ವಿಷಯಕ್ಕೆ ಹೋಗಿ

38. ಕನ್ನಡದ ಪ್ರಥಮ ಮಾದರಿ ಲಿಪಿತಂತ್ರಾಂಶ ‘ನುಡಿ’ಯ ಕಥನ


೧೯೯೦ರ ದಶಕದ ಆರಂಭದಲ್ಲಿ, ಕನ್ನಡದ ಖಾಸಗಿ ಲಿಪಿತಂತ್ರಾಂಶಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿದ್ದವು. ಇವನ್ನೇ ಸರ್ಕಾರದ ಇಲಾಖೆಗಳ ಕಚೇರಿಗಳಲ್ಲಿ ಖರೀದಿಸಿ ಬಳಸಲಾಗುತ್ತಿತ್ತು. ಆಗ, ಕನ್ನಡ ಪಠ್ಯದ ಟೈಪಿಂಗ್‌ಗಾಗಿ ಇದ್ದ ಕೀಲಿಮಣೆ ವಿನ್ಯಾಸಗಳಲ್ಲಿ ಮತ್ತು ಕನ್ನಡ ಅಕ್ಷರಗಳಿಗೆ ಕಂಪ್ಯೂಟರ್ ಸಂಕೇತಗಳಲ್ಲಿ ಏಕರೂಪತೆ ಇರಲಿಲ್ಲ. ಕಂಪ್ಯೂಟರಿನಲ್ಲಿ ಕನ್ನಡ ಬಳಸಲು ಹಲವಾರು ತೊಡಕುಗಳು ಇದ್ದವು. ತಂತ್ರಾಂಶ ಸರಬರಾಜು ಮಾಡಿದ ನಂತರದಲ್ಲಿ, ಮಾರಾಟಗಾರರಿಂದ ಬಳಕೆದಾರರಿಗೆ ಬಳಕೆಯ ಬೆಂಬಲವು ಕನಿಷ್ಠಮಟ್ಟದಲ್ಲಿ ಇರುತ್ತಿತ್ತು. ವಿಂಡೋಸ್ ಮತ್ತು ಫಾಂಟ್ ಆಧಾರಿತ ಕನ್ನಡ ಲಿಪಿತಂತ್ರಾಂಶಗಳು ಬಳಕೆಗೆ ಬಂದ ನಂತರ ಸಮಸ್ಯೆಗಳು ಮತ್ತಷ್ಟು ಹೆಚ್ಚಾದವು. ವಿಂಡೋಸ್‌ನಲ್ಲಿ ಯಾವುದೇ ಸಣ್ಣ ಬದಲಾವಣೆಯಾದರೂ ಕನ್ನಡ ಲಿಪಿತಂತ್ರಾಂಶದಲ್ಲಿ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಇತ್ತು. ಎಲ್ಲಕ್ಕೂ ಆ ಲಿಪಿತಂತ್ರಾಂಶದ ತಯಾರಕರಾದ ಖಾಸಗಿಯವರನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಯಿತ್ತು.

     ಹಲವು ವರ್ಷಗಳಿಂದ ಕನ್ನಡ ಮತ್ತು ಇತರ ಭಾಷೆಯ ಡಿ.ಟಿ.ಪಿ. ತಂತ್ರಾಂಶಗಳನ್ನು ತಯಾರಿಸಿ ಮಾರುತ್ತಿದ್ದ ಎಲ್ಲ ಕಂಪೆನಿಗಳು ಕನ್ನಡ ಫ಼ಾಂಟ್‌ಗಳ ಅಕ್ಷರ ಭಾಗಗಳಿಗೆ (ಗ್ಲಿಫ಼್‌ಗಳು) ತಮ್ಮದೇ ಆದ ಪ್ರತ್ಯೇಕ ಕಂಪ್ಯೂಟರ್ ಸಂಕೇತ ಸಂಖ್ಯೆಗಳನ್ನು ನಿಗದಿಪಡಿಸಿಕೊಂಡಿದ್ದರು. ಇವುಗಳಲ್ಲಿ ಏಕರೂಪತೆ ಇರಲಿಲ್ಲ.  ಇದರಿಂದಾಗಿ ಒಂದು ತಂತ್ರಾಂಶವನ್ನು ಬಳಸಿ ತಯಾರಿಸಿದ ಮಾಹಿತಿಯನ್ನು ಮತ್ತೊಂದು ತಂತ್ರಾಂಶದಲ್ಲಿ ತೆರೆದು ಓದಲು ಆಗುತ್ತಿರಲಿಲ್ಲ. ಈ ಸಮಸ್ಯೆಯು ಕನ್ನಡ ಭಾಷೆಗೆ ಮಾತ್ರವಲ್ಲದೇ ಇತರೆ ಎಲ್ಲ ಭಾರತೀಯ ಭಾಷೆಗಳ ವಿಚಾರದಲ್ಲಿ ಸರ್ವೇಸಾಮಾನ್ಯವಾಗಿತ್ತು. ಈ ಸಮಸ್ಯೆಯ ನಿವಾರಣೆಗಾಗಿ ರಾಷ್ಟ್ರೀಯ ಮಟ್ಟದಲ್ಲಿ ತಜ್ಞರ ಸಹಾಯದಿಂದ, ಭಾರತ ಸರಕಾರವು ಎಲ್ಲ ಭಾರತೀಯ ಭಾಷೆಗಳಿಗೆ ಇಸ್ಕಿ (Indian Script Code for Information Interchange-ISCII)  ಎಂಬ ಹೆಸರಿನ ಮಾನಕವನ್ನು (ಸ್ಟ್ಯಾಂಡರ್ಡ್) ನಿರ್ಧರಿಸಿ ಘೋಷಿಸಿತು. ಈ ಹಿನ್ನೆಲೆಯಲ್ಲಿ ಕಂಪ್ಯೂಟರಿನಲ್ಲಿ ಕನ್ನಡವೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಕಂಪ್ಯೂಟರ್ ಪಠ್ಯಸಂಗ್ರಹಣೆಗಾಗಿ ಒಂದು ಏಕರೂಪದ ಅಕ್ಷರಗಳ ಎನ್‌ಕೋಡಿಂಗ್ ವಿಧಾನವು ದೊರೆಯಿತು.

ಇಸ್ಕಿ ಮಾನಕವೇ ಸರಿಯಿಲ್ಲ ಎಂಬ ವಾದವನ್ನು ಮುಂದೊಡ್ಡಿ ಯಾವೊಬ್ಬ ತಂತ್ರಾಂಶ ತಯಾರಕರೂ ಇಸ್ಕಿ ಮಾನಕವನ್ನು ಅಳವಡಿಸಿಕೊಳ್ಳಲಿಲ್ಲ. ಬದಲಾಗಿ ತಮ್ಮ ಹಳೆಯ ತಂತ್ರಾಂಶಗಳ ಹೊಸ ಆವೃತ್ತಿಗಳಲ್ಲಿ ಸೇವ್ ಆಸ್ ಇಸ್ಕಿ...ಎಂಬ ಆಪ್ಷನ್‌ನ್ನು ನೀಡಿ ಕೈತೊಳೆದುಕೊಂಡರು. ಮಾಹಿತಿ ವಿನಿಮಯದ ಸಮಸ್ಯೆ ಪರಿಹಾರ ಕಾಣಲಿಲ್ಲ. ಸರ್ಕಾರೀ ಕಚೇರಿಗಳ ಕಂಪ್ಯೂಟರ್‌ಗಳಲ್ಲಿ ಮತ್ತು ಸಾರ್ವಜನಿಕರೂ ಸಹ ತಮ್ಮ ಕಂಪ್ಯೂಟರ್‌ಗಳಲ್ಲಿ ಕನ್ನಡ ಭಾಷೆಯ ಬಳಕೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ತಾಂತ್ರಿಕ ಸಮಸ್ಯೆಗಳು ಮತ್ತು ಬಳಕೆಯ ಗೊಂದಲಗಳ ಕಾರಣ ಕಂಪ್ಯೂಟರ್‌ಗಳಲ್ಲಿ ಕನ್ನಡದ ಬಳಕೆಯು ಕುಂಠಿತಗೊಳ್ಳುವ ಎಲ್ಲಾ ಅಪಾಯಗಳು ಕಂಡುಬಂದವು. ಕರ್ನಾಟಕ ರಾಜ್ಯ ಸರಕಾರವು ತಾನೇ ಒಂದು ಉಚಿತ ಕನ್ನಡ ತಂತ್ರಾಂಶವನ್ನು ಮಾನಕಗಳ ಅನುಸಾರ ಸಿದ್ಧಪಡಿಸಿಕೊಂಡು ತನ್ನ ಎಲ್ಲಾ ಇಲಾಖಾ ಕಚೇರಿಗಳ ಬಳಕೆಗೆ ನೀಡುವುದು ಮತ್ತು ಅದನ್ನು ಸಾರ್ವಜನಿಕರಿಗೂ ಸಹ ಉಚಿತವಾಗಿ ನೀಡಿ ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಬಳಸುವಲ್ಲಿನ ಸಮಸ್ಯೆಗಳನ್ನು ಪರಿಹರಿಸಿ, ಕನ್ನಡವೂ ಸಹ ಕಂಪ್ಯೂಟರ್‌ನಲ್ಲಿ ಉಳಿದು ಬೆಳೆಯಲು ಅನುವು ಮಾಡಿಕೊಡುವುದು ಅಂದಿನ ಅಗತ್ಯವಾಗಿತ್ತು.

     ಕನ್ನಡವನ್ನು ಕಂಪ್ಯೂಟರ್‌ಗಳಲ್ಲಿ ಬಳಸುವಲ್ಲಿ ಇದ್ದ ಸಮಸ್ಯೆಗಳನ್ನು ಸರ್ಕಾರ ಮತ್ತು ತಂತ್ರಾಂಶ ತಯಾರಕರ ಗಮನಕ್ಕೆ ತಂದು ಅವರ ಮನವೊಲಿಸಿ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವ ಉದ್ದೇಶದಿಂದ ಆಸಕ್ತ ವ್ಯಕ್ತಿಗಳು ಮತ್ತು ತಜ್ಞರು ಸೇರಿ ಕನ್ನಡ ಗಣಕ ಪರಿಷತ್ತುಎಂಬ ಸ್ವಯಂಸೇವಾ ಸಂಘವನ್ನು ೧೯೯೭ರಲ್ಲಿ ಆರಂಭಿಸಿದರು. ಗಣಕ ಪರಿಷತ್ತಿನ ಪದಾಧಿಕಾರಿಗಳ ಕೋರಿಕೆಗಳು, ಮನವಿಗಳು ಮತ್ತು ಒತ್ತಡಗಳು ಹೆಚ್ಚಿದ ಕಾರಣ, ಸಮಸ್ಯೆಗಳ ಪರಿಹಾರಕ್ಕಾಗಿ ರಾಜ್ಯ ಸರಕಾರವು ಎರಡು ಹಂತಗಳಲ್ಲಿ ಕಾರ್ಯನಿರ್ವಹಿಸುವ ಆಲೋಚನೆಯನ್ನು ಮಾಡಿತು. ಮೊದಲನೆಯ ಹಂತದಲ್ಲಿ ತಜ್ಞರ ಸಮಿತಿಯೊಂದನ್ನು ರಚಿಸಿ, ಕನ್ನಡಕ್ಕೆ ಏಕರೂಪದ ಕಂಪ್ಯೂಟರ್ ಸಂಕೇತಗಳನ್ನು ನಿಗದಿಪಡಿಸುವುದು ಮತ್ತು ಎರಡನೆಯ ಹಂತದಲ್ಲಿ ಕನ್ನಡಕ್ಕೆ ಒಂದು ಏಕರೂಪ ಮಾನಕ (ಸ್ಟ್ಯಾಂಡರ್ಡ್) ಲಿಪಿತಂತ್ರಾಂಶವನ್ನು ಸಿದ್ಧಪಡಿಸುವುದು.

ಸರಕಾರದ ಹಾಗೂ ಸಾರ್ವಜನಿಕರ ಬಳಕೆಗಾಗಿ ಕನ್ನಡದ ಒಂದು ಲಿಪಿತಂತ್ರಾಂಶವನ್ನು ಸರಕಾರವೇ ಸಿದ್ಧಪಡಿಸಿಕೊಳ್ಳುವ ಸಲಹೆಯನ್ನು ಅಂದಿನ ಸರಕಾರದ ಗಣಕ ಕೇಂದ್ರದ ನಿರ್ದೇಶಕರು ಮತ್ತು ಐಎಎಸ್ ಅಧಿಕಾರಿಗಳಾದ ಡಾ||ಇ.ವಿ.ರಮಣ ರೆಡ್ಡಿಯವರ ಮುಂದೆ ಮೊದಲಿಗೆ ಮಂಡಿಸಿದ್ದು ಗಣಕ ಪರಿಷತ್ತಿನ ಸ್ಥಾಪಕ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಈ ಅಂಕಣಕಾರ. ಪರಿಷತ್ತಿನ ಸ್ಥಾಪಕ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಚಿ.ವಿ.ಶ್ರೀನಾಥ ಶಾಸ್ತ್ರಿಯವರು ಆ ಸಲಹೆಯನ್ನು ಪರಿಗಣಿಸಿ ಅನುದಾನ ನೀಡುವಂತೆ ಸರ್ಕಾರವನ್ನು ಕೋರಿದರು. ಲಿಪಿತಂತ್ರಾಂಶವನ್ನು ಸಿದ್ಧಪಡಿಸುವುದಾಗಿ ತಿಳಿಸಿ ಗಣಕ ಪರಿಷತ್ತು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿತು. ಹೀಗೆ ಸರಕಾರದ ಮಟ್ಟದಲ್ಲಿ ಕನ್ನಡ ಲಿಪಿತಂತ್ರಾಂಶದ ತಯಾರಿಕೆಯ ಪ್ರಯತ್ನಗಳು ಆರಂಭವಾದವು.

     ತಜ್ಞರ ಸಮಿತಿಯ ಶಿಫಾರಸ್ಸಿನ ಅನ್ವಯ ಕನ್ನಡಕ್ಕೆ ಏಕರೂಪ ಗ್ಲಿಫ಼್ ಸಂಕೇತಗಳು ಸರಕಾರದಿಂದ ಘೋಷಣೆಯಾಯಿತು. ಆವೇಳೆಗಾಗಲೇ ಕನ್ನಡಕ್ಕೆ ಏಕರೂಪ ಕೀಲಿಮಣೆ ವಿನ್ಯಾಸವೂ ಸಹ ಘೋಷಿತವಾಗಿತ್ತು. ಏಕರೂಪ ಮಾನಕ ಕನ್ನಡ ಲಿಪಿತಂತ್ರಾಂಶತಯಾರಿಸಿಕೊಡಲು ಕನ್ನಡ ಗಣಕ ಪರಿಷತ್ತಿಗೆ ರಾಜ್ಯ ಸರಕಾರವು ಅನುದಾನವನ್ನು ನೀಡಿತು. ಹಲವು ತಂತ್ರಾಂಶ ತಯಾರಕರು, ತಂತ್ರಜ್ಞರು ನೀಡಿದ ಜ್ಞಾನಾನುಭವಗಳ ಕೊಡುಗೆ ಪಡೆದ ಗಣಕ ಪರಿಷತ್ತು ಕಲಿತ’ (ಕನ್ನಡ ಲಿಪಿ ತಂತ್ರಾಂಶ) ಎಂಬ ಹೆಸರಿನಲ್ಲಿ  ಕನ್ನಡದ ಸ್ವತಂತ್ರ ಲಿಪಿತಂತ್ರಾಂಶವನ್ನು ಸಿದ್ಧಪಡಿಸಿತು. ಈ ತಂತ್ರಾಂಶವು ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಂದಿನ ಅಧ್ಯಕ್ಷರಾದ ಡಾ.ಬರಗೂರು ರಾಮಚಂದ್ರಪನವರ ವಿಶೇಷ ಆಸಕ್ತಿಯಿಂದ ಮತ್ತಷ್ಟು ಅಭಿವೃದ್ಧಿಗೊಂಡು ಮುಂದೆ ನುಡಿಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು. ಕಾಲಕಾಲಕ್ಕೆ ಹಲವು ಆವೃತ್ತಿಗಳು ಅಭಿವೃದ್ಧಿಗೊಂಡು ಬಿಡುಗಡೆಯಾದವು. ಪ್ರಸ್ತುತ, ನುಡಿ ೫.೦ ಆವೃತ್ತಿಯು ಬಳಕೆಯಲ್ಲಿದೆ.
ಸರಕಾರದ ಮಾನಕಗಳ ಅನುಸಾರ ಮೊದಲಿಗೆ ತಯಾರಾದ ನುಡಿತಂತ್ರಾಂಶವನ್ನು ಇತರ ಕನ್ನಡ ಲಿಪಿತಂತ್ರಾಂಶಗಳನ್ನು ಪರೀಕ್ಷಿಸಲು ಬಳಸಬಹುದಾದ ಒಂದು ಬೆಂಚ್ ಮಾರ್ಕ್ (ಮಾದರಿ) ತಂತ್ರಾಂಶವನ್ನಾಗಿ ಪರಿಗಣಿಸಲಾಯಿತು. ವಿಶ್ವಾದ್ಯಂತ ಇರುವ ಕನ್ನಡಿಗರು ನುಡಿತಂತ್ರಾಂಶವನ್ನು ಬಳಸುವಲ್ಲಿ ಉತ್ಸಾಹ ತೋರಿದರು. ಕರ್ನಾಟಕ ಸರಕಾರವು ತನ್ನ ಎಲ್ಲಾ ಇಲಾಖಾ ಕಛೇರಿಗಳಲ್ಲಿ ಅಲ್ಲದೆ, ಸರಕಾರದ ಅಂಗ-ಸಂಸ್ಥೆಗಳು ಮತ್ತು ಇತರ ಸ್ವಾಯತ್ತ ಸಂಸ್ಥೆಗಳ ಕಂಪ್ಯೂಟರ್‌ಗಳಲ್ಲಿ ಈ ನುಡಿತಂತ್ರಾಂಶವನ್ನು ಬಳಸುತ್ತಿದೆ. ಅನೇಕ ಖಾಸಗಿ ವ್ಯಕ್ತಿಗಳು, ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರು ಪತ್ರಲೇಖನ, ದಸ್ತಾವೇಜು ತಯಾರಿಕೆ ಮತ್ತು ಡಿ.ಟಿ.ಪಿ. ಉದ್ದೇಶಗಳಿಗಾಗಿ ನುಡಿತಂತ್ರಾಂಶವನ್ನು ಇಂದಿಗೂ ಬಳಸುತ್ತಿದ್ದಾರೆ. ಸ್ಥಳೀಯ ಖಾಸಗಿ ತಂತ್ರಾಂಶ ತಯಾರಕರು ನುಡಿ ಎಸ್.ಡಿ.ಕೆ.ಗಳನ್ನು (ಸಾಫ್ಟ್‌ವೇರ್ ಡೆವೆಲಪ್‌ಮೆಂಟ್ ಕಿಟ್) ಬಳಸಿ ವಿವಿಧ ಉದ್ದೇಶಗಳಿಗಾಗಿ ಗ್ರಾಹಕೀಕೃತ ಆನ್ವಯಿಕ ತಂತ್ರಾಂಶಗಳನ್ನು ತಯಾರಿಸುತ್ತಿದ್ದಾರೆ. ರಾಜ್ಯ ಸರಕಾರದ ವಿವಿಧ ಇಲಾಖೆಗಳ ಕಚೇರಿಗಳ ಕೆಲಸಗಳಿಗೆ ನುಡಿ ಬಳಕೆಯಾಗುತ್ತಿದೆ. ಇಲಾಖೆಗಳ ಅಂತರಜಾಲತಾಣಗಳಲ್ಲಿ ಮತ್ತು ಕೆಲಸ ಕಾರ್ಯಗಳ ಗಣಕೀಕರಣದಲ್ಲಿ ನುಡಿ ಬಳಕೆಯಾಗುತ್ತಿದೆ. ರಾಜ್ಯ ಸರಕಾರವು ಕಂಪ್ಯೂಟರ್‌ನಲ್ಲಿ ಕನ್ನಡದ ಬಳಕೆಗಾಗಿ ನುಡಿಯನ್ನೇ ಅವಲಂಬಿಸಿದೆ. ಭಾರತದ ಯಾವುದೇ ರಾಜ್ಯ ಸರಕಾರವು ತನ್ನದೇ ಆದ ಮಾದರಿ ತಂತ್ರಾಂಶವನ್ನು ಅಳವಡಿಸಿಕೊಂಡಿದ್ದುದು ಇದೇ ಪ್ರಥಮ. ಕನ್ನಡದ ಲಿಪಿತಂತ್ರಾಂಶವನ್ನು ಮುಂದೆ ಯಾವುದೇ ತಂತ್ರಾಂಶ ತಯಾರಕರು ಸಿದ್ಧಪಡಿಸಬೇಕೆಂದರೆ, ಅದು ರಾಜ್ಯ ಸರಕಾರದ ಶಿಷ್ಟತೆಯ ಅನುಸಾರವೇ ಇರಬೇಕೆಂದು ಆದೇಶಿಸಲಾಗಿತ್ತು. ಶಿಷ್ಟತೆಗೆ ಮಾದರಿ ಈ ನುಡಿ ತಂತ್ರಾಂಶ ಎಂದು ಘೋಷಿಸಲಾಗಿತ್ತು. 

ನುಡಿ ತಯಾರಾದ ಕಾಲಘಟ್ಟದಲ್ಲಿ, ಅದೊಂದು ಹಲವು ವೈಶಿಷ್ಟ್ಯತೆಗಳನ್ನುಳ್ಳ ಉಚಿತ ತಂತ್ರಾಂಶ ಎಂಬ ಖ್ಯಾತಿ ಪಡೆಯಿತು.  ಹೀಗಾಗಿ, ಅದು ಎಲ್ಲೆಡೆ ವ್ಯಾಪಕವಾಗಿ ಬಳಕೆಗೆ ಬಂತು. ಜಾಗತಿಕ ಮಾನಕವಾದ ಯೂನಿಕೋಡ್ ಈಗ ಮುನ್ನೆಲೆಗೆ ಬಂದಿದೆ. ಹಳೆಯ ಮಾನಕಗಳು ಅಪ್ರಸ್ತುತವಾಗಿವೆ. ನುಡಿಯಲ್ಲಿನ ಆಸ್ಕಿ-ಎನ್‌ಕೋಡಿಂಗ್ ಉಳ್ಳ ಫಾಂಟುಗಳು ಈಗ ಹಿನ್ನೆಲೆಗೆ ಸರಿದಿವೆ. ನುಡಿ-೫.೦ ಆವೃತ್ತಿಯಲ್ಲಿ ಯೂನಿಕೋಡ್ ಫಾಂಟುಗಳನ್ನು ಅಳವಡಿಸಲಾಗಿದೆ. ೬೪ ಬಿಟ್ ಬೆಂಬಲವುಳ್ಳ ನುಡಿ-೬.೦ ಆವೃತ್ತಿಯ ಬಿಡುಗಡೆ ನಿರೀಕ್ಷಣೆಯಲ್ಲಿದೆ.








ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...