ವಿಷಯಕ್ಕೆ ಹೋಗಿ

37. ಹಳತಾಗಿಹೋಗಿರುವ ಟೆಂಪ್ಲೇಟ್ ಮತ್ತು ಮ್ಯಾಕ್ರೋಗಳು - ಕನ್ನಡಕ್ಕೆ ಕೊನೆಗೊಂಡ ಸುತ್ತುಬಳಸು ಮಾರ್ಗಗಳು






ಕನ್ನಡ ಲೇಖಕರ ಹೆಸರು ಮತ್ತಿತರ ವಿವರಗಳ ಪಟ್ಟಿಯನ್ನು ಹಿರಿಯ ಮಿತ್ರರೊಬ್ಬರು ನುಡಿ ಫಾಂಟ್ ಬಳಸಿ ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಟೈಪ್‌ಮಾಡಿದ್ದರು. ಹೆಸರುಗಳನ್ನು ಅಕಾರಾದಿಯಲ್ಲಿ ವಿಂಗಡಿಸಲು ಸಹಾಯವನ್ನು ಕೋರಿದರು. ನುಡಿಯಲ್ಲಿ ಇರುವ ಟೆಂಪ್ಲೇಟ್‌ನ್ನು ಬಳಸಿ ವಿಂಗಡಣೆಯನ್ನು ಮಾಡಿಕೊಳ್ಳುವ ಕ್ರಮವನ್ನು ದೂರವಾಣಿಯಲ್ಲಿಯೇ ವಿವರಿಸಲಾಯಿತು. ಹಲವು ಕಸರತ್ತುಗಳನ್ನು ಮಾಡಿದ ಅವರು ಕಾರ್ಯಸಾಧನೆಯಲ್ಲಿ ವಿಫಲರಾದರು. ವೈಫಲ್ಯದ ಕಾರಣಗಳನ್ನು ತಿಳಿಯಲು ಅವರಿಗೆ ಹಲವು ಪ್ರಶ್ನೆಗಳನ್ನು ಹಾಕಲಾಯಿತು. ಟೈಪ್ ಮಾಡಲು ಬಳಸಿರುವ ಫಾಂಟ್‌ನ ಹೆಸರೇನು? ಎಂ.ಎಸ್.ಆಫೀಸ್‌ನ ಆವೃತ್ತಿ (ವರ್ಷನ್) ಯಾವುದು?  ನುಡಿತಂತ್ರಾಂಶದ ಆವೃತ್ತಿ ಯಾವುದು?  ನೀವು ಬಳಸುತ್ತಿರುವ ವಿಂಡೋಸ್ ಆಪರೇಟಿಂಗ್ ಸಿಸ್ಟಂ ೩೨ ಬಿಟ್ನದೋ ಅಥವಾ ೬೪ ಬಿಟ್ನದೋ?

ನಿವೃತ್ತ ಪ್ರಾಂಶುಪಾಲರಾದ ಮಿತ್ರರು ಪ್ರಶ್ನೆಗಳ ಸರಮಾಲೆ ಕೇಳಿ ಕಕ್ಕಾಬಿಕ್ಕಿಯಾದರು. ಫಾಂಟ್‌ನ ಹೆಸರು ಮಾತ್ರವಷ್ಟೇ ಗೊತ್ತು ಎಂದ ಅವರು ಮಾಹಿತಿ ವಿಂಗಡಣೆಯ ವೈಫಲ್ಯವನ್ನು ತಿಳಿಯಲು ಇಷ್ಟೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕೆ? ಎಂದು ಮರುಪ್ರಶ್ನೆಯನ್ನು ಹಾಕಿದರು. ಆಸ್ಕಿ-ಫಾಂಟುಗಳ ವಿಷಯದಲ್ಲಿ ಕನ್ನಡಕ್ಕೆ ಇರುವುದು ಹಲವು ಸ್ತರಗಳ ತಂತ್ರಾಂಶಗಳ ವ್ಯವಸ್ಥೆ. ಯಾವುದಾದರೊಂದು ಸ್ತರದಲ್ಲಿ ಸಮಸ್ಯೆ  ಇದ್ದರೆ ಕೆಲಸ ಕೈಗೂಡುವುದಿಲ್ಲ. ಸಮಸ್ಯೆಯನ್ನು ವಿಶ್ಲೇಷಿಸಿದಾಗ ಮಾತ್ರವೇ ಪರಿಹಾರ ಗೋಚರಿಸುವುದಾಗಿ ಅವರಿಗೆ ಮನವರಿಕೆ ಮಾಡಲಾಯಿತು.  ಕೊನೆಗೆ, ಅವರು ಸೃಷ್ಟಿಸಿದ್ದ ಎಕ್ಸೆಲ್ ಕಡತವನ್ನು ಮೇಯ್ಲ್ ಮೂಲಕ ತರಿಸಿಕೊಂಡು, ಪಠ್ಯದ ಫಾಂಟ್‌ನ್ನು ಯುನಿಕೋಡ್‌ಗೆ ಪರಿವರ್ತಿಸಿ, ಅಕಾರಾದಿ ವಿಂಗಡಿಸಿ ಮತ್ತೆ ಮೇಯ್ಲ್ ಮೂಲಕ ವಾಪಸ್ ಕಳುಹಿಸಲಾಯಿತು.

ಎಂ.ಎಸ್.ಎಕ್ಸೆಲ್‌ನ ಎಲ್ಲಾ ಸವಲತ್ತುಗಳನ್ನು (ಫೀಚರ‍್ಸ್) ಬಹು ಜಾಣ್ಮೆಯಿಂದ ಕನ್ನಡದಲ್ಲಿಯೂ ಪಡೆಯಲು ಎಂ.ಎಸ್.ಎಕ್ಸೆಲ್ ಬಳಕೆಯಲ್ಲಿ ಪರಿಣಿತಿ ಅವಶ್ಯಕ. ಸ್ಪ್ರೆಡ್‌ಶೀಟ್ ತಂತ್ರಾಂಶದ ಎಲ್ಲಾ ಉಪಯೋಗಗಳನ್ನು ಕನ್ನಡ ಲಿಪಿಯಲ್ಲಿ ಪಡೆಯಲು ಕಂಪ್ಯೂಟರಿನಲ್ಲಿ ಅಳವಡಿಸಲಾಗಿರುವ ಕನ್ನಡ ಲಿಪಿವ್ಯವಸ್ಥೆಯಲ್ಲಿ ಸೂಕ್ತ ರೀತಿಯ ಆಯ್ಕೆಗಳನ್ನು ಮಾಡಿ ಟೈಪ್‌ಮಾಡುವ ಜಾಣ್ಮೆಯೂ ಅಗತ್ಯ.  ತಾಂತ್ರಿಕವಾಗಿ ಸಮರ್ಥವಾದ ಕನ್ನಡ ಲಿಪಿವ್ಯವಸ್ಥೆಯನ್ನು ಕಂಪ್ಯೂಟರುಗಳಲ್ಲಿ ಅಳವಡಿಕೆ, ಅದರ ಬಳಕೆಯ ಪೂರ್ಣ ಪರಿಜ್ಞಾನ ಮತ್ತು ಎಕ್ಸೆಲ್ ಬಳಕೆಯಲ್ಲಿ ಅನುಭವ ಇದ್ದಾಗ ಮಾತ್ರ ಎಕ್ಸೆಲ್‌ನಲ್ಲಿ ಕನ್ನಡದ ಬಳಕೆ ಯಶಸ್ವಿಯಾಗುತ್ತದೆ. ಇವೆಲ್ಲವೂ ಆಸ್ಕಿ-ಎನ್‌ಕೋಡಿಂಗ್ ಉಳ್ಳ ಕನ್ನಡ ಪಠ್ಯವನ್ನು ಸೃಜಿಸುವ ಕನ್ನಡ ಲಿಪಿವ್ಯವಸ್ಥೆಗಳಿಗೆ ಅನ್ವಯಿಸುತ್ತವೆ (ನುಡಿ, ಬರಹ, ಕುವೆಂಪು ತಂತ್ರಾಂಶ ಇತ್ಯಾದಿ)  ಎಂ.ಎಸ್.ಎಕ್ಸೆಲ್‌ನಲ್ಲಿ ಕನ್ನಡದ ಫ಼ಾಂಟ್ ನಿಗದಿಪಡಿಸಿ ಟೈಪ್‌ಮಾಡುವ ಸೌಲಭ್ಯವಿದೆ. ಆದರೆ, ಸಾರ್ಟಿಂಗ್ (ವಿಂಗಡಣೆ) ಮಾಡಲು ಪ್ರತ್ಯೇಕ ವ್ಯವಸ್ಥೆಯನ್ನು ಬಳಸಬೇಕಾಗುತ್ತದೆ. ನುಡಿತಂತ್ರಾಂಶವು ಕೆಲವು ಮ್ಯಾಕ್ರೋ ರೂಪದ ಟೆಂಪ್ಲೇಟ್‌ನ್ನು ಒದಗಿಸುತ್ತದೆ. ಅದನ್ನು ಆಯ್ದುಕೊಂಡು ನುಡಿಬಳಸಿ ಎಕ್ಸೆಲ್‌ನಲ್ಲಿ ಸಿದ್ಧಪಡಿಸಿದ ಮಾಹಿತಿಯನ್ನು ಕನ್ನಡದ ಅಕ್ಷರಾನುಕ್ರಮಣಿಕೆಯಲ್ಲಿ ವಿಂಗಡಿಸಬಹುದು.  ಈ ಮ್ಯಾಕ್ರೋ ಬಳಸಿ ಕಾರ್ಯಸಾಧಿಸಲು ಡ್ರಾವಿಡ ಪ್ರಾಣಾಯಾಮವನ್ನೇ ಮಾಡಬೇಕಾಗುತ್ತದೆ ಎಂಬುದು ಅತಿಶಯೋಕ್ತಿಯಲ್ಲ. ಮೊದಲು, ಮ್ಯಾಕ್ರೋ ಬಳಕೆಯ ಅನುಮತಿಯನ್ನು ಸಕ್ರಿಯಗೊಳಿಸಿಕೊಳ್ಳಬೇಕು. ವಿಂಗಡಿಸಬೇಕಾದ ಮಾಹಿತಿಗಳನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಬೇಕು. ಯಾವ ಕಾಲಂ ಆಧರಿಸಿ ಮಾಹಿತಿ ವಿಂಗಡಣೆ ಮಾಡಬೇಕು ಮತ್ತು ಮೊದಲ ಸಾಲು ಶೀರ್ಷಿಕೆಯೇ ಅಲ್ಲವೇ ಎಂದು ಸೂಕ್ತ ಆಯ್ಕೆಗಳನ್ನು ಕ್ಲಿಕ್‌ಮಾಡಿ ತಿಳಿಸಬೇಕು. ಇವುಗಳಲ್ಲಿ ಏನಾದರೊಂದು ವ್ಯತ್ಯಾಸವಾದರೂ ಸಹ ಹಲವು ತೊಡಕುಗಳ ಸಂದೇಶಗಳು ಪ್ರಕಟವಾಗುತ್ತವೆ.

ತೊಡಕಿನ ಸಂದೇಶಗಳು ಹಲವು ಸಂದರ್ಭಗಳನ್ನು ಆಧರಿಸಿರುತ್ತವೆ. ನುಡಿ ೪.೦ ಆವೃತ್ತಿಯ ಟೆಂಪ್ಲೇಟ್‌ನ್ನು ಹಳೆಯ ಆವೃತ್ತಿಯ (೩೨ ಬಿಟ್) ವಿಂಡೋಸ್, ಎಂಎಸ್.ಆಫೀಸ್‌ಗಳಲ್ಲಿ ಬಳಸಬಹುದು. ೬೪ ಬಿಟ್‌ಗಳ ಆವೃತ್ತಿಗಳಲ್ಲಿ ನುಡಿ ಟೆಂಪ್ಲೇಟ್ ಹೆಚ್ಚಿನ ಸಂದರ್ಭಗಳಲ್ಲಿ ವಿಫಲವಾಗುತ್ತದೆ. ನುಡಿಯ ೬೪ಬಿಟ್‌ನ ಆವೃತ್ತಿಯು ಬಳಕೆಗೆ ಲಭ್ಯವಿಲ್ಲ. ನುಡಿ ೬೪ ಬಿಟ್ ಆವೃತ್ತಿ ಸದ್ಯಲ್ಲಿಯೇ ಬಿಡುಗಡೆ ಮಾಡಲಾಗುತ್ತದೆಎಂದು ಕನ್ನಡ ಗಣಕ ಪರಿಷತ್ತಿನ ಜಾಲತಾಣವು ಒಂದು ವರ್ಷದಿಂದಲೂ ಹೇಳುತ್ತಲೇ ಇದೆ.

ತಂತ್ರಾಂಶಗಳ ವಿಷಯದಲ್ಲಿ ಕನ್ನಡಕ್ಕೆ ಹಲವು ಬೈಪಾಸ್ ರಸ್ತೆಗಳನ್ನು ನಮ್ಮ ತಂತ್ರಜ್ಞರು ರೂಪಿಸಿದ್ದರು. ಇಂದು ಕೆಲವು ನಿರುಪಯುಕ್ತಗೊಂಡಿವೆ. ಕೆಲವನ್ನು ಮುಚ್ಚಲಾಗಿದೆ. ಮತ್ತೆ ಕೆಲವು ಕೊನೆಗೊಂಡು ರಾಜಮಾರ್ಗಕ್ಕೆ ಸೇರ್ಪಡೆಗೊಂಡಿವೆ. ಕನ್ನಡಕ್ಕೆ ಯೂನಿಕೋಡ್ ಎಂಬ ರಾಜಮಾರ್ಗ ದೊರೆತಮೇಲೆ ನಾವೇ ಸೃಷ್ಟಿಸಿಕೊಂಡಿರುವ ಒಳಹಾದಿಗಳು ಮತ್ತು ಬೈಪಾಸ್ ರಸ್ತೆಗಳ ಅವಶ್ಯಕತೆ ಇಲ್ಲ. ರಾಜಮಾರ್ಗದ ಬಳಕೆ ತಿಳಿಯದ ಮತ್ತು ಹಳೆಯ ಬೈಪಾಸ್ ರಸ್ತೆಗಳು ಮುಚ್ಚಿಹೋಗಿರುವುದು ತಿಳಿಯದ ಕನ್ನಡ ಕಂಪ್ಯೂಟರ್ ಬಳಕೆದಾರರ ಪರದಾಟ ಇನ್ನೂ ನಿಂತಿಲ್ಲ.

ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರ ಆನ್ವಯಿಕ ತಂತ್ರಾಂಶಗಳಿಗೆ ಹೊರಗಿನಿಂದ ಅಳವಡಿಸಿಕೊಳ್ಳಬಹುದಾದ, ಕನ್ನಡದ ತಂತ್ರಾಂಶ ಪರಿಕರಗಳನ್ನು ರಾಷ್ಟ್ರೀಯ ಮತ್ತು ಸ್ಥಳೀಯ ತಂತ್ರಾಂಶ ತಯಾರಿಕರು ಸಿದ್ಧಪಡಿಸಿದ್ದರು. ಇಂಗ್ಲಿಷ್‌ನಲ್ಲಿ ಮಾಡಬಹುದಾದ ಎಲ್ಲಾ ಕೆಲಸಗಳನ್ನು ಕನ್ನಡದಲ್ಲಿಯೂ ನಿರ್ವಹಿಸಲು ಹಲವಾರು ಬಳಸು ಮಾರ್ಗಗಳನ್ನು ಅನ್ವೇಷಿಸಲಾಗಿತ್ತು. ಹಲವಾರು ಕಾರ್ಯತಂತ್ರಗಳನ್ನು ಅಳವಡಿಸಿಕೊಳ್ಳಲಾಗಿತ್ತು. ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಒಂದು ಟೆಂಪ್ಲೇಟ್‌ನ್ನು ರಚಿಸಿ, ಪ್ಲಗ್‌ಇನ್, ಅಡ್-ಇನ್ಸ್ ರೂಪದಲ್ಲಿ ಅವುಗಳನ್ನು ಸೇರ್ಪಡೆಮಾಡಿಕೊಂಡು ಹಲವು ಉದ್ದೇಶಗಳಿಗೆ ಬಳಸಲಾಗುತ್ತಿದೆ. ಮೈಕ್ರೋಸಾಫ್ಟ್ ಎಕ್ಸೆಲ್‌ನಲ್ಲಿ ಅವುಗಳನ್ನು ಮ್ಯಾಕ್ರೋಗಳು ಎಂದು ಕರೆಯಲಾಗಿದೆ. ಎಂ.ಎಸ್.ವರ್ಡ್ ತಂತ್ರಾಂಶದಲ್ಲಿ ಇಂಗ್ಲಿಷ್‌ಗಾಗಿ ನೀಡಲಾಗಿರುವ ವ್ಯವಸ್ಥೆಗಳನ್ನು ಬೈಪಾಸ್ ಮಾಡಿ ನಮ್ಮದೇ ರೀತಿನೀತಿಗಳು ಮತ್ತು ಕ್ರಮಗಳನ್ನು ವ್ಯಾಖ್ಯಾನಿಸಲು ಅವಕಾಶವಿದೆ. ನುಡಿತಂತ್ರಾಂಶದಲ್ಲಿ ತಜ್ಞರು ಕನ್ನಡದ ಒಂದು ಟೆಂಪ್ಲೇಟ್ ಸೃಷ್ಟಿಸಿ ಅಳವಡಿಸಿದ್ದಾರೆ. ಅದು ಕನ್ನಡದ ಬಳಕೆಯ ಸಂದರ್ಭಕ್ಕೆ ಅಗತ್ಯವಿರುವ ಬಹುತೇಕ ಸೌಲಭ್ಯಗಳನ್ನು ನೀಡಿದೆ. ಕನ್ನಡ ಟೆಂಪ್ಲೇಟ್ಎಂದರೆ, ಬಳಸಲು ಒಂದು ಫಾಂಟ್‌ನ ಆಯ್ಕೆ, ಮಾಹಿತಿ ವಿಂಗಡಣೆಯ ಕ್ರಮ, ಪದಪರೀಕ್ಷೆಗಾಗಿ ಪ್ರತ್ಯೇಕ ಪದಕೋಶದ ನಿಗದಿ, ಟೈಪ್‌ಮಾಡುತ್ತಿದ್ದಂತೆಯೇ ತಪ್ಪಾದ ಪದಗಳನ್ನು ತಾನಾಗಿಯೇ ಸರಿಪಡಿಸಿಕೊಳ್ಳುವ ಆಟೋಕರೆಕ್ಷನ್ಸೌಕರ್ಯ ಇತ್ಯಾದಿ ಸವಲತ್ತುಗಳನ್ನು ನಮ್ಮ ರೀತಿಯಲ್ಲಿಯೇ ನಾವೇ (ತಂತ್ರಜ್ಞರು) ವ್ಯಾಖ್ಯಾನಿಸಿಕೊಳ್ಳಬಹುದಾದ ಒಂದು ವ್ಯವಸ್ಥೆ.
ನುಡಿತಂತ್ರಾಂಶ ಅನುಸ್ಥಾಪನೆಯಾದ ಕಂಪ್ಯೂಟರಿನಲ್ಲಿ, ಎಂ.ಎಸ್.ವರ್ಡ್ ಅಪ್ಲಿಕೇಷನ್‌ನ್ನು ತೆರೆದು, ‘ಮೈ ಟೆಂಪ್ಲೇಟ್ಸ್ವಿಭಾಗದಲ್ಲಿ ದೊರೆಯುವ ಕನ್ನಡಎಂಬ ಹೆಸರಿನ ಟೆಂಪ್ಲೇಟ್‌ನ್ನು ಆಯ್ಕೆಮಾಡಿಕೊಂಡು ಹಲವು ಕನ್ನಡದ ಸವಲತ್ತುಗಳನ್ನು ಬಳಸಬಹುದು. ಇಲ್ಲಿ ಹಲವು ಒತ್ತುಗುಂಡಿಗಳಿವೆ. ಎಂ.ಎಸ್.ವರ್ಡ್‌ನ ಕೋಷ್ಟಕದಲ್ಲಿ (ಟೇಬಲ್) ಟೈಪಿಸಲಾದುದನ್ನು ಅಕಾರಾದಿಯಲ್ಲಿ ವಿಂಗಡಿಸಿಕೊಳ್ಳಲು; ‘ಕನ್ನಡ-ಟೈಪಿಂಗ್-ಸ್ಥಿತಿಯಿಂದ ಇಂಗ್ಲಿಷ್-ಟೈಪಿಂಗ್-ಸ್ಥಿತಿಗೆ ತಕ್ಷಣದಲ್ಲಿಯೇ ಸ್ಥಿತ್ಯಂತರಗೊಳ್ಳಲು (ಟಾಗಲ್); ಪದ ಹುಡುಕಿ ಬದಲಿಸಲು; ಪದಪರೀಕ್ಷೆ ಮಾಡಲು ಮತ್ತು ಪದಕೋಶವನ್ನು ಬಳಸಲು - ಇಲ್ಲಿ ಒತ್ತುಗುಂಡಿಗಳಿವೆ.  ಇವನ್ನು ಹಳೆಯ ಆವೃತ್ತಿಗಳಲ್ಲಿ ಮಾತ್ರವೇ ಬಳಸಬಹುದು. ಹೊಸ ೬೪ಬಿಟ್ ವಿಂಡೋಸ್ ಆವೃತ್ತಿಯಲ್ಲಿ (ಯೂನಿಕೋಡ್ ಪರಿವರ್ತನೆ ಸೌಲಭ್ಯವನ್ನು ಹೊರತುಪಡಿಸಿ) ಇವುಗಳು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಕನ್ನಡದ ಈ ಹಳೆಯ ಟೆಂಪ್ಲೇಟ್‌ಗಳು ಮತ್ತು ಮ್ಯಾಕ್ರೋಗಳನ್ನು ಬಳಸಲು ಪ್ರಯತ್ನಿಸಿದರೆ ಹಲವು ದೋಷಸಂದೇಶಗಳು ಪ್ರಕಟವಾಗುತ್ತವೆ. ಸಂದೇಶಗಳು ಇಂಗ್ಲಿಷ್‌ನಲ್ಲಿದ್ದರೆ ಅವುಗಳು ಅಪ್ಲಿಕೇಷನ್ ಸಾಫ್ಟ್‌ವೇರ್ನ ಸಂದೇಶಗಳಾಗಿರುತ್ತವೆ. ಸಂದೇಶಗಳು ಕನ್ನಡದಲ್ಲಿದ್ದರೆ, ಅವುಗಳು ಟೆಂಪ್ಲೇಟ್‌ನಿಂದ ಬಂದ ಸಂದೇಶಗಳಾಗಿರುತ್ತವೆ. 


        ಯೂನಿಕೋಡ್ ಫಾಂಟ್ ಬಳಕೆಗೆ ಬಂದ ನಂತರದಲ್ಲಿ ಕಂಪ್ಯೂಟರಿನಲ್ಲಿ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಕನ್ನಡಕ್ಕೆ ರಾಜಮಾರ್ಗ ದೊರೆತಿದೆ. ಆಸಿ-ಫಾಂಟ್ ಆಧಾರಿತ ಬಳಸು ದಾರಿಗಳನ್ನು ಇನ್ನು ಉಪಯೋಗಿಸಬೇಕಾಗಿಲ್ಲ. ಎಂ.ಎಸ್.ವರ್ಡ್ ಮತ್ತು ಎಕ್ಸೆಲ್ ನೀಡುವ ಸಾರ್ಟಿಂಗ್ ಸೌಲಭ್ಯವನ್ನು ನೇರವಾಗಿ ಬಳಸಬಹುದು. ಯೂನಿಕೋಡ್ ಅಕ್ಷರ ಸಂಕೇತೀಕರಣಹೊಂದಿರುವ ಕನ್ನಡವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದರಿಂದ ಆಪರೇಟಿಂಗ್ ಸಿಸ್ಟಂಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್ಮಟ್ಟದಲ್ಲಿ ಎಲ್ಲ ರೀತಿಯಲ್ಲಿ ಸಮರ್ಥವಾಗಿ ಪ್ರತಿನಿಧಿಸಲ್ಪಟ್ಟಿದೆ. ಹೀಗಾಗಿ, ಈಗ ಕನ್ನಡ ಲಿಪಿತಂತ್ರಾಂಶಗಳ ಟೆಂಪ್ಲೇಟ್ ಮತ್ತು ಮ್ಯಾಕ್ರೋಗಳ ಹೊಸ ಆವೃತ್ತಿಗಳನ್ನು ರೂಪಿಸುವ ಅಗತ್ಯವೇ ಇಲ್ಲದಂತಾಗಿದೆ. ಆದರೂ, ಕನ್ನಡ ಗಣಕ ಪರಿಷತ್ತಿನ ಜಾಲತಾಣವು ನುಡಿ ಟೆಂಪ್ಲೇಟ್ ತೊಂದರೆಗಳನ್ನು ನೀವಾರಿಸಲಾಗುವುದುಎಂದು ಭರವಸೆಯನ್ನು ನೀಡುತ್ತಲೇ ಇದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...