ನೂ ಸಹ ಅವರೇ ನೀಡಬೇಕು. ಉಚಿತ ಮತ್ತು ಮುಕ್ತ ತಂತ್ರಾಂಶಗಳ ವಿಚಾರದಲ್ಲಿ ಸೋರ್ಸ್‌ಕೋಡ್ ಮುಕ್ತವಾಗಿ ಬಳಕೆದಾರರಿಗೆ ಲಭ್ಯ. ಬಳಕೆದಾರರು ತಮ್ಮ ಅವಶ್ಯಕತೆಗೆ ತಕ್ಕಂತೆ ಸೋರ್ಸ್‌ಕೋಡನ್ನು ಬದಲಾಯಿಸಿ ಬಳಸಿಕೊಳ್ಳಬಹುದು ಹಾಗು ಬದಲಾಯಿಸಿದ ಸೋರ್ಸ್‌ಕೋಡನ್ನು ಇತರರ ಬಳಕೆಗೆ ನೀಡಬಹುದು. ಆದರೆ, ಇಲ್ಲಿ ಬಳಕೆದಾರರಿಗೆ ಬಳಕೆಯ ಸಂದರ್ಭದಲ್ಲಿ ತಯಾರಕರ ಯಾವುದೇ ಬೆಂಬಲ ದೊರೆಯುವುದಿಲ್ಲ. ಮಾರಾಟ ಉದ್ದೇಶವಿಲ್ಲದ ಉಚಿತ ಮತ್ತು ಮುಕ್ತ  ತಂತ್ರಾಂಶತಯಾರಕರಲ್ಲಿಯೂ ಎರಡು ಉಪವರ್ಗಗಳು ಇವೆ. ಒಂದು, “ಬಳಕೆಯೋಗ್ಯ  ತಂತ್ರಾಂಶಮತ್ತು ಅದರ ಮೂಲ-ಆಕರಎರಡನ್ನೂ ಸಹ ಬಳಕೆದಾರರಿಗೆ ಉಚಿತವಾಗಿ ನೀಡುವ ತಂತ್ರಾಂಶ ತಯಾರಕರು. ಇವರನ್ನು ಮುಕ್ತ ತಂತ್ರಾಂಶ ತಯಾರಕರು  ಎನ್ನಲಾಗಿದೆ.  ಎರಡನೆಯದು, ತಂತ್ರಾಂಶವನ್ನು ಮಾತ್ರ ಬಳಕೆದಾರರಿಗೆ ಉಚಿತವಾಗಿ ನೀಡುವ ತಂತ್ರಾಂಶ ತಯಾರಕರು. ಈ ವರ್ಗದವರನ್ನು ಉಚಿತ ತಂತ್ರಾಂಶ ತಯಾರಕರುಎನ್ನಲಾಗಿದೆ. ಮಾಲಕತ್ವ ತಂತ್ರಾಂಶ ತಯಾರಕರ ರೀತಿಯಲ್ಲಿಯೇ, ಇವರೂ ಸಹ ತಂತ್ರಾಂಶದ ಮೂಲ ಆಕರವನ್ನು ಯಾವ ಕಾರಣಕ್ಕೂ ಬಳಕೆದಾರರಿಗೆ ನೀಡುವುದಿಲ್ಲ.  ತಂತ್ರಾಂಶ ರೂಪಿಸುವ ತಂತ್ರಜ್ಞಾನಿಗಳ ಒಂದು ನಿರ್ದಿಷ್ಟ ಸಮುದಾಯವು ವ್ಯಕ್ತಿಗತ ನೆಲೆಯಲ್ಲಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಬಿಡುವಿನ ವೇಳೆಯಲ್ಲಿ ಕಾರ್ಯನಿರ್ವಹಿಸಿ ತಂತ್ರಾಂಶಗಳನ್ನು ರೂಪಿಸಿ ಎಲ್ಲರಿಗೂ ಉಚಿತ ಬಳಕೆಗೆ ನೀಡುವ  ಫ್ರೀ ಅಂಡ್ ಓಪನ್ ಸೋರ್ಸ್ ಸಾಫ್ಟ್‌ವೇರ್ (FOSS) ಅಂದೋಲನವು ವಿಶ್ವಾದ್ಯಂತ ಪ್ರಚಲಿತದಲ್ಲಿದೆ.

ಆರೋಗ್ಯಕರ ಸಮಾಜವು ಇಂದು, ಹೇಗೆ ಬಂಡವಾಳಶಾಹಿ ಮತ್ತು ಸಮಾಜವಾದದ ಸಮನ್ವಯತೆಯಿಂದ ಮುನ್ನಡೆದಿದೆಯೋ, ಹೇಗೆ, ಶ್ರೀಮಂತ ಮತ್ತು ಬಡವ ಇಬ್ಬರೂ ಒಂದೇ ಸಮಾಜದಲ್ಲಿ ಹೇಗೆ ಬದುಕುತ್ತಿದ್ದಾರೆಯೋ ಹಾಗೆಯೇ, ವಿದ್ಯುನ್ಮಾನ ಕ್ಷೇತ್ರದಲ್ಲಿಯೂ ಸಹ ಮಾಲಕತ್ವದ ದುಬಾರಿ ತಂತ್ರಾಂಶಮತ್ತು ಉಚಿತ ಮತ್ತು ಮುಕ್ತ ತಂತ್ರಾಂಶಗಳು ಏಕಕಾಲಕ್ಕೆ ಬಳಕೆಯಲ್ಲಿದ್ದಾಗ ಮಾತ್ರ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನುಗಳ ಬಳಕೆ ಹೆಚ್ಚಾಗುತ್ತದೆ. ಅವರವರ ಅವಶ್ಯಕತೆಗೆ ಅನುಗುಣವಾಗಿ, ಆರ್ಥಿಕ ಸಾಮಥ್ಯಕ್ಕೆ ತಕ್ಕಂತೆ ಸಾರ್ವಜನಿಕರೂ ಸಹ ತಂತ್ರಾಂಶಗಳನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸಿಕೊಂಡು ಬಳಸಬಹುದು.

ಪ್ರಸ್ತುತ, ಬಹುತೇಕ ಮುಕ್ತ ಮತ್ತು ಉಚಿತ ತಂತ್ರಾಂಶಗಳ ಬಳಕೆದಾರರ ಇಂಟರ್‌ಫೇಸ್ ಇಂಗ್ಲಿಷ್‌ನಲ್ಲಿದ್ದು, ಹೆಚ್ಚಾಗಿ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಬಳಕೆಯಾಗುತ್ತಿದೆ. ಮಾಲಕತ್ವ ತಂತ್ರಾಂಶಗಳ ಪರವಾನಿಗೆಯ ಆರ್ಥಿಕ ಹೊರೆಯನ್ನು ತಾಳಲಾರದ ಡಿಜಿಟಲ್ ಉದ್ಯಮಗಳು ಮತ್ತು ವಾಣಿಜ್ಯ ಸಂಸ್ಥೆಗಳು ಲೈನೆಕ್ಸ್‌ನಂತಹ ಓ.ಎಸ್.ಗಳನ್ನು ಮತ್ತು ಅದರ ಮೇಲೆ ಕಾರ್ಯನಿರ್ವಹಿಸುವ ಮುಕ್ತ ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳನ್ನು ಅಳವಡಿಸಿಕೊಂಡು ವ್ಯವಹಾರವನ್ನು ಮಾಡುತ್ತಿವೆ. ತಂತ್ರಾಂಶ ಸುಧಾರಿಸುವ ಸ್ವಾತಂತ್ರ್ಯವನ್ನು ಹೊಂದಿರುವ ಮುಕ್ತ ಸಮುದಾಯಗಳ ಅಸ್ತಿತ್ವದಿಂದಲೇ ಇಂದು ಸ್ಮಾರ್ಟ್‌ಫೋನುಗಳಲ್ಲಿ ಲಕ್ಷಾಂತರ ಕಿರುತಂತ್ರಾಂಶಗಳು (ಆಪ್‌ಗಳು) ಸಿದ್ಧಗೊಂಡು ಬಳಕೆಯಲ್ಲಿವೆ.
ಕೇಂದ್ರ ಮತ್ತು ರಾಜ್ಯ ಸರಕಾರದ ಪ್ರಯತ್ನಗಳಿಂದ, ಕನ್ನಡಕ್ಕೆ ಉತ್ತಮವಾದ ಉಚಿತ ಮತ್ತು ಮುಕ್ತ ಕಾರ್ಯಾಚರಣೆ ವ್ಯವಸ್ಥಾ ತಂತ್ರಾಂಶ ಮತ್ತು ಆನ್ವಯಿಕ ತಂತ್ರಾಂಶಗಳು ಲಭ್ಯವಾದರೆ, ಸರಕಾರವೂ ಸಹ ತನ್ನ ತಂತ್ರಾಂಶ ನೀತಿಯನ್ನು ಬದಲಿಸಿಕೊಂಡು, ತನ್ನ ಎಲ್ಲಾ ಕಚೇರಿ ಕೆಲಸಗಳಿಗೆ ಮತ್ತು ಎಲ್ಲಾ ಕಂಪ್ಯೂಟರೀಕರಣ ಕಾರ್ಯಗಳಿಗೆ ಉಚಿತ ಮತ್ತು ಮುಕ್ತ ತಂತ್ರಾಂಶಗಳನ್ನೇ ಅಳವಡಿಸಿಕೊಂಡು ನಿರ್ವಹಣಾ ವೆಚ್ಚವನ್ನು ಕಡಮೆಗೊಳಿಸಿಕೊಳ್ಳಬಹುದು. ಆ ಮೂಲಕ ತೆರಿಗೆದಾರರ ಹಣವನ್ನು ಸದ್ವಿನಿಯೋಗಪಡಿಸಿಕೊಳ್ಳಬಹುದು. ತನ್ನ ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಲ್ಲದೆ, ಸರಕಾರದ ಇಲಾಖೆಗಳ ಕಂಪ್ಯೂಟರೀಕರಣದಲ್ಲಿ ಉಚಿತ ಮತ್ತು ಮುಕ್ತ ತಂತ್ರಾಂಶಗಳನ್ನು ಯಶಸ್ವಿಯಾಗಿ ಅಳವಡಿಸಿಕೊಳ್ಳಬಹುದು. ಮುಕ್ತ ತಂತ್ರಾಂಶಗಳನ್ನು ಉತ್ತೇಜಿಸಿ, ತನ್ನ ಆಡಳಿತದಲ್ಲಿ ಅಳವಡಿಸಿಕೊಂಡು ಮುನ್ನಡೆ ಸಾಧಿಸಿರುವ ವಿಚಾರದಲ್ಲಿ ನಮ್ಮ ನೆರೆರಾಜ್ಯವಾದ ಕೇರಳದ ನೀತಿಯು ನಮ್ಮ ದೇಶದ ಎಲ್ಲ ರಾಜ್ಯಗಳಿಗೂ ಒಂದು ಮಾದರಿಯಾಗಿದೆ.

ಕನ್ನಡಕ್ಕೂ ಸಹ ಮುಕ್ತ ಮತ್ತು ಉಚಿತ ತಂತ್ರಾಂಶಗಳ ಅವಶ್ಯಕತೆಯಿದೆ.  ಕಂಪ್ಯೂಟರ್‌ಗಳಲ್ಲಿ ಕನ್ನಡದ ಬಳಕೆಯನ್ನು ಉತ್ತೇಜಿಸಲು ಕೇವಲ ಟೈಪಿಂಗ್‌ಗಾಗಿರುವ ಲಿಪಿತಂತ್ರಾಂಶಗಳನ್ನು ಸಿದ್ಧಪಡಿಸಿ ನೀಡಿದರಷ್ಟೇ ಸಾಲದು. ವಿವಿಧ ಉದ್ದೇಶಗಳಿಗಾಗಿ ತಂತ್ರಾಂಶಗಳ ಕನ್ನಡೀಕರಣದ ಮೂಲಕ ಇಂಗ್ಲಿಷ್‌ನಲ್ಲಿ ಲಭ್ಯವಿರುವ ತಂತ್ರಾಂಶಗಳು ಕನ್ನಡದಲ್ಲಿಯೂ ದೊರೆಯುವಂತಾಗಬೇಕು. ಕಂಪ್ಯೂಟರ್‌ಗಳಲ್ಲಿ  ಕನ್ನಡದ ಬಳಕೆಯನ್ನು ವ್ಯಾಪಕಗೊಳಿಸುವಲ್ಲಿ, ಉಚಿತ ಮತ್ತು ಮುಕ್ತ ತಂತ್ರಾಂಶಗಳ ಪಾತ್ರ ಬಹಳ ಪ್ರಮುಖವಾಗುತ್ತದೆ.  ಹೀಗಾಗಿ, ಇಂಗ್ಲಿಷ್‌ನಲ್ಲಿ ಲಭ್ಯವಿರುವ ಉಚಿತ ಮತ್ತು ಮುಕ್ತ ತಂತ್ರಾಂಶಗಳನ್ನು ಕನ್ನಡೀಕರಿಸಿಕೊಂಡು ಬಳಸುವುದು ಅಗತ್ಯವಿದೆ. ಕಂಪ್ಯೂಟರ್‌ಗಳ ಬಳಕೆಯ ಭಾಷೆಯನ್ನಾಗಿ ಕನ್ನಡವನ್ನೇ ಉಪಯೋಗಿಸುವಂತೆ ಬಳಕೆದಾರರನ್ನು ಉತ್ತೇಜಿಸಲು ಮತ್ತು ಅಗತ್ಯವಿದ್ದೆಡೆಯಲ್ಲೆಲ್ಲಾ ಕನ್ನಡವನ್ನೇ ಬಳಸಲು ಸೂಕ್ತವಾದ ಕಾರ್ಯಾಚರಣೆ ವ್ಯವಸ್ಥಾ ತಂತ್ರಾಂಶಗಳು (ಓ.ಎಸ್.ಗಳು) ಮತ್ತು ಆನ್ವಯಿಕ ತಂತ್ರಾಂಶಗಳು (ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳು) ಅಗತ್ಯವಾಗುತ್ತವೆ. ಖರೀದಿಸಿ ಬಳಸುವ ತಂತ್ರಾಂಶಗಳಿಗೆ ಉತ್ತಮವಾದ ಬಳಕೆಯ ಬೆಂಬಲ (ಕಸ್ಟಮರ್ ಸಪೋರ್ಟ್) ದೊರೆಯುವುದರಿಂದ, ಬಳಕೆಯ ಸಮಸ್ಯೆಯು ಅತ್ಯಂತ ಕಡಮೆ ಇರುತ್ತದೆ. ಆದರೆ, ಉಚಿತ ಮತ್ತು ಮುಕ್ತ ತಂತ್ರಾಂಶಗಳಿಗೆ ಹಣ ಪಾವತಿಸುವ ಅಗತ್ಯವಿಲ್ಲದಿದ್ದರೂ, ಅವುಗಳಲ್ಲಿರುವ ಸಮಸ್ಯೆಗಳಿಗೆ ಸುಲಭವಾಗಿ ಬಳಕೆಯ ಬೆಂಬಲ ದೊರೆಯುವುದು ದುಸ್ತರ. ಆದಾಗ್ಯೂ, ಕಂಪ್ಯೂಟರ್‌ಗಳ ಬಳಕೆದಾರರಲ್ಲಿ ಎಲ್ಲರೂ ಸಹ ಖರೀದಿಸಿ ಬಳಸುವವರೇ ಆಗಿರುತ್ತಾರೆ ಎನ್ನುವಂತಿಲ್ಲ. ಈಗಾಗಲೇ ಲಭ್ಯವಿರುವ ಇಂಗ್ಲಿಷ್ ಭಾಷಾ ಬಳಕೆಯ ಇಂಟರ್‌ಫೇಸ್ ಇರುವ ತಂತ್ರಾಂಶಗಳಿಗೆ ಕನ್ನಡದ ಬಳಕೆಯ ಇಂಟರ್‌ಫೇಸ್‌ನ್ನು ಅಳವಡಿಸಿ ಬಳಕೆಗೆ ನೀಡಬೇಕಾಗುತ್ತದೆ. ಅಷ್ಟೇಅಲ್ಲದೆ, ಆಧುನಿಕ ಯುನಿಕೋಡ್ ಬೆಂಬಲಿಸುವ ಲಿಪಿವ್ಯವಸ್ಥೆಯನ್ನು ಅಂತರ್ಗತವಾಗಿರುವಂತೆ ಅವುಗಳನ್ನು ಮರುವಿನ್ಯಾಸಗೊಳಿಸಿ ಬಳಕೆಗೆ ನೀಡಬೇಕಾಗುತ್ತದೆ. ಹೀಗೆ ಆಧುನೀಕರಿಸಲಾದ ಹಲವಾರು ತಂತ್ರಾಂಶಗಳು ಇಂದು ಉಚಿತ ಡೌನ್‌ಲೋಡ್‌ಗೆ ಲಭ್ಯವಿವೆ. ಭಾರತ ಸರ್ಕಾರದ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಸಾರ್ವಜನಿಕರಿಗೆ ಭಾಷಾ ತಂತ್ರಾಂಶ ಸಲಕರಣೆಗಳನ್ನು ಉಚಿತವಾಗಿ ಒದಗಿಸುವಾಗ ಮುಕ್ತ ತಂತ್ರಾಂಶ ವೇದಿಕೆಗಳಲ್ಲಿ ಕಾರ್ಯಾಚರಿಸುವ ತಂತ್ರಾಂಶಗಳಿಗೂ ಸಹ ಹೆಚ್ಚಿನ ಗಮನವನ್ನು ನೀಡಿದೆ. ಅಲ್ಲದೆ, ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಿದ್ಧಪಡಿಸಲಾದ ಉಚಿತ ತಂತ್ರಾಂಶ ಸಲಕರಣೆಗಳ ವಿಚಾರದಲ್ಲಿಯೂ ಸಹ ಈ ಅಂಶಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...