ವಿಷಯಕ್ಕೆ ಹೋಗಿ

39. ಡಿಜಿಟಲ್ ಕನ್ನಡ ಕಲಿಕೆ ಮತ್ತು ಬಳಕೆ ಕಬ್ಬಿಣದ ಕಡಲೆಯೇ?


       ಅಂತರಜಾಲದಲ್ಲಿ ಕನ್ನಡಕ್ಕೆ ಯೂನಿಕೋಡ್ ಎಂಬ ಕ್ಯೂ ಬೇಕಿಲ್ಲಎಂಬ ಲೇಖನ ಕನ್ನಡದ ಪ್ರಮುಖ ದಿನಪತ್ರಿಕೆಯಲ್ಲಿ ಓದಿ ಅಚ್ಚರಿಯಾಯಿತು. ಲೇಖನದ ಕುರಿತು ಫೇಸ್‌ಬುಕ್ ಕಮೆಂಟುಗಳನ್ನು ಗಮನಿಸುವುದು ಅಗತ್ಯ.  ಕನ್ನಡ ಭಾಷೆ ಬೆಳವಣಿಗೆಗೆ ಯುನಿಕೋಡ್ ಅಡ್ಡಿ ಎಂದು ಈ ಲೇಖನವು ತಿಳಿಸುತ್ತದೆ. ಕನ್ನಡದ್ದಷ್ಟೇ ಅಲ್ಲ, ವಿಶ್ವದ ಎಲ್ಲ ಆಂಗ್ಲವೇತರ ಭಾಷೆಗಳೂ ಅದಕ್ಕೆ ಸಮಾನವಾಗಿ ಬೆಳೆಯಬೇಕೆಂದೇ ಯುನಿಕೋಡ್‌ನ್ನು ರೂಪಿಸಿದ್ದು ಎಂಬ ನನ್ನ ಅಲ್ಪ ತಿಳಿವಳಿಕೆಯನ್ನೇ ಈ ಲೇಖನವು ಉಲ್ಲಟಪಲ್ಲಟಗೊಳಿಸಿದೆ!  ಕನ್ನಡದ ಪ್ರಮುಖ ಪತ್ರಿಕೆಯಲ್ಲಿ ಈ ಲೇಖನವು ಬಂದಿರುವುದರಿಂದ ಬಲ್ಲವರು ಇದರ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಬಹುದು...ಎಂದು ಕನ್ನಡ ತಂತ್ರಜ್ಞಾನಾಸಕ್ತ ಪತ್ರಕರ್ತ ಶ್ರೀ ಬೇಳೂರು ಸುದರ್ಶನ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಹಾಕಿದರು. ಪ್ರತಿಕ್ರಿಯಿಸಿದ ಶ್ರೀವತ್ಸ ಜೋಶಿಯವರು : ಕಂಪ್ಯೂಟರ್‌ನಲ್ಲಿ, ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡ ಲಿಪಿಗಳ ಸದ್ಯದ ತೊಂದರೆ, ಅವುಗಳಿಂದ ಈ ಲೇಖಕನಿಗಾಗಿರುವ ಹತಾಶೆ ಅರ್ಥವಾಗುವಂಥದ್ದೇ. ಅದನ್ನು ತೋಡಿಕೊಳ್ಳಬೇಕೆಂದು ಬರೆಯಲು ಹೊರಟಿದ್ದಿರಬಹುದು. ಆದರೆ, ಅಂಥ ತೊಂದರೆಗಳನ್ನು ನಿವಾರಿಸುವ ದೃಷ್ಟಿಯಿಂದಲೇ ಅಭಿವೃದ್ಧಿಯಾಗಿರುವ ಯೂನಿಕೋಡ್ ಬೇಕಾಗಿಲ್ಲ ಎಂದರೆ ಈ ಲೇಖಕನ ಗೊಂದಲ ದ್ವಿಗುಣವಾಗುತ್ತದೆ. ಅಧ್ಯಯನ ಮಾಡದೆ, ಬಾಲಿಶ ರೀತಿಯಲ್ಲಿ ಬರೆದಿರುವ ಲೇಖನವಿದು.ಎಂದಿದ್ದಾರೆ.  ಕನ್ನಡ ತಂತ್ರಾಂಶ ತಜ್ಞ ಡಾ.ಯು.ಬಿ.ಪವನಜ : ಈ ಲೇಖನ ಬರೆದವರಿಗೆ ನುಡಿ ಎಂಬ ತಂತ್ರಾಂಶಕ್ಕೂ ಯುನಿಕೋಡ್ ಎಂಬ ಶಿಷ್ಟತೆಗೂ ಇರುವ ವ್ಯತ್ಯಾಸವೇ ಗೊತ್ತಿಲ್ಲ. ಒಂದು ವಿಷಯದ ಬಗ್ಗೆ ಲೇಖನ ಬರೆಯುವಾಗ ಅದರ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಬೇಕು ಎಂಬ ಪ್ರಜ್ಞೆಯೇ ಇಲ್ಲ ಎಂಬುದು ವೇದ್ಯವಾಗುತ್ತದೆ. ಪತ್ರಿಕೆಯ ಸಂಪಾದಕರು ಯಾಕೆ ಇಂತಹ ಅರೆಬೆಂದ ಲೇಖನಗಳನ್ನು ಪ್ರಕಟಿಸುತ್ತಾರೆ?” ಎಂದಿದ್ದಾರೆ.
       ವಿಷಯ ತಜ್ಞತೆ ಇರದವರು ಲೇಖನ ಬರೆಯಹೊರಟರೆ ಆಗುವ ಪರಿಣಾಮಗಳಿಗೆ ಉಲ್ಲೇಖಿತ ಲೇಖನವು ಉತ್ತಮ ಉದಾಹರಣೆ. ಪತ್ರಿಕೆಯ ಸಂಪಾದಕರಿಗೂ ಎಲ್ಲವೂ ತಿಳಿದಿರಲೇಬೇಕೆಂದಿಲ್ಲವಲ್ಲ. ಡಿಜಿಟಲ್ ಲೋಕದಲ್ಲಿ ಇಂಗ್ಲಿಷೇತರ ಭಾಷೆಗಳನ್ನು ಜಾಗತಿಕ ಮಟ್ಟದಲ್ಲಿ ಸಮರ್ಥವಾಗಿ ಅಳವಡಿಸಿ ಬಳಸುವಂತಾಗಬೇಕು ಎನ್ನುವ ಉದ್ದೇಶದಿಂದ ಜಾಗತಿಕ ಮಟ್ಟದಲ್ಲಿ ಯೂನಿಕೋಡ್ ಶಿಷ್ಟತೆಯನ್ನು ರೂಪಿಸಲಾಗಿದೆ. ಶಿಷ್ಟತೆಯಲ್ಲಿ ಲೋಪದೋಷಗಳಿದ್ದರೆ ಅದನ್ನು ಸರಿಪಡಿಸುವುದು ತಜ್ಞರ ಹೊಣೆಗಾರಿಕೆ. ಆದರೆ, ಇಂತಹ ಶಿಷ್ಟತೆ ಕನ್ನಡಕ್ಕೆ ಅಗತ್ಯವೇ ಇಲ್ಲ ಎನ್ನುವುದು ಸರಿಯಲ್ಲ. ಇಂದು ಸ್ಮಾರ್ಟ್‌ಪೋನುಗಳಲ್ಲಿ ಕನ್ನಡದ ಲಿಪಿಗಳ ಬಳಕೆ ಆರಂಭಗೊಂಡಿರುವುದೇ ಈ ಯೂನಿಕೋಡ್ ಶಿಷ್ಟತೆಯ ಅಳವಡಿಕೆಯಿಂದ. ಈ ಹಿನ್ನೆಲೆಯಲ್ಲಿ  ಡಿಜಿಟಲ್ ಕನ್ನಡಅಂಕಣದ ಉದ್ದೇಶವನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದು ಅಗತ್ಯವಿದೆ. ಜನಸಾಮಾನ್ಯರ ನಿತ್ಯಜೀವನದಲ್ಲಿ ಸ್ಮಾರ್ಟ್‌ಫೋನ್ ಎಂಬ ಪುಟ್ಟ ಗ್ಯಾಜೆಟ್ ತನ್ನ ಇಡೀ ಜಗತ್ತಿನ ವಿಶ್ವರೂಪದರ್ಶನವನ್ನೇ ಮಾಡಿಸಿದೆ. ತಂತ್ರಜ್ಞಾನ ಸೀಮಿತ ಸೌಲಭ್ಯಗಳ ಕಾರಣ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಭಾಷೆಗಳ ಲಿಪಿಯನ್ನು ಬಳಸುವುದು ಕಷ್ಟಕರ ಎಂಬ ಅಭಿಪ್ರಾಯಗಳು ಇತ್ತು. ಇಂದಿನ ಆಧುನಿಕ ತಂತ್ರಜ್ಞಾನದ ಸಂದರ್ಭದಲ್ಲಿ ಕಂಪ್ಯೂಟರ್, ಸ್ಮಾರ್ಟ್‌ಫೋನು, ಐ-ಪ್ಯಾಡ್ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವುದು ಇಂದು ಒಂದು ಸವಾಲಾಗಿ ಉಳಿದಿಲ್ಲ. ಇಂಗ್ಲಿಷ್‌ನಷ್ಟೇ ಸಮರ್ಥವಾಗಿ ಇಂದು ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ಸುಲಭವಾಗಿ ಬಳಸಬಹುದು. ಅಷ್ಟರಮಟ್ಟಿಗೆ ತಂತ್ರಜ್ಞಾನ ಸೌಲಭ್ಯಗಳಿವೆ. ಆದರೆ, ಈ ಕುರಿತು ಹೆಚ್ಚಿನವರಿಗೆ ಮಾಹಿತಿಯಿಲ್ಲ. ಗ್ಯಾಜೆಟ್‌ಗಳ ಭಾಷೆ ಕೇವಲ ಇಂಗ್ಲಿಷ್ ಎಂಬುದು ನಮ್ಮ ಭ್ರಮೆಯಾಗಿದೆ. ಲಭ್ಯವಿರುವ ಸೌಕರ್ಯಗಳು ಏನೇನು, ಅವನ್ನು ಹೇಗೆ ಅಳವಡಿಸಿಕೊಳ್ಳುವುದು, ಬಳಸುವುದು ಹೇಗೆ, ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದು ಕಲಿಯುವುದೇ ಡಿಜಿಟಲ್ ಕನ್ನಡ ಕಲಿಕೆ
       ಕಲಿಕೆ ಕ್ರಮಬದ್ಧವಾಗಿದ್ದರೆ ಕನ್ನಡ ಬಳಕೆಯೂ ಸಹ ಸುಲಭವಾಗುತ್ತದೆ. ಆದರೆ, ಮಾಹಿತಿಯ ಕೊರತೆ ಇದ್ದಾಗ, ಅಥವಾ ಮಾಹಿತಿ ಹುಡುಕಾಟದ ಕನಿಷ್ಠ ಪ್ರಯತ್ನವನ್ನೂ ಮಾಡದ್ದಾಗ ಡಿಜಿಟಲ್ ಕನ್ನಡದ ಕಲಿಕೆ ಮತ್ತು ಬಳಕೆ ಕಬ್ಬಿಣದ ಕಡಲೆ ಎನಿಸುತ್ತದೆ.  ಕನ್ನಡಕ್ಕೆ ತಂತ್ರಜ್ಞಾನದ ಬಳಕೆಯ ಪ್ರಚಾರ ಮತ್ತು ಪ್ರಸಾರ ಹೆಚ್ಚಬೇಕೆಂಬ ಉದ್ದೇಶದಿಂದ ಡಿಜಿಟಲ್ ಗ್ಯಾಜೆಟ್‌ಗಳಲ್ಲಿ ಕನ್ನಡದ ಸಮರ್ಥ ಅಳವಡಿಕೆಯ ಕುರಿತಾಗಿ ಸಮಗ್ರ ಮಾಹಿತಿಯನ್ನು ಈ ಡಿಜಿಟಲ್ ಕನ್ನಡಅಂಕಣದಲ್ಲಿ ನೀಡಲಾಗುತ್ತಿದೆ. 
       ಕನ್ನಡ ತಂತ್ರಜ್ಞಾನ ಕುರಿತ ಪ್ರಮುಖ ಬರಹಗಾರ ಶ್ರೀ ಟಿ.ಜಿ.ಶ್ರೀನಿಧಿ ಹೀಗೆ ಹೇಳುತ್ತಾರೆ : ಮಾಹಿತಿ ತಂತ್ರಜ್ಞಾನ ಎಂದಕೂಡಲೇ, ಅದರಿಂದ ನಮ್ಮ ಭಾಷೆಗೆ ತೊಂದರೆಯಾಗಿದೆ ಅಥವಾ ಆಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಇದು ಕೊಂಚಮಟ್ಟಿಗೆ ನಿಜವೂ ಹೌದು. ಪ್ರಪಂಚದಲ್ಲಿರುವ ಸಾವಿರಾರು ಭಾಷೆಗಳ ಬಳಕೆ ಕಡಿಮೆಯಾಗುತ್ತಿದೆ. ಅಂತಹ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯಲ್ಲೂ ಮಾಹಿತಿ ತಂತ್ರಜ್ಞಾನದ ಜಗತ್ತಿನಲ್ಲೂ ಪ್ರಾಮುಖ್ಯ ದೊರಕದಿದ್ದರೆ ಅವುಗಳ ಬಳಕೆ ಇನ್ನಷ್ಟು ಕಡಿಮೆಯಾಗುವುದು, ಬೆಳವಣಿಗೆ ಕುಂಠಿತವಾಗುವುದು ಸಹಜವೇ ಹೌದು. ಇಂದಿನ ಬದುಕಿನಲ್ಲಿ ಮಾಹಿತಿ ತಂತ್ರಜ್ಞಾನದ ಪಾತ್ರ ಮಹತ್ವದ್ದು. ಬೆಳಗಿನಿಂದ ರಾತ್ರಿಯವರೆಗೆ ಒಂದಲ್ಲ ಒಂದು ರೂಪದಲ್ಲಿ ಮಾಹಿತಿ ತಂತ್ರಜ್ಞಾನದ ಸವಲತ್ತುಗಳನ್ನು ನಾವೆಲ್ಲ ಬಳಸುತ್ತಲೇ ಇರುತ್ತೇವೆ. ಈ ವ್ಯವಹಾರವನ್ನೆಲ್ಲ ನಮ್ಮ ಭಾಷೆಯಲ್ಲೇ ನಡೆಸುವಂತಾದರೆ ಭಾಷೆ-ತಂತ್ರಜ್ಞಾನಗಳೆರಡರ ವ್ಯಾಪ್ತಿಯೂ ಹೆಚ್ಚುತ್ತದೆ, ಎರಡೂ ಪರಸ್ಪರ ಪೂರಕವಾಗಿ ಬೆಳೆಯುತ್ತವೆ. ತಂತ್ರಜ್ಞಾನದ ಇತ್ತೀಚಿನ ಸವಲತ್ತುಗಳೆಲ್ಲ ನಮ್ಮ ಭಾಷೆಯಲ್ಲೂ ದೊರಕುವಂತೆ ಆಗುವವರೆಗೆ ಬಳಕೆದಾರರಾದ ನಾವು ಮಾಡಬೇಕಾದ ಕೆಲಸಗಳೂ ಬೇಕಾದಷ್ಟಿವೆ. ಈಗಾಗಲೇ ಲಭ್ಯವಿರುವ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವುದು, ಆ ಸವಲತ್ತುಗಳನ್ನು ಬಳಸುವುದು ಹಾಗೂ ಅವನ್ನು ನಮ್ಮ ಆಪ್ತರಿಗೆ ಪರಿಚಯಿಸುವುದು ಇಂತಹ ಕೆಲಸಗಳ ಪೈಕಿ ಪ್ರಮುಖವಾದದ್ದು. ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡುವ ಪುಸ್ತಕ, ಪತ್ರಿಕೆ ಹಾಗೂ ಜಾಲತಾಣಗಳನ್ನು ಪ್ರೋತ್ಸಾಹಿಸುವುದು ಇಲ್ಲಿ ನಾವು ಮಾಡಬಹುದಾದ ಇನ್ನೊಂದು ಕೆಲಸ. ಅಗತ್ಯ ತಾಂತ್ರಿಕ ಜ್ಞಾನವಿರುವವರು ಹೊಸ ಸವಲತ್ತುಗಳನ್ನು ರೂಪಿಸುವ, ಲಭ್ಯ ಸವಲತ್ತುಗಳನ್ನು ಕನ್ನಡೀಕರಿಸುವ ಅಥವಾ ಕನಿಷ್ಠಪಕ್ಷ ತಮ್ಮ ಜ್ಞಾನವನ್ನು ಇತರರೊಡನೆ ಅವರ ಭಾಷೆಯಲ್ಲೇ ಹಂಚಿಕೊಳ್ಳುವ ಪ್ರಯತ್ನವನ್ನೂ ಮಾಡಬಹುದು
       ಬೆಂಗಳೂರಿನ ಸುರಾನಾ ಕಾಲೇಜು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆ ಕುರಿತಾಗಿ ವಿಷಯತಜ್ಞರಿಂದ ಪರಿಚಯಾತ್ಮಕ ಕಾರ್ಯಾಗಾರಗಳನ್ನು ಕಳೆದ ನಾಲ್ಕು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. ಈ ಕಾರ್ಯಾಗಾರಗಳು ಇತರೆ ಕಾಲೇಜುಗಳಿಗೆ ಮಾದರಿ ಎನಿಸುವ ರೀತಿಯಲ್ಲಿವೆ. ಈ ಅಂಕಣಕಾರ ಸೇರಿದಂತೆ ಹಲವು ಲೇಖಕರು ರಚಿಸಿರುವ ಕಂಪ್ಯೂಟರ್ ಮತ್ತು ಕನ್ನಡಪುಸ್ತಕವು ಕಂಪ್ಯೂಟರಿನಲ್ಲಿ ಕನ್ನಡವನ್ನು ಅಳವಡಿಸಿ ಬಳಸುವ ವಿಧಿವಿಧಾನಗಳನ್ನು ವಿವರಿಸುವ ಸಂಕ್ಷಿಪ್ತ ಕೈಪಿಡಿಯಾಗಿದೆ. ಸುರಾನ ಕಾಲೇಜಿನ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿಯೇ ಇದನ್ನು ಪ್ರಕಟಿಸಲಾಗಿದೆ.

       ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳ ತಂತ್ರಜ್ಞಾನಗಳು ಉದ್ಯೋಗದ ಕ್ಷೇತ್ರದಲ್ಲಿ ಹೇಗೆ ಹೊಸಹೊಸ ಅವಕಾಶವನ್ನು ತೆರೆದಿಟ್ಟಿವೆ ಎಂಬುದನ್ನು ಈ ಸಾಲಿನ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ವಿಷದೀಕರಿಸಲಾಯಿತು. ಇದಕ್ಕೆ ಪೂರಕ ಮಾಹಿತಿ ನೀಡುವ ನುಡಿಯ ನಾಳೆಗಳುಎಂಬ ಶ್ರೀ ಟಿ.ಜಿ.ಶ್ರೀನಿಧಿ ವಿರಚಿತ ಕಿರುಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.  ಕನ್ನಡ ಭಾಷೆಯಲ್ಲೂ ಬಳಸಬಹುದಾದ ತಂತ್ರಜ್ಞಾನದ ಸವಲತ್ತುಗಳು ಹಾಗೂ ಅವು ನಮ್ಮೆದುರು ತೆರೆದಿಟ್ಟಿರುವ ಹೊಸ ಸಾಧ್ಯತೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಈ ಪುಸ್ತಕಕ್ಕೆ ನಮ್ಮ ಭಾಷೆ ಮತ್ತು ತಂತ್ರಜ್ಞಾನಎಂಬ ಉಪಶೀರ್ಷಿಕೆಯಿದೆ. ಕಂಪ್ಯೂಟರ್ ಮತ್ತು ಮೊಬೈಲ್ ಫೋನ್‌ಗಳಲ್ಲಿ ಕನ್ನಡ ಭಾಷಾ ಬಳಕೆ, ಕನ್ನಡ ತಂತ್ರಜ್ಞಾನವೆಂದರೆ ಕೇವಲ ಟೈಪಿಂಗ್ ಮಾತ್ರವಲ್ಲ ಎಂಬ ಆಸಕ್ತಿಕರ ವಿಷಯಗಳ ಕುರಿತು ಸರಳವಾದ ಭಾಷೆಯಲ್ಲಿ ವಿದ್ಯಾರ್ಥಿಗಳ ಗಮನವನ್ನು ಸೆಳೆಯಲಾಗಿದೆ. ಕನ್ನಡದಲ್ಲಿಯೇ ಪ್ರೋಗ್ರಾಂಮಿಂಗ್ ಮಾಡಬಹುದಾದ ತಂತ್ರಾಂಶಗಳು, ಕನ್ನಡದ ಮಾತುಗಳನ್ನು ಅಕ್ಷರಗಳನ್ನಾಗಿಸುವ ತಂತ್ರಾಂಶ, ಕನ್ನಡ ಪಠ್ಯವನ್ನು ಓದಿ ಹೇಳುವ ತಂತ್ರಜ್ಞಾನ ಇವುಗಳ ಕುರಿತಾಗಿಯೂ ಲೇಖನಗಳಿವೆ. ತಂತ್ರಜ್ಞಾನದಲ್ಲಿ ಕನ್ನಡದ ಕುರಿತಾಗಿ ವಿದ್ಯಾರ್ಥಿಗಳು ಮಾಡಬಹುದಾದ ಕೆಲಸಗಳತ್ತ ಪುಸ್ತಕದಲ್ಲಿ ಗಮನಸೆಳೆಯಲಾಗಿದೆ. ಈ ಪುಸ್ತಕಗಳನ್ನು ಇ-ಜ್ಞಾನ ಡಾಟ್ ಕಾಂ (http://www.ejnana.com) ಜಾಲತಾಣದ ಆನ್‌ಲೈನ್ ಖರೀದಿಯ ಮೂಲಕ ಪಡೆದುಕೊಳ್ಳಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...