ವಿಷಯಕ್ಕೆ ಹೋಗಿ

6. ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನ










       ‘ಗೂಗಲ್ ನ್ಯೂಸ್ನಲ್ಲಿ ಕನ್ನಡ ಏಕಿಲ್ಲ? ಎಂಬ ಪ್ರಶ್ನೆ ಇತ್ತಿಚೆಗೆ ಪತ್ರಿಕೆಗಳಲ್ಲಿ ಚರ್ಚೆಗೆ ಬಂದಿತ್ತು. ಇಂತಹ ಪ್ರಶ್ನೆಯು ಕಳೆದ ಐದಾರು ವರ್ಷಗಳಿಂದ ಅಂತರಜಾಲದಲ್ಲಿ ಅನುರಣಿಸುತ್ತಲೇ ಬಂದಿದೆ.  ಈ ಕುರಿತು ಗೂಗಲ್ ಇದುವರೆವಿಗೂ ತಟಿಪಿಟಕ್ ಎಂದಿಲ್ಲ.  ಮಲಯಾಳಂ, ಗೂಗಲ್ ನ್ಯೂಸ್‌ನಲ್ಲಿ ಸೇರ್ಪಡೆಯಾದ ಮೊದಲ ಭಾರತೀಯ ಭಾಷೆ.  ನಂತರದಲ್ಲಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳು ಸೇರಿಕೊಂಡವು.  ಹಲವು ವರ್ಷಗಳಿಂದ ಕನ್ನಡವನ್ನು ಸೇರಿಸಲು ಎಲ್ಲೆಡೆಯಿಂದ ಒತ್ತಡ ಬಂದರೂ ಬಹುರಾಷ್ಟ್ರೀಯ ಕಂಪನಿಯಾದ ಗೂಗಲ್ ಇಂದಿಗೂ ಒತ್ತಡಕ್ಕೆ ಮಣಿದಿಲ್ಲ. ಬೆಂಗಳೂರಿನಲ್ಲಿಯೇ ತನ್ನ ಶಾಖಾ ಕಚೇರಿಯನ್ನು ಹೊಂದಿರುವ ಗೂಗಲ್, ಕನ್ನಡದ ನೆಲ-ಜಲ ಎಲ್ಲವನ್ನೂ ಬಳಸಿಕೊಂಡು ಕನ್ನಡಕ್ಕೆ ನಿರೀಕ್ಷಿತ ಪ್ರಾಧಾನ್ಯತೆ ನೀಡುತ್ತಿಲ್ಲ ಎಂಬುದು ಇದರಿಂದ ಸಾಬೀತಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಭಾಷಾಭಿಮಾನದಿಂದ ಕೆಲಸಮಾಡುವುದಿಲ್ಲ. ಅದು ಯಾವುದೇ ಕಂಪನಿ ಇರಲಿ, ಹಣವೇ ಅವುಗಳ ವ್ಯವಹಾರದ ಭಾಷೆ. ವ್ಯಾಪಾರೀ ದೃಷ್ಟಿಕೋನವುಳ್ಳ ಅವು ಲಾಭದಾಯಕವಲ್ಲದ ಯಾವುದೇ ಚಟುವಟಿಕೆಗಳನ್ನು ಮಾಡುವುದಿಲ್ಲ. ಲಾಭವಿದ್ದರೆ ಮಾತ್ರವೇ ಭಾಷಾಸವಲತ್ತುಗಳನ್ನು ಸೇರಿಸಿ ಆಯಾಯ ಭಾಷಿಕ ಮಾರುಕಟ್ಟೆಗಳನ್ನು ಆಕ್ರಮಿಸಲು ಅವು ಸಿದ್ಧವಾಗುತ್ತವೆ ಎನ್ನುವುದು ಸುಳ್ಳಲ್ಲ.

       ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನಗಳ ಕುರಿತು ನಿರಂತರವಾದ ಚರ್ಚೆ ಅಂತರಜಾಲದಲ್ಲಿ ನಡೆದೇ ಇದೆ. ಹಿಂದೆ, ಡಿಜಿಟಲ್ ಉಪಕರಣಗಳಲ್ಲಿ ಕನ್ನಡದ ಬಳಕೆಯ ಸವಲತ್ತುಗಳನ್ನು ಬಹುತೇಕ ಬಾರಿ ಆಯಾಯ ಕಂಪನಿಗಳ ಮೇಲೆ ಒತ್ತಡವನ್ನು ಹೇರಿಯೇ ಪಡೆಯಲಾಗಿದೆ ಎಂಬುದು ಇತಿಹಾಸ. ಭಾರತ ದೇಶದ ಡಿಜಿಟಲ್ ಲೋಕದಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹೆಚ್ಚುತ್ತಿದ್ದಂತೆ, ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ, ಕಂಪ್ಯೂಟರ್,  ಸ್ಮಾರ್ಟ್‌ಫೋನುಗಳು, ಐಪ್ಯಾಡ್ ಇತ್ಯಾದಿಗಳಲ್ಲಿ ಭಾರತೀಯ ಭಾಷಾ ಬಳಕೆಯ ಸವಲತ್ತುಗಳನ್ನು ನೀಡುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನಿವಾರ್ಯವಾಗಿದೆ.

       ಮೈಕ್ರೋಸಾಫ್ಟ್ ಕಂಪನಿಯು ಈಗಾಗಲೇ ತನ್ನ ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡದ ತಂತ್ರಜ್ಞಾನವನ್ನು ಅಳವಡಿಸಿ ನೀಡಿದೆ. ತನ್ನದೇ ಓ.ಎಸ್. ಇರುವ ವಿಂಡೋಸ್ ಸ್ಮಾರ್ಟ್‌ಫೋನ್‌ಗೆ ಕನ್ನಡವನ್ನು ಅಳವಡಿಸುವುದು ಅದಕ್ಕೆ ಕಷ್ಟವಾಗಲಿಲ್ಲ.  ಹೀಗಾಗಿ, ದುಬಾರಿ ಬೆಲೆಯ ವಿಂಡೋಸ್ ಫೋನ್‌ಗಳಲ್ಲಿ ಕನ್ನಡದ ಸವಲತ್ತುಗಳು ಚೆನ್ನಾಗಿಯೇ ಇವೆ. ಗೂಗಲ್ ಕಂಪನಿಯ ನಿಯಂತ್ರಣದಲ್ಲಿರುವ ಆಂಡ್ರಾಯ್ಡ್ ಓ.ಎಸ್. ಬಳಸುವ, ಗಣನೀಯವಾಗಿ ಕಡಿಮೆ ಬೆಲೆಯ, ಸ್ಮಾರ್ಟ್‌ಫೋನ್‌ಗಳನ್ನು ಬಹುತೇಕ ಜನಸಾಮಾನ್ಯರು ಬಳಸುತ್ತಾರೆ. ಅವುಗಳಲ್ಲಿ ಕನ್ನಡದ ಸವಲತ್ತುಗಳು ಲಭ್ಯವಾಗಿ ದಶಕಗಳೇ ಸಂದಿವೆ. ಆದರೆ, ಶ್ರೀಮಂತರು ಬಳಸುವ ಐಫೋನ್‌ನಲ್ಲಿ ಕನ್ನಡದ ಸವಲತ್ತನ್ನು ನೀಡಲು ಆಪಲ್ ಕಂಪನಿಯು ಮೀನಮೇಷ ಎಣಿಸುತ್ತಿತ್ತು. ಐಫೋನ್ ಬಳಸುತ್ತಿದ್ದ ಕನ್ನಡಿಗರು ಕಳೆದ ಐದು ವರ್ಷಗಳಿಂದ ಕನ್ನಡದ ಕೀಬೋರ್ಡ್‌ಗಾಗಿ ಮನವಿಮಾಡುತ್ತಲೇ ಬಂದಿದ್ದರು.  ಐಫೋನ್‌ನಲ್ಲಿ ಕನ್ನಡದ ಕೀಬೋರ್ಡ್‌ಗಾಗಿ ಗ್ರಾಹಕ ಹಕ್ಕನ್ನು ಪ್ರತಿಪಾದಿಸಿ ಕನ್ನಡ ಗ್ರಾಹಕರ ಕೂಟವು ನೂರಾರು ಇ-ಮೇಯ್ಲ್‌ಗಳನ್ನು ಕಳುಹಿಸಿ ಆಂದೋಲನವನ್ನೇ ನಡೆಸಿತು. ಆಪಲ್ ಇದೀಗ ಉತ್ತಮವಾದ ಕೀಬೋರ್ಡ್‌ಅನ್ನು ಬಿಡುಗಡೆಮಾಡಿದೆ.  ತಡವಾಗಿಯಾದರೂ ಆಪಲ್ ಕನ್ನಡಕ್ಕೆ ಉತ್ತಮ ಸವಲತ್ತನ್ನು ನೀಡಿದೆ ಎಂದು ಸಮಾಧಾನಪಟ್ಟುಕೊಳ್ಳಬಹುದು. 

       ಭಾರತದಲ್ಲಿ ಹೊಸದಾಗಿ ಅಂತರಜಾಲ ಬಳಸಲಾರಂಭಿಸಿರುವವರು ತಮ್ಮ ತಮ್ಮ ಭಾಷೆಗಳಿಗಾಗಿ ಗೂಗಲ್ ಹುಡುಕಾಟಮಾಡುತ್ತಿರುವುದನ್ನು ಮನಗಂಡ ಗೂಗಲ್ ಕಂಪನಿಯು ಭಾರತ ದೇಶದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ಕೈಗೊಂಡಿತು. ಭಾರತದಲ್ಲಿ ೨೦ ಕೋಟಿ ಅಂತರಜಾಲ ಬಳಕೆದಾರರಿದ್ದು ಅವರಲ್ಲಿ ಶೇ.೯೦ರಷ್ಟು ಜನರು  ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಅಂತರಜಾಲವನ್ನು ಬಳಸುತ್ತಿರುವುದು ಈ ಅಧ್ಯಯನದಿಂದ ಕಂಡುಬಂದಿದೆ. ಪ್ರಾದೇಶಿಕ ಭಾಷೆಯಲ್ಲಿ ಅಂತರಜಾಲ ಬಳಸುವವರಲ್ಲಿ ಹೆಚ್ಚಿನವರು ಗ್ರಾಮೀಣ ಪ್ರದೇಶದವರೇ ಆಗಿದ್ದಾರೆ.  ಭಾರತೀಯ ಭಾಷಾ ಬಳಕೆದಾರರ ಪೈಕಿ ತಮಿಳು ಮೊದಲ ಸ್ಥಾನದಲ್ಲಿದೆ (ಶೇ.೪೨). ನಂತರದ ಸ್ಥಾನದಲ್ಲಿ ಹಿಂದಿ (ಶೇ.೩೯) ತದನಂತರದ ಸ್ಥಾನದಲ್ಲಿ ಕನ್ನಡ ಇದೆ (ಶೇ.೩೭) ಎಂಬ ಅಂಶಗಳು ಅಧ್ಯಯನದಿಂದ ತಿಳಿದುಬಂದಿದೆ.

       ಉತ್ತಮ ಸವಲತ್ತುಗಳುಳ್ಳ ಸ್ಮಾರ್ಟ್‌ಫೋನುಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳು ವ್ಯಾವಹಾರಿಕ ಲಾಭಕ್ಕಾಗಿ ಈಗ ಭಾಷಾ ಸವಲತ್ತುಗಳನ್ನು ನೀಡಲಾರಂಭಿಸಿವೆಯೇ ಹೊರತು, ಭಾಷಾಭಿಮಾನಕ್ಕಾಗಿ ಅಲ್ಲ ಎಂಬುದು ವ್ಯಾವಹಾರಿಕ ಸತ್ಯವಾಗಿದೆ.  ಅಂತರಜಾಲದಲ್ಲಿ ಕನ್ನಡ ಭಾಷೆಯ ಬಳಕೆಯು ಇಡೀ ದೇಶದಲ್ಲಿಯೇ ಮೂರನೆಯ ಸ್ಥಾನವನ್ನು ಹೊಂದಿರುವುದರಿಂದ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯ ಬಳಕೆಯ ಸವಲತ್ತುಗಳಿಗಾಗಿ ನಾವು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಒತ್ತಡ ಹೇರುವುದು ಇನ್ನು ಮುಂದೆ ಅಗತ್ಯವಿಲ್ಲ ಎನಿಸುತ್ತದೆ.  ಬಳಕೆಯ ಅಂಕಿಸಂಖ್ಯೆಗಳೇ ಮಾರುಕಟ್ಟೆಯ ವ್ಯಾಖ್ಯಾನ ಮಾಡುವುದರಿಂದ ಮಾರುಕಟ್ಟೆಯ ಟ್ರೆಂಡ್ ಗಮನಿಸಿ ಕಂಪನಿಗಳೇ ಕನ್ನಡದ ಸವಲತ್ತುಗಳನ್ನು ನೀಡುತ್ತವೆ ಎಂದು ಭಾವಿಸಬಹುದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...