ವಿಷಯಕ್ಕೆ ಹೋಗಿ

48.ಕಂಪ್ಯೂಟರಿನಲ್ಲಿ ಕನ್ನಡ ಬಳಕೆ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರದ ಉಚಿತ ತಂತ್ರಾಂಶ ಸಲಕರಣೆಗಳು



ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಸಮಗ್ರವಾಗಿ ಬಳಸಲು ಅನುವಾಗುವಂತೆ ಕೇಂದ್ರ ಸರಕಾರದ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಕನ್ನಡದ ತಂತ್ರಾಂಶ ಸಲಕರಣೆಗಳನ್ನು ಉಚಿತವಾಗಿ ಒದಗಿಸುತ್ತಿದೆ. ಭಾರತೀಯ ಭಾಷೆಗಳಿಗಾಗಿ ತಂತ್ರಾಂಶ ಅಭಿವೃದ್ಧಿ ಎಂಬ ಯೋಜನೆ ಅಡಿಯಲ್ಲಿ ಪುಣೆಯ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ ಸಂಸ್ಥೆಯು (ಸಿ-ಡಾಕ್) ಕೆಲವು ಉಪಯುಕ್ತ ತಂತ್ರಾಂಶವನ್ನು ತಾನೇ ಸಿದ್ಧಪಡಿಸಿದೆ ಮತ್ತು ಕೆಲವು ಖಾಸಗಿ ಕಂಪನಿಗಳು ಮತ್ತು ವ್ಯಕ್ತಿಗಳು ತಯಾರಿಸಿರುವ ಉತ್ತಮ ಭಾಷಾ ಸಲಕರಣೆಗಳನ್ನು ಆಯ್ಕೆಮಾಡಿ ಅವುಗಳನ್ನು ಉಚಿತವಾಗಿ ವಿತರಿಸುವ ವ್ಯವಸ್ಥೆಯೊಂದನ್ನು ರೂಪಿಸಿ ಅನುಷ್ಠಾನಗೊಳಿಸಲಾಗಿದೆ.  ಅವುಗಳನ್ನು <hಣಣಠಿ://ತಿತಿತಿ.iಟಜಛಿ.iಟಿ/ಞಚಿಟಿಟಿಚಿಜಚಿ/ಞiಟಿಜex.ಚಿsಠಿx> ಜಾಲತಾಣದಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ವಿವಿಧ ಉದ್ದೇಶಗಳಿಗಾಗಿ ಲೈನೆಕ್ಸ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂಗಳ ಮೇಲೆ ಕಾರ್ಯನಿರ್ವಹಿಸುವ ತಂತ್ರಾಂಶ ಸಲಕರಣೆಗಳು ಇಲ್ಲಿ ಉಚಿತ ಡೌನ್‌ಲೋಡ್‌ಗೆ ಲಭ್ಯ. ನೋಂದಣಿ ಮಾಡಿಕೊಂಡು ಕೋರಿಕೆ ಸಲ್ಲಿಸಿದರೆ, ಬಳಕೆದಾರನಿಗೆ ಅಗತ್ಯವಾದ ಯಾವುದಾದರೂ ಒಂದು ಅಥವಾ ಅದಕ್ಕೂ ಹೆಚ್ಚಿನ ಭಾರತೀಯ ಭಾಷೆಗಳ ತಂತ್ರಾಂಶ ಸಲಕರಣೆಗಳ ಸೀಡಿಯನ್ನೂ ಸಹ ಬಳಕೆದಾರರ ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯು ಜಾರಿಗೊಳಿಸಿದೆ. ೨೦೦೭ರಲ್ಲಿ ಜಾರಿಯಾದ ಈ ಯೋಜನೆ ಅಡಿಯಲ್ಲಿ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಸುಲಭವಾಗಿ ಬಳಸುವಂತೆ ಉತ್ತೇಜನ ನೀಡುವ ಸಲುವಾಗಿ ತಂತ್ರಾಂಶ ಸಲಕರಣೆಗಳನ್ನು ಡೌನ್‌ಲೋಡ್‌ಗೆ ಅಷ್ಟೇಅಲ್ಲದೆ, ಬಳಕೆದಾರರಿಗೆ ಅಂಚೆ ಮೂಲಕ ಸೀಡಿಯನ್ನು ಉಚಿತವಾಗಿ ತಲುಪಿಸುವ ವ್ಯವಸ್ಥೆಮಾಡಲಾಗಿದೆ. ಕಳೆದ ಹತ್ತು ವರ್ಷಗಳ ಅಂಕಿಅಂಶಗಳ ಪ್ರಕಾರ ದೇಶೀಯ ಭಾಷಾ ಉಚಿತ ತಂತ್ರಾಂಶ ಸಲಕರಣೆಗಳನ್ನು ಪಡೆದು ಬಳಸಿದವರ ಪೈಕಿ ತಮಿಳು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ನಂತರದ ಸ್ಥಾನದಲ್ಲಿ ಹಿಂದಿ ಭಾಷಿಕರು ಇದ್ದಾರೆ. ಕನ್ನಡ ಬಳಕೆದಾರರು ಮೂರನೆಯ ಸ್ಥಾನದಲ್ಲಿದ್ದಾರೆ.

        ಕನ್ನಡ ಭಾಷೆಯ ಕಂಪ್ಯೂಟಿಂಗ್‌ಗಾಗಿ ಅನೇಕ ಉಪಯುಕ್ತ ಸಲಕರಣೆಗಳು ಲಭ್ಯವಿದೆ. ಕನ್ನಡ ಪಠ್ಯವನ್ನು ಅಕ್ಷರಾನುಕ್ರಮಣಿಕೆಯಲ್ಲಿ ಸಾರ್ಟಿಂಗ್ ಮಾಡಲು, ಒಂದು ಭಾಷಾಲಿಪಿಯಿಂದ ಮತ್ತೊಂದು ಭಾಷಾ ಲಿಪಿಗೆ ಲಿಪ್ಯಂತರಿಸಲು, ಒಂದು ಫಾಂಟ್‌ನಿಂದ ಮತ್ತೊಂದಕ್ಕೆ ಗ್ಲಿಫ್-ಎನ್‌ಕೋಡಿಂಗ್ ಪರಿವರ್ತನೆ ಮತ್ತು ಆಸ್ಕಿಯಿಂದ ಯೂನಿಕೋಡ್‌ಗೆ ಎನ್‌ಕೋಡಿಂಗ್ ಪರಿವರ್ತಿಸಲು (ಅಕ್ಷರ ಸಂಕೇತೀಕರಣ) ಡಿ.ಟಿ.ಪಿ. ಹಾಗೂ ಇತರೆ ಕೆಲಸ ಕಾರ್ಯಗಳನ್ನು ನಿರ್ವಹಿಸಲು ನೀಡಿರುವ ಹಲವು ಸಲಕರಣೆಗಳು ಉಪಯುಕ್ತವಾಗಿದೆ. ಮೈಕ್ರೋಸಾಫ್ಟ್ ಆಫೀಸ್‌ನ ರೀತಿಯದೇ ಮುಕ್ತ ತಂತ್ರಾಂಶಗಳಾದ ಲಿಬ್ರೆ ಆಫೀಸ್ ಓಪನ್‌ಆಫೀಸ್ ಕನ್ನಡದ ಯೂಸರ್ ಇಂಟರ್‌ಫೇಸ್ ಸಹಿತ ಲಭ್ಯವಿದೆ. ಹಲವಾರು ಟ್ರೂಟೈಪ್ ಫ಼ಾಂಟ್‌ಗಳು ಮತ್ತು ಓಪನ್‌ಟೈಪ್ ಫ಼ಾಂಟ್‌ಗಳನ್ನು ಉಚಿತವಾಗಿ ಒದಗಿಸಿರುವುದರಿಂದ, ಡಿ.ಟಿ.ಪಿ. ಕೆಲಸಗಳಿಗೆ ಇವುಗಳನ್ನು ಉಪಯೋಗಿಸಬಹುದು. ವಿಶೇಷವಾಗಿ ಯೂನಿಕೋಡ್ ಫಾಂಟುಗಳನ್ನು ನೀಡಿರುವುದರಿಂದ ಅಂತರ್ಜಾಲದ ವಿವಿಧ ಉದ್ದೇಶಕ್ಕಾಗಿ ಕನ್ನಡ ಪಠ್ಯವನ್ನು ವಿಚಿತ್ರಲಿಪಿಗಳ ಸಮಸ್ಯೆ ಇಲ್ಲದೆ ಸುಲಭವಾಗಿ ಬಳಸಬಹುದು. ಟೈಪ್‌ಮಾಡಿದ ಅದೇ ಪಠ್ಯವನ್ನು ಸ್ಮಾರ್ಟ್‌ಫೋನ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೇರೆಯವರೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಸಕಲ ಭಾರತಿ ಎಂಬ ಹೆಸರಿನ ಕನ್ನಡ ಯೂನಿಕೋಡ್ ಫಾಂಟು ಕಂಪ್ಯೂಟರ್ ಪರದೆಯ ಮೇಲೆ ಉತ್ತಮ ದೃಶ್ಯಸ್ಪಷ್ಟತೆ ಹೊಂದಿದ್ದು ಅಕ್ಷರಗಾತ್ರವು ಚಿಕ್ಕದಿದ್ದಾಗಲೂ ಸ್ಪಷ್ಟವಾಗಿ ತೆರೆಯಮೇಲೆ ಕನ್ನಡವನ್ನು ಸುಲಭವಾಗಿ ಓದಬಹುದು. ನುಡಿ ಕನ್ನಡ ಲಿಪಿತಂತ್ರಾಂಶ ಸೇರಿದಂತೆ, ಕನ್ನಡದಲ್ಲಿಯೇ ಪ್ರೋಗ್ರಾಮಿಂಗ್ ಮಾಡಬಹುದಾದ ಕನ್ನಡ ಲೋಗೋ ಸಹ ಇಲ್ಲಿ ಉಚಿತವಾಗಿ ದೊರೆಯುತ್ತದೆ. ಕನ್ನಡದಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ರಚಿಸಲು ಸುಂದರವಾದ ಅಕ್ಷರಗಳನ್ನು ಸೃಷ್ಟಿಸಲು ಆಲಂಕಾರಿಕ ಫಾಂಟ್ ಇರುವ ತಂತ್ರಾಂಶವಿದೆ. ಹಲವು ಕನ್ನಡ ಕಲಿಕಾ ತಂತ್ರಾಂಶಗಳು ಮತ್ತು ಉಚಿತ ಬ್ರೌಸರ್‌ಗಳು ಸೇರಿದಂತೆ ಅಂತರ್ಜಾಲ ಸಾಧನ-ಸಲಕರಣೆಗಳು ಸಹ ಇಲ್ಲಿವೆ. ಪಾವತಿಸಿ ಬಳಸಬೇಕಾದ ಮೈಕ್ರೋಸಾಫ್ಟ್ ಕಂಪನಿಯ ಉತ್ಪನ್ನಗಳಿಗೆ ಸಮಾನಾಂತರವಾಗಿ ಅಂತಹುದೇ ಸೌಲಭ್ಯಗಳನ್ನು ಒದಗಿಸುವ ಉಚಿತ ಮತ್ತು ಮುಕ್ತ ತಂತ್ರಾಂಶಗಳ ಓ.ಎಸ್.ಗಳ ಮೇಲೆ ಕಾರ್ಯನಿರ್ವಹಿಸುವ ಅಪ್ಲಿಕೇಷನ್‌ಗಳು ಇಲ್ಲಿ ಲಭ್ಯ.

ಡಿ.ಟಿ.ಪಿ.ಗಾಗಿ ಹಳೆಯ ಆಸ್ಕಿ-ಫಾಂಟುಗಳನ್ನು ಬಳಸುತ್ತಿರುವವರು ಬೇರೆ ಬೇರೆ ಫಾಂಟುಗಳಲ್ಲಿ ಸಿದ್ಧಪಡಿಸಲಾಗಿರುವ ಫೈಲ್‌ಗಳನ್ನು ಬಳಸಿ ಕನ್ನಡಪಠ್ಯದ ಕರಡುತಿದ್ದುವ ಕೆಲಸದಲ್ಲಿ ಮಲ್ಟಿಫ಼ಾಂಟ್ ಕೀಬೋರ್ಡ್ ಸಲಕರಣೆಯು ಅತ್ಯಂತ ಉಪಯುಕ್ತವಾಗಿದೆ. ಯಾವುದೇ ಫ಼ಾಂಟ್ ಆಯ್ಕೆಮಾಡಿಕೊಂಡು ಬಳಕೆದಾರನು ತನಗೆ ತಿಳಿದಿರುವ (ಕಲಿತಿರುವ) ಯಾವುದೇ ಕೀಲಿಮಣೆಯಲ್ಲಿ ಕನ್ನಡವನ್ನು ಟೈಪ್‌ಮಾಡಬಹುದಾದ ಸೌಲಭ್ಯ ಇಲ್ಲಿದೆ. ಇದರಿಂದ ಕನ್ನಡ ಟೈಪಿಂಗ್  ಕಲಿಕೆ, ಬಳಕೆ ಮತ್ತು ಫ಼ಾಂಟ್‌ಗಳ ಲಭ್ಯತೆಯ ಅನೇಕ ಸಮಸ್ಯೆಗಳು ಈಗ ಪರಿಹಾರಗೊಂಡಿವೆ.
ಕೇಂದ್ರ ಸರಕಾರವು ಭಾರತೀಯ ಭಾಷೆಗಳ ತಂತ್ರಜ್ಞಾನಗಳನ್ನು ಸಂಶೋಧಿಸಲು ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುತ್ತಾ ಬಂದಿದೆ. ಟೆಕ್ನಾಲಜಿ ಡೆವಲಪ್‌ಮೆಂಟ್ ಫ಼ಾರ್ ಇಂಡಿಯನ್ ಲಾಂಗ್ವೇಜಸ್ (ಟಿಡಿಐಎಲ್) ಎಂಬ ಹೆಸರಿನ ಯೋಜನೆಯ ಅಡಿಯಲ್ಲಿ ಇದನ್ನು ನಿರ್ವಹಿಸಲಾಗುತ್ತಿದೆ. ಕನ್ನಡಕ್ಕೆ ಸಂಬಂಧಿಸಿದಂತೆ ಈ ಯೋಜನೆಗಳು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ, ನಿರ್ವಹಣಾ ವಿಭಾಗದಲ್ಲಿ ರಚಿಸಲಾಗಿರುವ ಭಾಷಾ ಪ್ರಾದೇಶಿಕ ಕೇಂದ್ರದಲ್ಲಿ ಅನುಷ್ಠಾನಗೊಂಡಿದೆ. ಬ್ರಾಹ್ಮೀ  ಎನ್ನುವ ಬಹುಭಾಷೆಗಳ ಯುನಿಕೋಡ್ ಎಡಿಟರ್‌ನ್ನು ಈ ಕೇಂದ್ರವು ಸಿದ್ಧಪಡಿಸಿದೆ. ಇದರಲ್ಲಿ ಕನ್ನಡವನ್ನೂ ಬಳಸಬಹುದು. ೫ ಲಕ್ಷ ಪದಗಳ ಅರ್ಥಕೋಶ; ಕನ್ನಡಕ್ಕೆ ಪದಪರೀಕ್ಷಕ; ಮೈಸೂರಿನಲ್ಲಿರುವ ಭಾರತೀಯ ಭಾಷಾ ಕೇಂದ್ರವು (ಸಿಐಐಎಲ್) ಸಿದ್ಧಪಡಿಸಿರುವ ಶಬ್ದಭಂಡಾರದ (ಕಾರ್ಪಸ್) ಹೊರತಾಗಿ ೫ ಲಕ್ಷ ಪದಗಳು ಉಳ್ಳ ಪದಕೋಶ; ಕನ್ನಡಕ್ಕೆ ಓಸಿಆರ್ (ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್); ಪಠ್ಯದಿಂದ ಧ್ವನಿಗೆ ಪರಿವರ್ತನಾ ತಂತ್ರಜ್ಞಾನ - ಇವುಗಳನ್ನು ಸಿದ್ಧಪಡಿಸಲಾಗಿದೆ ಎನ್ನಲಾಗಿದೆ. ಆದರೆ, ಈ ತಂತ್ರಜ್ಞಾನಗಳು ಕನ್ನಡಕ್ಕೆ ತಕ್ಷಣದ ಬಳಕೆಗೆ ಪೂರ್ಣಪ್ರಮಾಣದಲ್ಲಿ ಲಭ್ಯವಿಲ್ಲ. ಸಾಮಾನ್ಯವಾಗಿ ಸಂಶೋಧನಾ ಫಲಿತಾಂಶಗಳು ಸಂಶೋಧನೆಗಷ್ಟೇ ಸೀಮಿತಗೊಳ್ಳುತ್ತವೆ. ಅವುಗಳ ಪ್ರಯೋಜನವು ಅಂತಿಮ ಬಳಕೆದಾರರವರೆಗೆ ತಲುಪುವುದೇ ಇಲ್ಲ. ಇದು ಬಹುತೇಕ ಸಂಶೋಧನೆಗಳ ವಿಚಾರದಲ್ಲಿ ಸಾಬೀತಾಗಿದೆ. ಕನ್ನಡದ ಹಲವು ಕಾರ್ಯಯೋಜನೆಗಳ ಫಲಿತಾಂಶಗಳು ಪೂರ್ಣಪ್ರಮಾಣದ ಉತ್ಪನ್ನಗಳಾಗಿ ಕನ್ನಡಿಗರ ಕೈಸೇರುವುದನ್ನು ನಿರೀಕ್ಷಿಸಲಾಗಿದೆ. ಸಂಪಿಗೆ, ಮಲ್ಲಿಗೆ ಮತ್ತು ಕೇದಗೆ ಯುನಿಕೋಡ್ ಫಾಂಟ್‌ಗಳನ್ನು ಸಿದ್ಧಪಡಿಸಲಾಗಿದ್ದು, ಉಚಿತ ಡೌನ್‌ಲೋಡ್‌ಗೆ ಲಭ್ಯವಿವೆ.  ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿನ ಈ ಪ್ರಾದೇಶಿಕ ಕೇಂದ್ರವು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿದ ಕನ್ನಡ ಕಲಿಕಾ ಸಿ.ಡಿಗಳ ಸಂಖ್ಯೆ ಐದು. ಇವೆಲ್ಲವುಗಳ ವಿತರಣೆಗಾಗಿ ಇದೇ ಯೋಜನೆಯ ಅಡಿಯಲ್ಲಿ ತಿತಿತಿ.ಞಚಿಟಿಟಿui.oಡಿg  ಎಂಬ ಅಂತರಜಾಲತಾಣವನ್ನು ಆರಂಭಿಸಲಾಗಿತ್ತು. ಈಗ ಅದರ ಅಸ್ತಿತ್ವವೇ ಇಲ್ಲವಾಗಿದೆ. ಪೂರ್ಣಪ್ರಮಾಣದ ಕನ್ನಡದ ಟೆಕ್ಸ್ಟ್-ಟು-ಸ್ಪೀಚ್ ಮತ್ತು ಸ್ಪೀಚ್-ಟು-ಟೆಕ್ಟ್ಸ್ ತಂತ್ರಜ್ಞಾನಗಳು ಇನ್ನೂ ಅಭಿವೃದ್ಧಿಯ ಹಂತದಲ್ಲಿಯೇ ಇವೆ. ಮಧುರವಾಚಕ ಎಂಬ ಪ್ರಾಯೋಗಿಕ ತಂತ್ರಾಂಶವು ಆನ್‌ಲೈನ್‌ನಲ್ಲಿ ಯೂನಿಕೋಡ್ ಕನ್ನಡ ಪಠ್ಯವನ್ನು ಓದಿಹೇಳುವ ಒಂದು ತಂತ್ರಜ್ಞಾನವಾಗಿದೆ. ಅದೂ ಸಹ ಪೂರ್ಣಪ್ರಮಾಣದಲ್ಲಿ ಬಳಕೆಗೆ ಇನ್ನೂ ಸಿದ್ಧವಾಗಬೇಕಾಗಿದೆ.
ಟಿಡಿಐಎಲ್ ಯೋಜನೆಯ ಅಡಿಯಲ್ಲಿ ದೇಶದ ಇತರ ಪ್ರಾದೇಶಿಕ ಕೇಂದ್ರಗಳಲ್ಲಿ ಭಾರತೀಯ ಭಾಷೆಗಳ ಕುರಿತಾಗಿ ಆಗಿರುವ ಇದೇ ರೀತಿಯ ತಂತ್ರಜ್ಞಾನ ಸಂಶೋಧನೆಗಳು ಸಹ ಇನ್ನೂ ಉತ್ಪನ್ನಗಳಾಗಿ ಬಳಕೆದಾರರ ಕೈಸೇರಿಲ್ಲ. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ಪರಸ್ಪರ ಭಾಷಾಂತರ ತಂತ್ರಜ್ಞಾನದಂತಹ ಆಧುನಿಕ ತಂತ್ರಜ್ಞಾನಗಳು ಇದರಲ್ಲಿ ಸೇರಿವೆ. ಹಲವು ಸಂಶೋಧನಾ ಫಲಿತಗಳನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿ-ಡಾಕ್ ಸಂಸ್ಥೆಯ ಮೂಲಕವೇ ವಾಣಿಜ್ಯಿಕ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಮಾರುಕಟ್ಟೆ ಸಮೀಕರಣಗಳು ಮತ್ತು ಲಾಭ-ನಷ್ಟಗಳ ವಿಚಾರದಲ್ಲಿ ಭಾರತೀಯ ಭಾಷಾ ತಂತ್ರಾಂಶ ಅಭಿವೃದ್ಧಿಗಾಗಿ ಖಾಸಗಿ ಕಂಪನಿಗಳು ಸಂಶೋಧನೆಯಲ್ಲಿ ತೊಡಗಿಕೊಳ್ಳುವುದು ಕಷ್ಟಕರ. ಕನ್ನಡವೂ ಸೇರಿದಂತೆ ಭಾರತೀಯ ಭಾಷಾ ತಂತ್ರಾಂಶ ಸಂಶೋಧನೆಗಳನ್ನು ಲಾಭದಾಯಕ ಉತ್ಪನ್ನಗಳನ್ನಾಗಿ ಪರಿವರ್ತಿಸುವ ಕೆಲಸವು ವೇಗವನ್ನು ಪಡೆದುಕೊಳ್ಳಬೇಕಿದೆ. ಈಗಾಗಲೇ ಅಭಿವೃದ್ಧಿಪಡಿಸಲಾಗಿರುವ ಭಾರತೀಯ ಭಾಷಾ ತಂತ್ರಜ್ಞಾನಗಳು ಹಲವಾರು ಲಭ್ಯ ಇವೆ. ಆಪ್ಟಿಕಲ್ ಕ್ಯಾರೆಕ್ಟರ್ ರೆಕಾಗ್ನಿಷನ್, ವಾಯ್ಸ್ ರೆಕಾಗ್ನಿಷನ್ ಮತ್ತು ಸ್ಪೀಚ್ ಇನ್‌ಪುಟ್, ಟ್ರಾನ್ಸ್‌ಲೇಷನ್ ಸಿಸ್ಟಂ. ಇತ್ಯಾದಿ ಸಂಶೋಧನೆಗಳನ್ನು ವಾಣಿಜ್ಯ ಉದ್ದೇಶಗಳಿಗಾಗಿ ಸೂಕ್ತ ಉತ್ಪನ್ನಗಳನ್ನಾಗಿ ಪರಿವರ್ತಿಸಿ ಆಸಕ್ತ, ಸಾಮಾನ್ಯ ಬಳಕೆದಾರರಿಗೆ ತಲುಪಿಸುವ ಕೆಲಸವನ್ನು ಶೀಘ್ರವಾಗಿ ಮಾಡಬೇಕಾಗಿದೆ. ಇದು ಸರ್ಕಾರದಿಂದ ಮಾತ್ರವೇ ಸಾಧ್ಯವಾಗದ ಕೆಲಸ. ಇದಕ್ಕಾಗಿ ಖಾಸಗಿಯವರ ಸಹಭಾಗಿತ್ವದ ಅಗತ್ಯವಿದೆ. ಇದಕ್ಕಾಗಿ  ದೊಡ್ಡ ಕಂಪನಿಗಳನ್ನು ನೆಚ್ಚಿಕೊಳ್ಳುವ ಬದಲು ಚಿಕ್ಕ ಕಂಪನಿಗಳಿಗೆ ವಹಿಸಿಕೊಟ್ಟಲ್ಲಿ ಉತ್ತಮವಾದ ಫಲಿತಾಂಶವನ್ನು ನಿರೀಕ್ಷಿಸಬಹುದು. ಅಲ್ಲದೆ, ಇಂತಹ ಕಾರ್ಯಯೋಜನೆಗಳಲ್ಲಿ ಮುಕ್ತ ತಂತ್ರಾಂಶ ಆಂದೋಲನದ ತಂತ್ರಜ್ಞರು ಮತ್ತು ಆಸಕ್ತರನ್ನು ಒಳಗುಮಾಡಿಕೊಳ್ಳುವುದು ಅಗತ್ಯವಿದೆ. ಸರ್ಕಾರವು ಹಲವು ಯೋಜನೆಗಳ ಅಡಿಯಲ್ಲಿ ಆರ್ಥಿಕ ನೆರವನ್ನು ಒದಗಿಸಿದರೆ ಮುಕ್ತ ತಂತ್ರಾಂಶ ರೂಪಿಸುವವರಿಗೆ ಉತ್ತೇಜನವನ್ನು ನೀಡಿದಂತಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...