ವಿಷಯಕ್ಕೆ ಹೋಗಿ

40. ಡಿಜಿಟಲ್ ಕನ್ನಡದ ಸಮಸ್ಯೆಗಳಿಗೆ ಯೂನಿಕೋಡ್ ಶಿಷ್ಟತೆ ಒದಗಿಸಿರುವ ಪರಿಹಾರಗಳು




ವಿದ್ಯುನ್ಮಾನ ಉಪಕರಣಗಳ ಕಾರ್ಯಾಚರಣೆ ವ್ಯವಸ್ಥೆ (ಓ.ಎಸ್) ಮತ್ತು ಆನ್ವಯಿಕ ತಂತ್ರಾಂಶಗಳು (ಆಪ್ಲಿಕೇಷನ್‌ಗಳು, ಆಪ್‌ಗಳು) ಇಂದು ಇಂಗ್ಲಿಷೇತರ ಭಾಷಾ ಬಳಕೆಯಲ್ಲಿಯೂ ಸಹ ಸದೃಢಗೊಂಡಿವೆ. ಅಂತಹ ಸದೃಢತೆಯನ್ನು ವಿದ್ಯುನ್ಮಾನ ಉಪಕರಣಗಳಿಗೆ ತುಂಬುವಲ್ಲಿ ತಂತ್ರಾಂಶ ಸಂಶೋಧಕರು ಮತ್ತು ಆಭಿವೃದ್ಧಿಗಾರರು ಎದುರಿಸಿದ ತಂತ್ರಜ್ಞಾನದ ಸವಾಲುಗಳೇನು? ಸ್ವಾರಸ್ಯಗಳೇನು? ಬಳಕೆದಾರರು ಎದುರಿಸಿರುವ, ಇನ್ನೂ ಎದುರಿಸುತ್ತಲೇ ಇರುವ ಭಾಷೆಗೆ ಸಂಬಂಧಿಸಿದ, ಲಿಪಿಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳೇನು? ಅಂತಹ ಸಮಸ್ಯೆಗಳಿಗೆ ಪರಿಹಾರಗಳೇನು?  ಸಹಜ ಭಾಷೆಯಾದ ಕನ್ನಡವನ್ನು ಕಂಪ್ಯೂಟರಿನಲ್ಲಿ ಬಳಸುವ ಸಂದರ್ಭದಲ್ಲಿ ಇಂತಹ ಪ್ರಶ್ನೆಗಳಲ್ಲಿ ಕೆಲವಕ್ಕೆ ಉತ್ತರವನ್ನು ಈಗಾಗಲೇ ಕಂಡುಕೊಂಡಿರುವ ಬಗ್ಗೆ ಮತ್ತು ಕೆಲವಕ್ಕೆ ಇನ್ನೂ ಉತ್ತರವನ್ನು ಹುಡುಕುತ್ತಲೇ ಇರುವ ಪ್ರಯತ್ನಗಳೆಲ್ಲವೂ ಕುತೂಹಲಕಾರಿಯಾಗಿವೆ.  ತಂತ್ರಾಂಶ ಬಳಕೆದಾರರಿಗೆ ಇಂತಹ ವಿಷಯಗಳನ್ನು ತಿಳಿದುಕೊಳ್ಳುವುದರಿಂದ ಸಮಸ್ಯೆಗಳಿಗೆ ಪರಿಹಾರಗಳು ಇವೆ ಎಂಬ ಅರಿವು ಉಂಟಾಗುತ್ತದೆ.

ಇತಿಹಾಸ ತಿಳಿಯದವರು ವರ್ತಮಾನವನ್ನು ಆರ್ಥೈಸಿಕೊಳ್ಳಲಾರರು ಮತ್ತು ಇತಿಹಾಸವನ್ನು ಅರಿಯದೆ ಭವಿಷ್ಯವನ್ನು ರೂಪಿಸಿಕೊಳ್ಳುವುದು ಕಷ್ಟಕರ ಎಂಬ ಮಾತೊಂದಿದೆ. ಇದು ತಂತ್ರಜ್ಞಾನ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ವಿದ್ಯುನ್ಮಾನ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡವನ್ನು ಬಳಸುವಲ್ಲಿನ ಅನೇಕ ಸಮಸ್ಯೆಗಳಿಗೆ ಪರಿಹಾರಗಳು ಲಭ್ಯವಿದ್ದರೂ ಅವುಗಳ ಪರಿಚಯವಿಲ್ಲದ ಯುವಜನಾಂಗಕ್ಕೆ ಅರಿವಿನ ಕೊರತೆ ಇರುವುದು ಕಂಡುಬರುತ್ತಿದೆ. ಇಂತಹ ಅರಿವಿನ ಕೊರತೆಯಿಂದಾಗಿ ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆಯಲ್ಲಿ ಸಮಸ್ಯೆಗಳಿವೆ ಎಂಬ ಮಿಥ್ಯೆಯು ಮುಂದುವರೆದೇ ಇದೆ. ಡಿಜಿಟಲ್ ಲೋಕದಲ್ಲಿ ಕನ್ನಡ ಬಳಕೆಯ ಕುರಿತಾಗಿ ತಂತ್ರಜ್ಞಾನದ ಸಮಸ್ಯೆಗಳು ಪರಿಹಾರಗೊಂಡಿವೆ ಎಂಬ ವಿಷಯ ವಿಚಾರಗಳು ಸಾರ್ವತ್ರಿಕವಾಗಿ ಎಲ್ಲರಿಗೂ ತಿಳಿದಿಲ್ಲ. ವಿವಿಧ ಉದ್ದೇಶಗಳಿಗಾಗಿ ಬಳಕೆಯಲ್ಲಿರುವ ತಂತ್ರಾಂಶಗಳಲ್ಲಿ ಈ ತಂತ್ರಜ್ಞಾನಗಳು ಸಮರ್ಥವಾಗಿ ಅಳವಡಿಸಿರದ ಕಾರಣ, ಬಳಕೆಯ ಚಿಕ್ಕಪುಟ್ಟ ತೊಡಕುಗಳಿವೆಯಷ್ಟೇ ಹೊರತು, ಅವು ಮಹಾನ್ ಸಮಸ್ಯೆಗಳೇನಲ್ಲ. ಅರಿವಿನ ಕೊರತೆಯನ್ನು ನೀಗಿಸಿಕೊಂಡರೆ ಚಿಕ್ಕಪುಟ್ಟ ಸಮಸ್ಯೆಗಳು ಬಗೆಹರಿಯುತ್ತವೆ.

ವಿವಿಧ ರೀತಿಯ ಬಳಕೆದಾರರಿಗೆ ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆಗಾಗಿ ಕ್ರಮಬದ್ಧ ಶಿಕ್ಷಣ ಸೌಲಭ್ಯಗಳು, ಕೌಶಲಾಭಿವೃದ್ಧಿಯ ವ್ಯವಸ್ಥಿತ ತರಬೇತಿಗಳು ದುರ್ಲಭ. ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನವನ್ನು ತಿಳಿಸಿಕೊಡುವ ಸಾಹಿತ್ಯಕ್ಕಾಗಿ ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಅಂತರಜಾಲದಲ್ಲಿ ಬಹಳಷ್ಟು ಮಾಹಿತಿಗಳು ಬಿಡಿಬಿಡಿಯಾಗಿ ಲಭ್ಯವಿದ್ದರೂ ಅದನ್ನು ಹುಡುಕಿ ಹೆಕ್ಕಿತೆಗೆಯುವುದು ಕೌಶಲ್ಯಕ್ಕೆ ಸಂಬಂಧಿಸಿದ ವಿಷಯ.  ಡಿಜಿಟಲ್ ಕನ್ನಡದ ಸಮಗ್ರ ಮಾಹಿತಿಯು ಎಲ್ಲರಿಗೂ ಕೈಗೆಟುಕುವಂತೆ ಒಂದೆಡೆ ಲಭ್ಯವಿಲ್ಲ.  ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆಯ ಸಮಸ್ಯೆಗಳ ಪರಿಹಾರಕ್ಕಾಗಿ ಇತಿಹಾಸದ ಪುಟಗಳನ್ನು ಹುಡುಕಾಡಬೇಕು. ಕಳೆದ ಜುಲೈನಿಂದ ಪ್ರಕಟವಾಗುತ್ತಿರುವ ಡಿಜಿಟಲ್ ಕನ್ನಡಅಂಕಣದಲ್ಲಿನ ವಿಷಯ-ಮಾಹಿತಿಗಳಲ್ಲಿ ಕನ್ನಡ ತಂತ್ರಜ್ಞಾನ ಕುರಿತ ಇತಿಹಾಸವಿದೆ. ವಿಶ್ವಾದ್ಯಂತ ಇರುವ ಓದುಗರಿಗೂ ಲಭ್ಯವಾಗಲೆಂಬ ಸದುದ್ದೇಶದಿಂದ ಈ ಅಂಕಣಬರಹಗಳನ್ನು ವಾರ್ತಾಭಾರತಿಯ ನ್ಯೂಸ್-ಪೋರ್ಟಲ್‌ನಲ್ಲಿ <http://www.varthabharati.in/article/suggi>  ಹಾಕಲಾಗಿದೆ.  ಹಲವು ಕಾರಣಗಳಿಂದ ಕಾರಣದಿಂದಾಗಿ ಡಿಜಿಟಲ್ ಪಠ್ಯವನ್ನು ಶಾಶ್ವತವಾಗಿ ಜಾಲತಾಣದಲ್ಲಿ ಇರಿಸಲಾಗುವುದಿಲ್ಲ.  ಕಾಲಾನಂತರದಲ್ಲಿ ಪ್ರಕಟಿತ ಬರಹವು ಅಲಭ್ಯವಾಗುತ್ತದೆ. ಈ ಅಂಕಣದ ಎಲ್ಲ ಬರಹಗಳು ಒಂದೆಡೆಗೆ ದೊರೆಯುವಂತೆ ಸರಳವಾದ ಬ್ಲಾಗ್ವೊಂದನ್ನು ಈಗ ರಚಿಸಲಾಗಿದೆ. <http://sathya-digitalkannada.blogspot.in>ನಲ್ಲಿ ಇದುವರೆಗಿನ ೩೮ ಬರಹಗಳು ಲಭ್ಯ. ಮುಂಬರುವ ಲೇಖನಗಳೂ ಇದರಲ್ಲಿ ಸೇರ್ಪಡೆಗೊಳ್ಳಲಿವೆ. ವಿದ್ಯುನ್ಮಾನ ಉಪಕರಣಗಳಲ್ಲಿ ಕನ್ನಡ ಬಳಕೆ ಕುರಿತ ಈ ವೈವಿಧ್ಯಮಯ ಬರಹಗಳು ಹಲವು ವಿಷಯಗಳ ಮೇಲೆ ಬೆಳಕುಚೆಲ್ಲಿವೆ. ಈ ಬ್ಲಾಗ್-ವಿಳಾಸದ ಲಿಂಕ್‌ನ್ನು ಇ-ಮೇಲ್ ಅಥವಾ ವಾಟ್ಸ್‌ಆಪ್ ಮೂಲಕ ಬೇರೆಯವರಿಗೆ ಕಳುಹಿಸಿದರೆ ಅವರೂ ಸಹ ಈ ಬರಹಗಳನ್ನು ಅಂತರಜಾಲದಲ್ಲಿಯೇ ಓದಬಹುದು. ಕನ್ನಡಕ್ಕೆ ಯೂನಿಕೋಡ್ ಏಕೆ ಬೇಕು ಎಂಬ ಪ್ರಶ್ನೆಗೆ ಕೆಲವು ಬರಹಗಳಲ್ಲಿ ಉತ್ತರಗಳಿವೆ.

ಕನ್ನಡದ ಮುದ್ರಿತ ಲೇಖನದ ಫಾಂಟ್ ಮತ್ತು ಬ್ಲಾಗ್-ಪಠ್ಯದ ಫಾಂಟುಗಳು ಬೇರೆಬೇರೆಯಾಗಿರುವುದು ಸಾಮಾನ್ಯ. ಮುದ್ರಣಕ್ಕೆ ಬಳಸಿರುವುದು ನುಡಿಹೆಸರಿನ ಆಸ್ಕಿ-ಫಾಂಟು. ಬ್ಲಾಗ್‌ನಲ್ಲಿ ಇರುವುದು ಯೂನಿಕೋಡ್ ಫಾಂಟ್. ಬ್ಲಾಗ್‌ನಲ್ಲಿ ನುಡಿಯ ಆಸ್ಕಿ-ಫಾಂಟ್ಬಳಸಿ ಟೈಪ್‌ಮಾಡಲಾದ ಬರಹವನ್ನು ನೇರವಾಗಿ ಕಾಪಿ-ಪೇಸ್ಟ್ ಮಾಡಿದರೆ, ಅದು ವಿಚಿತ್ರಲಿಪಿಯಾಗಿ ಕಂಡುಬರುತ್ತದೆ. ಪಠ್ಯವನ್ನು ಮತ್ತೊಮ್ಮೆ ಯೂನಿಕೋಡ್ ಫಾಂಟ್‌ನಲ್ಲಿ ಟೈಪ್‌ಮಾಡುವ ಅಗತ್ಯವಿಲ್ಲ. ಆಸ್ಕಿ-ಫಾಂಟ್ ಪಠ್ಯವನ್ನು ಯೂನಿಕೋಡ್ ಫಾಂಟ್‌ಗೆ ಪರಿವರ್ತನೆ ಮಾಡಿದರೆ ಸಾಕು. ಇಂತಹ ಪರಿವರ್ತನೆಯನ್ನು ಪಠ್ಯದ ಟ್ರಾನ್ಸ್‌ಕೋಡಿಂಗ್ಎಂದು ಕರೆಯಲಾಗುತ್ತದೆ. ಮುದ್ರಣದ ಉದ್ದೇಶಕ್ಕಾಗಿ ಟೈಪ್‌ಮಾಡಲಾದ ಪಠ್ಯವು ಬೇರೆಬೇರೆ ಉದ್ದೇಶಗಳಿಗೆ ಉಪಯೋಗಕ್ಕೆ ಬರುವುದಿಲ್ಲ. ವಿಶೇಷವಾಗಿ ಅಂತರಜಾಲದಲ್ಲಿ ಅದೇ ಪಠ್ಯವನ್ನು ಬಳಸಬೇಕೆಂದರೆ ಅವುಗಳ ಹಳೆಯ ಕೋಡ್‌ಗಳನ್ನು ಹೊಸದಕ್ಕೆ ಬದಲಾಯಿಸಲೇಬೇಕು ಹಳೆಯದೆಂದರೆ ಆಸ್ಕಿ-ಕೋಡ್‌ಗಳು. ಹೊಸತು ಎಂದರೆ ಯೂನಿಕೋಡ್. ಉಚಿತ ಯೂನಿಕೋಡ್ ಪರಿವರ್ತಕಗಳು ಇಂಟರ್‌ನೆಟ್‌ನಲ್ಲಿ ದೊರೆಯುತ್ತವೆ. ನುಡಿಯ ಆಸ್ಕಿ-ಫಾಂಟುಗಳು ಕನ್ನಡದ ಅಕ್ಷರಭಾಗಗಳು, ಇವುಗಳ ಸಂಕೇತ ಸಂಖ್ಯೆಗಳು ಈಗಾಗಲೇ ಬೇರೆಬೇರೆ ಭಾಷೆಗಳಿಗೆ ನಿಗದಿಯಾಗಿದ್ದು, ಕನ್ನಡಕ್ಕೆ ಸ್ಥಾನಮೀಸಲು ಇಲ್ಲ. ಬೇರೆಬೇರೆ ಭಾಷೆಗಳ ಅಕ್ಷರಸ್ಥಾನಗಳಲ್ಲಿ ಕನ್ನಡದ ಅಕ್ಷರಗಳನ್ನು ಅಳವಡಿಸಿಕೊಂಡಿರುವ ಕಾರಣ ಇದನ್ನು ಸ್ಥಳೀಯ ಶಿಷ್ಟತೆ ಎಂದು ಪರಿಗಣಿಸಬಹುದು. ಯೂನಿಕೋಡ್ ಎಂಬುದು ಜಾಗತಿಕ ಶಿಷ್ಟತೆಯಾಗಿದೆ. ಇದರಲ್ಲಿ ಕನ್ನಡಕ್ಕೆ ಪ್ರತ್ಯೇಕ ಕೋಡ್‌ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ. ನುಡಿಎಂಬುದು ಒಂದು ಲಿಪಿತಂತ್ರಾಂಶ. ಅದರಲ್ಲಿ ಈಗ ಆಸ್ಕಿ-ಫಾಂಟುಗಳೂ ಇವೆ ಮತ್ತು ಯೂನಿಕೋಡ್ ಫಾಂಟುಗಳೂ ಇವೆ.  ಯೂನಿಕೋಡ್ ಎಂಬುದು ತಂತ್ರಾಂಶವಲ್ಲ ಅದೊಂದು ಶಿಷ್ಟತೆ. (ಸ್ಟ್ಯಾಂಡರ್ಡ್) ಇಲ್ಲಿ ಬೇರೆ ಬೇರೆ ಭಾಷೆಯ ಅಕ್ಷರಗಳ ಸ್ಥಾನದಲ್ಲಿ ಕನ್ನಡವು ಕುಳಿತಿಲ್ಲ, ಬದಲಾಗಿ ವಿದ್ಯುನ್ಮಾನ ಉಪಕರಣಗಳಲ್ಲಿ ವಿಶ್ವಭಾಷೆಗಳಂತೆ ಕನ್ನಡವೂ ಸಹ ತನ್ನದೇ ಆದ ಸ್ಥಾನಮಾನಗಳನ್ನು ಯೂನಿಕೋಡ್ ಮೂಲಕ ಗಳಿಸಿಕೊಂಡಿದೆ. ಸ್ಥಳೀಯ ಶಿಷ್ಟತೆಯು ಮುದ್ರಣ ಮಾಧ್ಯಮಕ್ಕೆ ಸ್ಥಳೀಯವಾಗಿ ಮಾತ್ರವೇ ಉಪಯೋಗಕ್ಕೆ ಬರುತ್ತಿದೆಯೇ ಹೊರತು ಜಾಗತಿಕವಾಗಿ ಅಂತರಜಾಲದಲ್ಲಿ ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯುಳ್ಳ ಫಾಂಟುಗಳು ಅತ್ಯಗತ್ಯ.  ಹೊಸನೀರು ಬಂದು ಹಳೆಯ ನೀರನ್ನು ಕೊಚ್ಚಿಕೊಂಡು ಹೋಯಿತು ಎಂಬುದು ಹಳೆಯ ಗಾದೆ. ಈಗ ಯೂನಿಕೋಡ್ ಬಂದು ಆಸ್ಕಿಯನ್ನು ಕೊಚ್ಚಿಕೊಂಡು ಹೋಗಿದೆ. ಇದು ಒಳ್ಳೆಯದಕ್ಕೆ ಅಗಿರುವ ಬದಲಾವಣೆ. ಸ್ಥಳೀಯವಾಗಿ ಇದು ಕನ್ನಡ ಎಂದು ಕಂಪ್ಯೂಟರಿಗೆ ಪ್ರತ್ಯೇಕವಾಗಿ ತಿಳಿಹೇಳಿದರೆ ಮಾತ್ರವೇ ಗುರುತಿಸಲ್ಪಡುತ್ತಿದ್ದ ಪಠ್ಯವು ಯೂನಿಕೋಡ್‌ನಿಂದಾಗಿ ಜಾಗತಿಕವಾಗಿ ಈಗ ಗುರುತಿಸಲ್ಪಡುತ್ತದೆ. ತಾಂತ್ರಿಕವಾಗಿ ಹೇಳಬೇಕೆಂದರೆ ಯೂನಿಕೋಡ್ ಪಠ್ಯಮಾಹಿತಿಗಳು ಎಂದಿಗೂ ಹಳತಾಗುವುದಿಲ್ಲ.
ಬರಹ, ನುಡಿ, ಕುವೆಂಪು ತಂತ್ರಾಂಶ ಇತ್ಯಾದಿಗಳಲ್ಲಿನ ಆಸ್ಕಿ-ಫಾಂಟ್‌ಗಳನ್ನು ಬಳಸಿ ಟೈಪ್‌ಮಾಡಲಾದ ಕನ್ನಡ ಪಠ್ಯವನ್ನು ಈಗಾಗಲೇ ಜಾಲತಾಣಗಳಲ್ಲಿ ಅಳವಡಿಸಿದ್ದರೆ, ಅಂತಹ ಪಠ್ಯವನ್ನು ಗೂಗಲ್ ಸರ್ಚ್‌ನಲ್ಲಿ ಸುಲಭವಾಗಿ ಹುಡುಕಲಾಗುವುದಿಲ್ಲ. ಆಧುನಿಕ ಸರ್ಚ್ ಇಂಜಿನ್‌ಗಳು ಯೂನಿಕೋಡ್‌ನ್ನು ಬೆಂಬಲಿಸುವ ಕಾರಣ, ಕನ್ನಡ ಪಠ್ಯವು ಯುನಿಕೋಡ್ ಫಾಂಟ್‌ನಲ್ಲಿದ್ದರೆ ಹುಡುಕುವುದು ಸುಲಭ. ಯುನಿಕೋಡ್‌ನಿಂದಾಗಿ ಕನ್ನಡದ ವಿಚಿತ್ರಲಿಪಿಗಳ ಸಮಸ್ಯೆ ಪರಿಹಾರವಾಗಿದೆ. ಕಾರ್ಯಾಚರಣೆ ವ್ಯವಸ್ಥೆಯ ಹಂತದಲ್ಲಿಯೇ ಕಂಪ್ಯೂಟರ್ ಕನ್ನಡವನ್ನು ಗುರುತಿಸುತ್ತದೆ. ಹೀಗಾಗಿ, ಯಾವುದೇ ಅಪ್ಲಿಕೇಷನ್ ತಂತ್ರಾಂಶಗಳಲ್ಲಿ ಇಂಗ್ಲಿಷ್‌ನಷ್ಟೇ ಸುಲಭವಾಗಿ ಕನ್ನಡವನ್ನು ಸಹ ನೇರವಾಗಿ ಬಳಸಬಹುದು.
ಹಿಂದೆ ಕಾರ್ಯತಂತ್ರ ಬಳಸಿ ಕನ್ನಡವನ್ನು ಅಳವಡಿಸಲಾಗಿತ್ತು. ಆಸ್ಕಿ-ಫಾಂಟುಗಳು ಆ ಕಾಲಕ್ಕೆ ಸ್ಥಳೀಯವಾಗಿ ಅನುಕೂಲವಾಗಿದ್ದವು. ಈಗ ಆಸ್ಕಿ ಶಿಷ್ಟತೆಯೇ ಹಳತಾಗಿದೆ. ಹಿಂದೆ ಕನ್ನಡವನ್ನು ಓ.ಎಸ್.ಗಳು ಗುರುತಿಸುತ್ತಿರಲಿಲ್ಲ. ಈಗ ಯುನಿಕೋಡ್ ಫಾಂಟ್‌ಗಳು ಬಳಕೆಗೆ ಬಂದ ನಂತರ ಕನ್ನಡವನ್ನು ಸಮಗ್ರವಾಗಿ ಕಂಪ್ಯೂಟರ್‌ನಲ್ಲಿ ಬಳಸಲು ಹಿಂದೆ ಇದ್ದ ಬಹುತೇಕ ತಂತ್ರಜ್ಞಾನದ ಸಮಸ್ಯೆಗಳು ಪರಿಹಾರಗೊಂಡಿವೆ.  ಇಂದು ಡೇಟಾಬೇಸ್ ಅಪ್ಲಿಕೇಷನ್‌ಗಳಲ್ಲಿಯೂ ಸಹ ಕನ್ನಡದ ಪಠ್ಯವನ್ನು ಸುಲಭವಾಗಿ ಬಳಸಲು ಸಾಧ್ಯವಾಗಿದೆ.  ಕನ್ನಡದ ಮಾಹಿತಿಯನ್ನು ಅಕಾರಾದಿಯಲ್ಲಿ ನೇರವಾಗಿ ವಿಂಗಡಿಸಿಕೊಳ್ಳುವ ಸೌಲಭ್ಯ ದೊರೆತಿದೆ. ಮೊದಲು ಆಸ್ಕಿ-ಫಾಂಟುಗಳಿದ್ದಾಗ ಇಂತಹ ವಿಂಗಡಣೆಗಾಗಿ ಸುತ್ತುಬಳಸು ಮಾರ್ಗಗಳನ್ನು ಅನುಸರಿಸಬೇಕಾಗಿತ್ತು. ಆಸ್ಕಿ-ಫಾಂಟುಗಳು ಕನ್ನಡಪಠ್ಯ ಅಂತರಜಾಲದಲ್ಲಿ ವಿಚಿತ್ರಲಿಪಿಗಳಾಗಿ ಕಾಣಿಸಿಕೊಳ್ಳುತ್ತಿತ್ತು. ಯೂನಿಕೋಡ್‌ನಿಂದಾಗಿ ಕನ್ನಡದಲ್ಲಿಯೇ ಜಾಲತಾಣಗಳನ್ನು (ವೆಬ್‌ಸೈಟ್) ನಿರ್ಮಿಸುವ ಸೌಲಭ್ಯ ದೊರೆತಿದೆ. ಬ್ಲಾಗ್, ಇ-ಮೇಯ್ಲ್ ಮತ್ತು ಚಾಟಿಂಗ್‌ಗಳಲ್ಲಿ ಕನ್ನಡ ಭಾಷೆಯನ್ನು ಹಾಸುಹೊಕ್ಕಾಗಿ ಬಳಸಲಾಗುತ್ತಿದೆ.

ಓ.ಎಸ್.ಮಟ್ಟದಲ್ಲಿಯೇ ಕನ್ನಡಲಿಪಿ ಬೆಂಬಲ ದೊರೆತಿರುವುದರಿಂದ ಈಗ ಪ್ರತ್ಯೇಕ ಕನ್ನಡದ ಲಿಪಿತಂತ್ರಾಂಶಗಳನ್ನು ಅಳವಡಿಸುವ ಅವಶ್ಯಕತೆಯೇ ಇಲ್ಲ. ತಂತ್ರಾಂಶಗಳಲ್ಲಿ ಅಥವಾ ಯೂನಿಕೋಡ್ ಫಾಂಟುಗಳ ಬಳಕೆಯಲ್ಲಿ ಸಮಸ್ಯೆಗಳಿದ್ದರೆ ಅವುಗಳು ಯೂನಿಕೋಡ್‌ನ ಅನುಷ್ಠಾನದ ಚಿಕ್ಕಪುಟ್ಟ ತೊಡಕುಗಳಷ್ಟೆ. ಅವುಗಳನ್ನು ಆಯಾಯ ತಂತ್ರಾಂಶ ತಯಾರಕ ಗಮನಕ್ಕೆ ತಂದು ಸರಿಪಡಿಸುವಂತೆ ವಿನಂತಿಸಬಹುದು ಅಷ್ಟೇ.  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...