ಕೆ.ಪಿ.ಪೂರ್ಣಚಂದ್ರ
ತೇಜಸ್ವಿಯವರು ಕನ್ನಡ ತಂತ್ರಾಂಶ ಕ್ಷೇತ್ರದ ಬಹುಆಯಾಮಗಳನ್ನು ಮತ್ತು ಕನ್ನಡಕ್ಕೆ ಆಗಲೇಬೇಕಾದ
ಕೆಲಸಕಾರ್ಯಗಳ ಅವಶ್ಯಕತೆಗಳ ಕುರಿತು ಜ್ಞಾನಪೀಠ
ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರರಿಗೆ ತಮ್ಮದೇ ಆದ ರೀತಿಯಲ್ಲಿ ವಿವರಿಸಿ ಮನವರಿಕೆ
ಮಾಡಿಕೊಟ್ಟಿದ್ದರು. ಅಂತಹ ಕೆಲಸಗಳು ಆಗದಿದ್ದರೆ ಕನ್ನಡಕ್ಕೆ ಆಗುವ ಅಪಾಯಗಳ ಕುರಿತು ಸಹ ಅವರು
ಎಚ್ಚರಿಸಿದ್ದರು. ಈ ಕೆಲಸಗಳು ಆಗುವಲ್ಲಿ ಸರ್ಕಾರಕ್ಕೆ ಒತ್ತಡ ಹಾಕುವ ಕೆಲಸವನ್ನು
ಮುಂದುವರೆಸುವಂತೆ ಕಂಬಾರರಿಗೆ ತೇಜಸ್ವಿ ಸಲಹೆಯನ್ನೂ ನೀಡಿದ್ದರು. ಅದರಂತೆ ಕಂಬಾರರು ಇಂದಿಗೂ
ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಸರ್ಕಾರ ಮತ್ತು ವಿಶ್ವವಿದ್ಯಾಲಯಗಳಿಗೆ ಹಲವು ರೀತಿಯಲ್ಲಿ
ಒತ್ತಡಗಳನ್ನು ಹಾಕುತ್ತಾ ತೇಜಸ್ವಿಯವರ ಆಶಯಗಳನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದಾರೆ.
ಡಾ.ಚಂದ್ರಶೇಖರ
ಕಂಬಾರರೂ ಸೇರಿದಂತೆ ಹಲವು ತಜ್ಞರನ್ನು ಸದಸ್ಯರನ್ನಾಗಿಸಿ ಡಾ.ಕೆ.ಚಿದಾನಂದಗೌಡರ ಅಧ್ಯಕ್ಷತೆಯಲ್ಲಿ
ರಚಿಸಲಾದ ‘ಕನ್ನಡ ತಂತ್ರಾಂಶ ಸಲಹಾ ಸಮಿತಿ”ಯು ಶ್ರಮವಹಿಸಿ ಕಾರ್ಯನಿರ್ವಹಿಸಿ ೨೦೧೦ರಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ
ಸಲ್ಲಿಸಿತು. ತುರ್ತಾಗಿ ಆಗಬೇಕಾದ ೧೦ ಕೆಲಸಗಳು ಮತ್ತು ಕನ್ನಡ ಅಭಿವೃದ್ಧಿಗಾಗಿ ೧೦ ಸಲಹೆಗಳನ್ನು
ವರದಿಯು ಒಳಗೊಂಡಿತ್ತು. ವರದಿ ಸಲ್ಲಿಸಿ ವರ್ಷಗಳೇ ಕಳೆದರೂ ಶಿಫಾರಸ್ಸುಗಳು ಸರ್ಕಾರದ ಮಟ್ಟದಲ್ಲಿ
ಅನುಷ್ಠಾನಗೊಳ್ಳುವ ಲಕ್ಷಣಗಳು ಕಾಣಲಿಲ್ಲ. ಸಮಿತಿ ಅಧ್ಯಕ್ಷರಾಗಿ ದುಡಿದ ಚಿದಾನಂದಗೌಡರು ಸರ್ಕಾರದ
ಹಲವು ಇಲಾಖೆಗಳಿಗೆ ಎಡತಾಕಿ ಸಮಿತಿಯ ವರದಿಯ ಅನುಷ್ಠಾನಕ್ಕೆ ಒತ್ತಾಯಿಸಬೇಕಾದ ಅನಿವಾರ್ಯತೆಯೂ
ಒದಗಿತ್ತು.
೨೦೧೩ರ ಕನ್ನಡ
ರಾಜ್ಯೋತ್ಸವ ಸಂದರ್ಭದಲ್ಲಿ ಅಂತರ್ಜಾಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸರ್ಕಾರದ
ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಡಾ.ಕೆ.ಚಿದಾನಂದಗೌಡರು ತಮ್ಮ ಅಭಿಪ್ರಾಯಗಳನ್ನು ಹೀಗೆ
ತಿಳಿಸಿದ್ದಾರೆ : “ತುರ್ತು ಜಾರಿಗೊಳ್ಳಲೇಬೇಕಾದ ಕೆಲಸಗಳನ್ನು ಶಿಫಾರಸ್ಸು ಮಾಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ
ಪತ್ರ ಬರೆದು ನೆನಪಿಸುವ ಕೆಲಸ ಮಾಡಿದೆವು. ಆದರೂ, ಯಾವುದೇ ಪ್ರಯೋಜನವಾಗದೆ ಸುಖಾ ಸುಮ್ಮನೆ ಸಮಯ ಹಾಳು
ಮಾಡಿಕೊಂಡೆವೇನೋ ಎನ್ನಿಸಿತು” ಎಂದಿದ್ದಾರೆ. “ಪ್ರಮುಖ ಅಂಶಗಳ ಪೈಕಿ ನಾಲ್ಕು ಅಂಶಗಳನ್ನು ಮೊದಲ ಹಂತದಲ್ಲಿ
ಕೈಗೆತ್ತಿಕೊಳ್ಳುವಂತೆ ಸಹ ಸಲಹೆ ಮಾಡಿದ್ದೆವು. ನಮ್ಮ ಈ ಶಿಫಾರಸ್ಸು ಜಾರಿ ಸಂಬಂಧ ಸರಕಾರ
ಕರೆದಿದ್ದ ಟೆಂಡರ್ನಲ್ಲಿ ಭಾಗವಹಿಸಲು ರಾಜ್ಯದ ಯಾವೊಂದು ದೊಡ್ಡ ಕಂಪನಿಗಳು ಮುಂದೆ ಬರಲಿಲ್ಲ.
ಕಡೆಗೆ ಹಾಸನದ ಒಂದು ಸಣ್ಣ ಸಂಸ್ಥೆ ‘ಮಾರುತಿ ತಂತ್ರಾಂಶ’ದವರು, ಶ್ರೀ ಪೂರ್ಣಚಂದ್ರ ತೇಜಸ್ವಿ ಅವರಿಂದ ಪ್ರಭಾವಿತರಾಗಿ ಯಾವುದೇ ಮುಂಗಡ ಹಣವನ್ನು ಪಡೆಯದೆ
ಯೋಜನೆ ಜಾರಿಗೆ ಕೈಜೋಡಿಸಲು ಮುಂದಾದರು. ಕೆಲಸವನ್ನು ಮಾಡಿ ಕೆಲ ತಂತ್ರಾಂಶಗಳನ್ನು
ಸಿದ್ಧಪಡಿಸಿದರು. ಆದರೆ, ಸರಕಾರದಿಂದ ಅವರಿಗೆ ಸೂಕ್ತ ಸಹಕಾರ ಸಿಗಲಿಲ್ಲ. ಸಾಲ ಮಾಡಿ
ಯೋಜನೆ ಜಾರಿಗೆ ಶ್ರಮಿಸಿದ ಸಂಸ್ಥೆಗೆ ಸಲ್ಲಬೇಕಾದ ಹಣವನ್ನು ಪಾವತಿಸಲು ನಿರ್ಲಕ್ಷ್ಯ ವಹಿಸಿದರು.
ಸರಕಾರದಲ್ಲಿನ ಅಧಿಕಾರಿಗಳು ಕನ್ನಡ ತಂತ್ರಾಂಶದ ಬಗ್ಗೆ ಈ ರೀತಿ ನಿರ್ಲಕ್ಷ ಹೊಂದಿರಬೇಕಾದರೆ
ಕಂಪ್ಯೂಟರ್ನಲ್ಲಿ ಕನ್ನಡದ ಯಶಸ್ವಿ ಬಳಕೆ ಹೇಗೆ ಸಾಧ್ಯ?” ಎಂದು ಚಿದಾನಂದಗೌಡರು ಪ್ರಶ್ನಿಸಿದ್ದಾರೆ.
ಸರ್ಕಾರದ ಅಧಿಕಾರಿಗಳ
ನಿರ್ಲಕ್ಷ್ಯ ಕುರಿತು ಡಾ.ಚಂದ್ರಶೇಖರ ಕಂಬಾರರು ೨೦೧೩ರ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ
ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಬರೆದ ಪತ್ರದ ವಿವರಗಳು ಹೀಗಿವೆ : “ಕನ್ನಡ ತಂತ್ರಾಂಶದ ಸಮಗ್ರ ಅಭಿವೃದ್ಧಿಗಾಗಿ ಸಮಿತಿ ನೀಡಿದ
ವರದಿಯನ್ನು ಜಾರಿಗೆ ತರುವಂಥದ್ದು ಕನ್ನಡ ಉಳಿಸಿ ಬೆಳೆಸಲು ಈಗಿನ ಸರ್ಕಾರ ಮಾಡಲೇಬೇಕಿರುವ ಅತಿ
ತುರ್ತಿನ ಕಾರ್ಯ. ಈ ಬಗ್ಗೆ ನೀವು ತುರ್ತಾಗಿ ಗಮನ ಹರಿಸಿದರೆ ಒಳ್ಳೆಯದು. ಆಧುನಿಕ ತಂತ್ರಜ್ಞಾನದ
ಹಿನ್ನೆಲೆಯಲ್ಲಿ ಕನ್ನಡ ತಂತ್ರಾಂಶ ಅಭಿವೃದ್ಧಿಪಡಿಸುವ ಸಲುವಾಗಿ ಬಿ.ಎಸ್.ಯಡಿಯೂರಪ್ಪ ಅವರು
ಮುಖ್ಯಮಂತ್ರಿ ಆಗಿದ್ದಾಗ ೨ ಕೋಟಿ ರೂ.ಗಳನ್ನು ಮೀಸಲಿಟ್ಟು, ಡಾ.ಕೆ.ಚಿದಾನಂದಗೌಡ ಅವರ ನೇತೃತ್ವದ ಸಮಿತಿ ರಚಿಸಿದ್ದರು.
ಅದಕ್ಕೆ ನಾನು ಕೂಡ ಸದಸ್ಯನಾಗಿದ್ದೆ. ತಂತ್ರಾಂಶ ಅಭಿವೃದ್ಧಿ ಸಂಬಂಧ ಕೇವಲ ಒಂದೂವರೆ ವರ್ಷದಲ್ಲಿ
೭೭ ಪುಟಗಳ ವರದಿಯನ್ನು ಸಮಿತಿ ರಚಿಸಿತ್ತು. ಈಗ ಆ ವರದಿ ಸಲ್ಲಿಸಿ ಮೂರು ವರ್ಷಕ್ಕೂ ಅಧಿಕ ಕಾಲ
ಕಳೆದಿದೆ. ಇದುವರೆಗೂ ಮೂರು ಬಾರಿ ನಾನು ನಿಮ್ಮನ್ನು ಭೇಟಿಯಾಗಿ ಆ ವಿಷಯ ಪ್ರಸ್ತಾಪಿಸಿದ್ದೇನೆ. ಈ
ವಿಷಯವಾಗಿ ನೀವು ಇದು ಮೂರನೇ ಸಲ ನಮ್ಮಲ್ಲಿಗೆ ಬರುತ್ತಿರುವುದು ಎಂದು ನೀವೇ ಹೇಳಿದ್ದರೂ ಸಂಬಂಧಿತ
ಅಧಿಕಾರಿಗಳು ವರದಿ ಅನುಷ್ಠಾನಕ್ಕೆ ಮನಸ್ಸು ಮಾಡುತ್ತಿಲ್ಲ. ಎಲ್ಲರೂ ಮಾಡೋಣ ಎನ್ನುತ್ತಾರೆ ವಿನಾ
ಮಾಡುವುದಿಲ್ಲ. ಮಾಡುವುದಿಲ್ಲ ಎನ್ನುವುದಕ್ಕೆ ಮಾಡೋಣ ಎನ್ನುವುದೇ ಪರ್ಯಾಯ ಪದವೋ ಗೊತ್ತಿಲ್ಲ..!
ಸರ್ಕಾರ ಈಗಲಾದರೂ ಆ ಬಗ್ಗೆ ಎಚ್ಚೆತ್ತು ಚಿದಾನಂದಗೌಡ ವರದಿ ಅನುಷ್ಠಾನದ ಬಗ್ಗೆ ತಕ್ಷಣ
ಕ್ರಮಕೈಗೊಳ್ಳಬೇಕು. ಏಕೆಂದರೆ, ತಡವಾದಷ್ಟೂ ಹಾನಿ ಹೆಚ್ಚು. ಆಮೇಲೆ ಆ ಬಗ್ಗೆ ಮರುಗಬಹುದಷ್ಟೇ
ವಿನಾ ಬೇರೇನೂ ಮಾಡಲು ಸಾಧ್ಯವಿಲ್ಲ. ಈ ನಡುವೆ ಹಿಂದಿನ ಸರ್ಕಾರ ಇದ್ದಾಗ ವರದಿಯಲ್ಲಿನ ಒಂದು
ಶಿಫಾರಸಿನಂತೆ ಕೆಲ ಫಾಂಟ್ಗಳ ರಚನೆಗಾಗಿ ಟೆಂಡರ್ ಕರೆದಿತ್ತು. ಟೆಂಡರ್ ಪ್ರಕಾರ ಕೆಲಸ ಕೂಡ
ಮುಗಿದಿತ್ತು. ಆದರೆ, ಸಂಬಂಧಪಟ್ಟವರಿಗೆ ನೀಡಬೇಕಾದ ಹಣ ಇನ್ನೂ ಪೂರ್ತಿಯಾಗಿ ಪಾವತಿಯಾಗಿಲ್ಲ. ವ್ಯವಸ್ಥೆ
ಹೀಗಿರುವಾಗ ಇತರ ಶಿಫಾರಸುಗಳ ಪ್ರಕಾರ ಉಳಿದ ಕೆಲಸಗಳನ್ನು ಮಾಡಿಕೊಡುವಂತೆ ಯಾರನ್ನಾದರೂ
ಕೇಳುವುದಾದರೂ ಹೇಗೆ ಸಾಧ್ಯ?”
೨೦೧೪ರಲ್ಲಿ ಕನ್ನಡ
ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸಿದ್ಧಗೊಂಡ ಒಂದಷ್ಟು ಯೂನಿಕೋಡ್ ಫಾಂಟ್ಗಳು, ಸ್ಮಾರ್ಟ್ಫೋನ್ ಆಪ್ಗಳು, ಫಾಂಟ್ ಪರಿವರ್ತಕಗಳನ್ನು ಸಾರ್ವಜನಿಕ ಬಳಕೆಗಾಗಿ ಬಿಡುಗಡೆ
ಮಾಡಲಾಯಿತು. ಇದನ್ನು ಹೊರತುಪಡಿಸಿ, ವರದಿಯ ಪ್ರಮುಖ ಶಿಫಾರಸ್ಸುಗಳು ಇಂದಿಗೂ ಅನುಷ್ಠಾನಗೊಳ್ಳದೆ
ವರದಿಯು ಮೂಲೆಗುಂಪಾಗಿದೆ. ಇಷ್ಟಕ್ಕೂ, ಡಾ.ಕೆ.ಚಿದಾನಂದಗೌಡ ಸಮಿತಿಯ ವರದಿಯ ಶಿಫಾರಸ್ಸುಗಳು ಏನು
ಎಂಬುದನ್ನು ನೋಡೋಣ.
ತುರ್ತಾಗಿ ಆಗಬೇಕಾದ ಕೆಲಸಗಳು :
- ಆಸ್ಕಿಯಿಂದ ಯೂನಿಕೋಡ್ಗೆ ಪರಿವರ್ತಕಗಳು
- ಯೂನಿಕೋಡ್ನಲ್ಲಿ ಅಕ್ಷರಶೈಲಿಗಳ ತಯಾರಿಕೆ
- ಲಿನಕ್ಸ್ ಆಧಾರಿತ ಮುಕ್ತ ಆಕರ ತಂತ್ರಾಂಶ
- ಮೊಬೈಲ್ ಫೋನ್ಗಳಿಗಾಗಿ ಯೂನಿಕೋಡ್ ರೆಂಡರಿಂಗ್ ಎಂಜಿನ್
- ಇತರ ರಾಜ್ಯ ಮತ್ತು ಪರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಾಹಿತ್ಯದ ಕಲಿಕೆಗಾಗಿ ವಾಸ್ತವಸದೃಶ ವಿಶ್ವವಿದ್ಯಾನಿಲಯ (ವರ್ಚುವಲ್ ಯುನಿವರ್ಸಿಟಿ) ಸ್ಥಾಪನೆ ಮತ್ತು ಕನ್ನಡ ಕಲಿಕೆ ತಂತ್ರಾಂಶದ ತಯಾರಿಸುವುದು
- ಕನ್ನಡ ಬ್ರೈಲ್ ಸಂಬಂಧಿತ ತಂತ್ರಾಂಶ
- ಆಪ್ಟಿಕಲ್ ಕ್ಯಾರೆಕ್ಟರ್ ರೆಕೆಗ್ನಿಶನ್
- ಕನ್ನಡದಲ್ಲಿ ಧ್ವನಿ ಸಂಸ್ಕರಣೆ
- ಕನ್ನಡ ಕಲಿಕಾ ತಂತ್ರಾಂಶದ ತಯಾರಿ ಮತ್ತು ‘ಕನ್ನಡ ಲೋಗೋ’ವನ್ನು ಪಠ್ಯಕ್ರಮದಲ್ಲಿ ಅಳವಡಿಸುವುದು
- ಅಂತರ್ಜಾಲದಲ್ಲಿ ನಿಘಂಟುಗಳನ್ನು ಸೇರಿಸುವುದು * ಪಾರಿಭಾಷಿಕ ಪದಕೋಶದ ತಯಾರಿ ಮತ್ತು ಅವುಗಳನ್ನು ಅಂತರ್ಜಾಲದಲ್ಲಿ ಸೇರಿಸುವುದು
- ಕನ್ನಡ ಭಾಷಾ ಸಂಸ್ಕರಣೆಯ ತಂತ್ರಾಂಶದ ತಯಾರಿ
- ಸಾರ್ವಜನಿಕ ಕ್ಷೇತ್ರಕ್ಕೆ ಅಗತ್ಯವಾದ ತಂತ್ರಾಂಶಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವುದು
- ಅಂತರ್ಜಾಲದಲ್ಲಿ ನಿಖರ ಮಾಹಿತಿಯನ್ನು ನೀಡುವ ಕನ್ನಡ ವಿಶ್ವಕೋಶವನ್ನು ಸ್ಥಾಪಿಸುವುದು
- ಕನ್ನಡದ ಮೌಲಿಕ ಕೃತಿಗಳನ್ನು ಅಂತರ್ಜಾಲದಲ್ಲಿ ಇರಿಸುವುದು.
ಸರಕಾರಕ್ಕೆ ಸಲಹೆಗಳು :
- ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸುವುದು ಮತ್ತು ಕನ್ನಡದ ಎಲ್ಲ ಕೆಲಸಗಳು ಮತ್ತು ಅಂತರ್ಜಾಲ ತಾಣಗಳು ಯುನಿಕೋಡಿನಲ್ಲೇ ಇರಬೇಕೆಂದು ಸುತ್ತೋಲೆ ಹೊರಡಿಸುವುದು.
- ಕರ್ನಾಟಕ ಸರ್ಕಾರ ವ್ಯಾಪಕವಾಗಿ ಬಳಸಿರುವ ಮತ್ತು ಬಳಸುತ್ತಿರುವ ಪದ ಸಂಸ್ಕರಣೆ ಮತ್ತು ಮುದ್ರಣ ಕಾರ್ಯಗಳಿಗಾಗಿ ಯೋಗ್ಯ ಸುಂದರ ಯೂನಿಕೋಡ್ ಅಕ್ಷರ ಶೈಲಿಗಳು ಲಭ್ಯವಿಲ್ಲವಾದುದರಿಂದ, ಪದಸಂಸ್ಕರಣೆಯಲ್ಲಿ ಅವು ಲಭ್ಯವಾಗುವ ತನಕ, ಅತ್ಯಾವಶ್ಯಕ ಎನಿಸಿದಲ್ಲಿ ಮಾತ್ರ, ಹಿಂದೆ ಬಳಸಲಾಗಿರುವ ಹಳೆಯ ಸುಂದರ ಅಕ್ಷರ ಶೈಲಿಗಳ ಬಳಕೆಗೆ ಸ್ವಲ್ಪ ಕಾಲ ಅವಕಾಶ ನೀಡುವುದು. ಆದರೆ, ಮೂಲ ಮಾಹಿತಿ ಮಾತ್ರ ಯೂನಿಕೋಡ್ನಲ್ಲೇ ಇರತಕ್ಕದ್ದು.
- ಕನ್ನಡದ ಯೂನಿಕೋಡ್ ಅಕ್ಷರ ಶೈಲಿಗಳ ಲೋಪದೋಷಗಳ ನಿವಾರಣೆಗೆ ಮತ್ತು ಸುಂದರ ಯೂನಿಕೋಡ್ ಅಕ್ಷರಶೈಲಿಗಳ ತಯಾರಿಗೆ ಶೀಘ್ರವಾಗಿ ಕ್ರಮ ಕೈಗೊಳ್ಳುವುದು.
- ಕರ್ನಾಟಕ ಸರಕಾರದ ಕೆಲಸಗಳಿಗೆಲ್ಲ ಸ್ವತಂತ್ರ ಮತ್ತು ಮುಕ್ತ ತಂತ್ರಾಂಶವನ್ನೇ ಬಳಸಬೇಕೆಂದು, ಮತ್ತು ವಿಶೇಷವಾದ ಕೆಲಸಕ್ಕೆ ಮುಕ್ತ ತಂತ್ರಾಂಶ ಅಲಭ್ಯವಾಗಿದ್ದಾಗ ಮಾತ್ರ, ವ್ಯಾಪಾರೀ ತಂತ್ರಾಂಶ ಬಳಸಬೇಕೆಂದು ಸುತ್ತೋಲೆ ಹೊರಡಿಸುವುದು.
- ಮೊಬೈಲ್ ಫೋನ್ ತಯಾರಕರಿಗೆ ಯೂನಿಕೋಡ್ ಶಿಷ್ಟತೆಯನ್ನು ಅಳವಡಿಸಲು ನಿರ್ದೇಶಿಸುವುದು.
- ಕನ್ನಡ ತಂತ್ರಾಂಶ ಮತ್ತು ಮಾಹಿತಿ ತಂತ್ರಜ್ಞಾನ ಸಲಹಾ ಸಮಿತಿಯನ್ನು ನೇಮಿಸುವುದು.
- ಯೂನಿಕೋಡ್ ಒಕ್ಕೂಟಕ್ಕೆ ಕಾಲಕಾಲಕ್ಕೆ ಸರಿಯಾಗಿ ಅಗತ್ಯವಾದ ಮಾಹಿತಿಯನ್ನು ಸಲಹಾಸಮಿತಿಯ ಮೂಲಕ ಒದಗಿಸುವುದು.
- ಕನ್ನಡ ತಂತ್ರಾಂಶ ಅಭಿವೃದ್ಧಿ ನಿಧಿಯನ್ನು ಸ್ಥಾಪಿಸುವುದು.
- ಓಪನ್ ಆಫೀಸ್ ಬಳಕೆಯನ್ನು ಜನಪ್ರಿಯಗೊಳಿಸಲು ಸರಕಾರೀ ಸಿಬ್ಬಂದಿಗಳಿಗೆ ಆಗಾಗ ತರಬೇತಿ ಶಿಬಿರಗಳನ್ನು ಏರ್ಪಡಿಸುವುದು.
- ಮಾಹಿತಿಸಿಂಧು ಯೋಜನೆಯಲ್ಲಿ ಶೈಕ್ಷಣಿಕ ಮಾಹಿತಿಗಳು ಕನ್ನಡದಲ್ಲಿಯೇ ಇರಲು ಮತ್ತು ಗಣಕ ಶಿಕ್ಷಣ ಕನ್ನಡದ ಮೂಲಕವೇ ಆಗಲು ಕ್ರಮ ಕೈಗೊಳ್ಳುವುದು.
- ಉತ್ತಮ ಕನ್ನಡ ತಂತ್ರಾಂಶ ತಯಾರಕರಿಗೆ ಪ್ರತಿ ವರ್ಷವೂ ಉನ್ನತ ಮೌಲ್ಯದ ಬಹುಮಾನಗಳನ್ನು ನೀಡುವುದು.
- ಪ್ರತಿಯೊಂದು ವಿಶ್ವವಿದ್ಯಾನಿಲಯವೂ ಪ್ರತೀ ವರ್ಷ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಯ ಕುರಿತು ಒಂದು ವಿಶ್ವಮಟ್ಟದ ಸಮಾವೇಶವನ್ನು ನಡೆಸುವಂತೆ ಸುತ್ತೋಲೆ ಹೊರಡಿಸುವುದು, ಮತ್ತು ಅದಕ್ಕೆ ಧನಸಹಾಯ ನೀಡುವುದು.
- ಕನ್ನಡದ ವಿಶ್ವಕೋಶವು ನಿರಂತರವಾಗಿ ಅಂತರ್ಜಾಲದಲ್ಲಿ ಲಭ್ಯವಾಗಿರುವಂತೆ ವ್ಯವಸ್ಥೆ ಮಾಡುವುದು, ಮತ್ತು ಇದರ ನಿರ್ವಹಣೆಗಾಗಿ ಖಾಸಗಿ ಸಂಸ್ಥೆ ಮತ್ತು ಸರ್ಕಾರದ ಪ್ರತಿನಿಧಿಗಳಿರುವ ಒಂದು ಆಡಳಿತ ಮಂಡಳಿಯನ್ನು ಸ್ಥಾಪಿಸುವುದು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ