ವಿಷಯಕ್ಕೆ ಹೋಗಿ

33. “ಇರುವ ಆಸ್ಕಿ ಫಾಂಟು ಬಿಡು ಹರುಷಕ್ಕಿದೆ ಯೂನಿಕೋಡ್!


       ಕನ್ನಡದ ನುಡಿಯೂನಿಕೋಡ್ ಫಾಂಟ್ ಬಳಸಿ ಟೈಪ್‌ಮಾಡಿದ ಪತ್ರವೊಂದನ್ನು ಎಂ.ಎಸ್.ವರ್ಡ್ ಫೈಲ್ ರೂಪದಲ್ಲಿ ಮೇಯ್ಲ್ ಅಟ್ಯಾಚ್‌ಮೆಂಟ್ ಕಳುಹಿಸಿ ಅಗತ್ಯ ತಿದ್ದುಪಡಿಗಳನ್ನು ಮಾಡಿಕೊಳ್ಳುವಂತೆ ಕೋರಲಾಗಿತ್ತು. ಆದರೆ, ಫೈಲ್ ತೆರೆದರೆ ಎಲ್ಲವೂ ಚಿಕ್ಕಚಿಕ್ಕ ಡಬ್ಬಿಯಾಕಾರದಲ್ಲಿ ಕಾಣುತ್ತಿದ್ದ ಕಾರಣ ಟೈಪ್‌ಮಾಡಿದವರೇ ಬಂದು ಸರಿಪಡಿಸಿಕೊಡುವಂತೆ ಸೂಚನೆ ಬಂದಿತ್ತು. ಪರಿಶೀಲಿಸಲಾಗಿ, ಅಲ್ಲಿನ ಕಂಪ್ಯೂಟರಿನಲ್ಲಿ ಯೂನಿಕೋಡ್ ಫಾಂಟ್ ಇರುವ ಇತ್ತೀಚಿನ ನುಡಿಆವೃತ್ತಿ ಅಳವಡಿಸಿರಲಿಲ್ಲ. ಎಲ್ಲ ಪಠ್ಯವನ್ನು ಸೆಲೆಕ್ಟ್ ಮಾಡಿಕೊಂಡು ತುಂಗಾಫಾಂಟ್‌ನ್ನು ನಿಗದಿ ಪಡಿಸಿದಾಗ ಕನ್ನಡ ಸ್ಪಷ್ಟವಾಗಿ ಮೂಡಿಬಂತು. ಇದನ್ನು ನೀವೇ ಏಕೆ ಮಾಡಬೇಕು ಕಂಪ್ಯೂಟರ್ ತಾನೇ ಮಾಡಿಕೊಳ್ಳಲಾಗದೇ? ಇದೂ ಯೂನಿಕೋಡ್ ಫಾಂಟು ಅದೂ ಸಹ ಯೂನಿಕೋಡ್ ಫಾಂಟೇ ಅಲ್ಲವೇ? ಅಷ್ಟೆಲ್ಲಾ ಜಾಣತನ ಇರೋ ಕಂಪ್ಯೂಟರ್‌ಗೆ ಇಷ್ಟೂ ತಿಳಿಯೋಲ್ಲವೇ? ಎಂಬ ಪ್ರಶ್ನೆಗಳ ಸುರಿಮಳೆಯನ್ನೇ ಎದುರಿಸಬೇಕಾಯಿತು. ಇದಕ್ಕೆಲ್ಲಾ ಉತ್ತರಿಸುವಷ್ಟರಲ್ಲಿ ಆ ಟೈಪಿಸ್ಟ್‌ಗೆ ಸಾಕುಸಾಕಾಗಿಹೋಗಿತ್ತು. ಮೇಲಾಗಿ, ಅಲ್ಲಿದ್ದ ಕೆಲವರು : ಕಂಪ್ಯೂಟರಿನಲ್ಲಿ ಕನ್ನಡ ಅಂದರೆ ಇಷ್ಟೇ, ಬರೀ ಸಮಸ್ಯೆಗಳೇ, ಇಂಗ್ಲಿಷ್ ಎಂದರೆ ರಗಳೆ ಇಲ್ಲ ನೋಡಿಎಂಬ ತೀರ್ಮಾನಕ್ಕೆ ಬಂದರು! ಕಂಪ್ಯೂಟರಿನಲ್ಲಿ ಕನ್ನಡ ಬಳಸುವುದು ಇನ್ನೂ ಕಷ್ಟಕರವೇ ಎಂಬ ಬಹುಜನರ ಅಭಿಪ್ರಾಯಕ್ಕೆ ಕಾರಣ ಹುಡುಕಹೊರಟರೆ ಅನೇಕ ವಿಷಯಗಳು ಹೊರಬರುತ್ತವೆ.

       ಕಂಪ್ಯೂಟರಿನಲ್ಲಿ ಓ.ಎಸ್. ಎಂಬುದು ಪ್ರಮುಖ ತಂತ್ರಾಂಶ ಮತ್ತು ಮೊದಲನೆಯ ತಂತ್ರಾಂಶ ಪದರ. ಉದಾಹರಣೆಗೆ, ಮೈಕ್ರೋಸಾಫ್ಟ್ ವಿಂಡೋಸ್. ಅಪ್ಲಿಕೇಷನ್ ಸಾಫ್ಟ್‌ವೇರ್ (ಉದಾ. ಮೈಕ್ರೋಸಾಫ್ಟ್ ವರ್ಡ್) ಓ.ಎಸ್.ಮೇಲೆ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಎರಡನೆಯ ತಂತ್ರಾಂಶದ ಪದರ. ಇನ್ನು ಭಾಷಾ ಲಿಪಿತಂತ್ರಾಂಶವು (ಉದಾ. ನುಡಿ) ಅಪ್ಲಿಕೇಷನ್ ಸಾಫ್ಟ್‌ವೇರ್ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಮೂರನೆಯ ತಂತ್ರಾಂಶ ಪದರ. ವಿಂಡೋಸ್, ವರ್ಡ್ ಮತ್ತು ನುಡಿ ಎಂಬ ಮೂರೂ ತಂತ್ರಾಂಶ ಪದರಗಳ ನಡುವಿನ ಸಮನ್ವಯತೆ ಇದ್ದರೆ ತೊಂದರೆ ಇಲ್ಲ. ಕಾಲಕ್ರಮೇಣ ಇವುಗಳಲ್ಲಿ ಯಾವುದಾದರೊಂದು (ವಿವಿಧ ಆವೃತ್ತಿಗಳ ಕಾರಣ) ಬದಲಾವಣೆ ಆದರೂ ಸಹ ಸಮನ್ವಯತೆಯ ಕೊರತೆ ಉಂಟಾಗುತ್ತದೆ. (ಕಂಪ್ಯಾಟಬಲಿಟಿ ಸಮಸ್ಯೆ) ಹಲವು ಸಮಸ್ಯೆಗಳು ಉಂಟಾಗುತ್ತವೆ. ಈ ಮೂರೂ ತಂತ್ರಾಂಶ ತಯಾರಕರು ಬೇರೆಬೇರೆಯವರಾಗಿದ್ದರೆ ಸಮಸ್ಯೆಗಳು ಹೆಚ್ಚು. ಎಲ್ಲ ತಂತ್ರಾಂಶ ತಯಾರಕರು ಒಬ್ಬರೇ ಆಗಿದ್ದರೆ ಅವುಗಳ ನಡುವೆ ಸಮನ್ವಯತೆ ಇರುವಂತೆ ನೋಡಿಕೊಂಡಿರುತ್ತಾರೆ. ಇಲ್ಲಿ ವಿಂಡೋಸ್ ಮತ್ತು ವರ್ಡ್ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ಸಿದ್ಧಪಡಿಸಿದ್ದರೆ, ‘ನುಡಿತಂತ್ರಾಂಶ ದೇಸೀ ತಯಾರಕರದು. ಅವುಗಳನ್ನು ಸಿದ್ಧಪಡಿಸಿದ ಕಾಲಘಟ್ಟದಲ್ಲಿ ಸಮನ್ವಯವಿತ್ತಾದರೂ, ಕಾಲಕ್ರಮೇಣ ಮೂರೂ ತಂತ್ರಾಂಶಗಳ ಹೊಸ ಹೊಸ ಆವೃತ್ತಿಗಳ ಕಾರಣ ಸಮನ್ವಯತೆಗೆ ಧಕ್ಕೆಬರುವುದು ಸಹಜ. ಇದೇ ಹಲವು ಸಮಸ್ಯೆಗಳ ಮೂಲ.

       ನಮ್ಮ ದೇಶಕ್ಕೆ ಹೊರಗಿನಿಂದ ಬಂದ ಯಾವುದೇ ಕಾರ್ಯಕ್ಷೇತ್ರದ ತಂತ್ರಜ್ಞಾನಗಳು ಪ್ರಾದೇಶಿಕ ಭಾಷೆಗಳೊಂದಿಗೆ ಸಿದ್ಧವಾಗಿ ಬರುವುದಿಲ್ಲ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನುಗಳ ಕಾರ್ಯಾಚರಣೆ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಂಗಳು - ಓ.ಎಸ್) ಮತ್ತು ಆನ್ವಯಿಕ ತಂತ್ರಾಂಶಗಳು (ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳು - ಆಪ್‌ಗಳು) ಇದಕ್ಕೆ ಹೊರತಾಗಿಲ್ಲ. ನಮ್ಮ ಭಾಷೆಯಲ್ಲಿ ಇರದ ಅವುಗಳನ್ನು ನಾವು ಯಥಾವತ್ತಾಗಿ ಬಳಸುವುದು ಅನಿವಾರ್ಯವಾಗಿತ್ತು. ಓ.ಎಸ್.ಗಳ ಮೇಲೆ ರಚಿಸಲಾದ ಕಾರ್ಯತಂತ್ರಗಳ ಮೂಲಕ ಭಾಷಾ ಲಿಪಿಗಳನ್ನು ನಾವು ಸಿದ್ಧಪಡಿಸಿಕೊಂಡು ಬಳಸುತ್ತಾ ಬಂದಿದ್ದೇವೆ. ಓಎಸ್‌ಗಳು ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳನ್ನು ಸಿದ್ಧಪಡಿಸುವವರು ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು. ಅವುಗಳ ಮೇಲೆ ಕಾರ್ಯನಿರ್ವಹಿಸುವ ನಮ್ಮ ಭಾಷಾ ಲಿಪಿತಂತ್ರಾಂಶಗಳನ್ನು ತಯಾರಿಸುವವರು ದೇಸೀ ತಂತ್ರಜ್ಞರು. ಹಿಂದೆ, ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರೇ ನಮ್ಮ ಭಾಷೆಗೂ ಲಿಪಿತಂತ್ರಾಂಶವನ್ನು ಸಿದ್ಧಪಡಿಸಿ ನೀಡಿದ್ದರೆ ಇವೆಲ್ಲಾ ರಗಳೆಗಳು ಇರುತ್ತಿರಲಿಲ್ಲ. ಅವರ ಕಾರ್ಯಾಚರಣೆ ವ್ಯವಸ್ಥೆಯ ಮೇಲೆ ನಮ್ಮ ಕಾರ್ಯತಂತ್ರಗಳನ್ನು ರೂಪಿಸಿ ಬಳಸಿದ್ದೆವು. ಭಾಷಾಲಿಪಿ ಬಳಕೆಯಲ್ಲಿ ಯಶಸ್ವಿಯಾಗಿದ್ದರೂ, ಕಾಲಕಾಲಕ್ಕೆ ಅಂತಾರಾಷ್ಟ್ರೀಯ ತಂತ್ರಾಂಶಗಳಲ್ಲಿ ಉಂಟಾದ ಬದಲಾವಣೆಗಳ ಕಾರಣದಿಂದಾಗಿ ನಮ್ಮ ಕಾರ್ಯತಂತ್ರಗಳು ವಿಫಲಗೊಂಡವು.  ಕನ್ನಡಕ್ಕೆ ತನ್ನದೇ ಸ್ಥಾನಮಾನಗಳು ಇರದಿದ್ದ ಕಾರಣ, ಬೇರೊಬ್ಬರ ಭಾಷೆಯ ಅಕ್ಷರಗಳ ಸ್ಥಾನಗಳಲ್ಲಿ (ಆಸ್ಕಿ ಎನ್‌ಕೋಡಿಂಗ್) ಕನ್ನಡವನ್ನು ಅಳವಡಿಸಿಕೊಂಡು ಬಳಸುತ್ತಾ ಬಂದಕಾರಣ ವಿಚಿತ್ರಲಿಪಿಗಳು (ಜಂಕ್ ಕ್ಯಾರೆಕ್ಟರ‍್ಸ್) ಮೂಡುವ ಪರಿಸ್ಥಿತಿಯು ಇನ್ನೂ ಮುಂದುವರೆದೇ ಇದೆ. ಕನ್ನಡದ ವಾಹನವನ್ನು ಓಡಿಸಲು ನಮ್ಮದೇ ಆದ ಹೆದ್ದಾರಿ ಇರಲಿಲ್ಲ, ಇನ್ನೊಬ್ಬರ ಹೆದ್ದಾರಿಯಲ್ಲಿ ನಮ್ಮ ಗಾಡಿಯನ್ನು ಓಡಿಸಿದ ಕಾರಣ ಅಪಘಾತಗಳು ಸಹಜವಾಗಿದ್ದವು. ಯೂನಿಕೋಡ್ ಶಿಷ್ಟತೆ ಜಾರಿಗೊಂಡ ನಂತರ, ಕನ್ನಡದ ಗಾಡಿಗೆ ಕನ್ನಡದ್ದೇ ಆದ ಹೆದ್ದಾರಿ ರೂಪುಗೊಂಡು ಸಂಚಾರ ಸುಗಮಗೊಂಡಿದೆ. ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ನಮ್ಮ ದೇಶೀ ಭಾಷೆಗಳನ್ನು ತಮ್ಮ ತಂತ್ರಾಂಶಗಳಲ್ಲಿ ಅಳವಡಿಸಿ ನೀಡುವುದನ್ನು ಆರಂಭಿಸಿದ ನಂತರ, ಭಾಷಾತಂತ್ರಜ್ಞಾನದ ಸಮಸ್ಯೆಗಳು ಬಗೆಹರಿದಿದ್ದರೂ, ಹೊಸತಂತ್ರಜ್ಞಾನದ ಬಳಕೆಯ ವಿಚಾರದಲ್ಲಿ ಚಿಕ್ಕಪುಟ್ಟ ಸಮಸ್ಯೆಗಳು ಇದ್ದೇ ಇವೆ. 

       ಎಲ್ಲಾ ರೀತಿಯ ತಂತ್ರಾಂಶಗಳ ಪ್ರಾದೇಶೀಕರಣದ ಅಂಗವಾಗಿ ಈಗ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ದೇಸೀ ಭಾಷೆಗಳನ್ನು ಅಳವಡಿಸಿ ನೀಡುತ್ತಿದ್ದಾರೆ. ನಮ್ಮ ದೇಸೀ ತಂತ್ರಾಂಶ ತಯಾರಕರನ್ನು ಉದ್ದೇಶಿಸಿ ಅವರು ಹೀಗೆ ಹೇಳುತ್ತಿದ್ದಾರೆ : ಓ.ಎಸ್. ಹಂತದಲ್ಲಿ ನಾವು ಭಾಷಾತಂತ್ರಜ್ಞಾನಗಳ ಸೌಲಭ್ಯಗಳನ್ನು ಅಳವಡಿಸಿ ನೀಡುತ್ತೇವೆ. ನೀವು ನಿಮ್ಮದೇ ಆದ ಭಾಷಾ ಸಲಕರಣೆಗಳನ್ನು (ವಿವಿಧ ಭಾಷಾತಂತ್ರಾಂಶಗಳನ್ನು) ಸಿದ್ಧಪಡಿಸಿಕೊಂಡು ಬಳಕೆದಾರರಿಗೆ ನೀಡಿಇದೊಂದು ಉತ್ತಮವಾದ ಸಲಹೆ. ಸ್ವಯಂಸೇವಾ ಸಂಸ್ಥೆಗಳ ಮೂಲಕ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳೂ ಸಹ ಕನ್ನಡ ತಂತ್ರಾಂಶ ತಯಾರಿಕೆಗೆ ಇಳಿದಿರುವಾಗ ನಮ್ಮ ತಂತ್ರಾಂಶಗಳಿಗೆ ಮಾರುಕಟ್ಟೆ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದಾರೆ ದೇಸೀ ತಂತ್ರಾಂಶ ತಯಾರಕರು. ಎಲ್ಲೆಲ್ಲಿಯೂ ಮೊಬೈಲ್ ಆಪ್‌ಗಳು ಬಳಕೆಯಾಗುತ್ತಿರುವ ಕಾರಣ ಕಂಪ್ಯೂಟರ್ ಆಧಾರಿತ ತಂತ್ರಾಂಶಗಳಿಗೆ ಬಳಕೆಯ ಅವಕಾಶಗಳು ಕಡಿಮೆ ಇದೆ.

       ಕಂಪ್ಯೂಟರ್ ಕ್ಷೇತ್ರದಲ್ಲಿ ನಿತ್ಯ ಹೊಸ ಹೊಸ ಆವಿಷ್ಕಾರಗಳು ನಡೆದಿವೆ. ಇಂದಿನ ತಂತ್ರಾಂಶ ನಾಳೆ ಹಳತು ಎನ್ನುವಷ್ಟು ಶೀಘ್ರವಾಗಿ ಬದಲಾವಣೆಗಳನ್ನು ಕಾಣುವ ಈ ಕ್ಷೇತ್ರದಲ್ಲಿ ಕನ್ನಡ ಭಾಷೆಯ ಸ್ಥಾನಮಾನಗಳು ಕ್ರಮೇಣ ಹೆಚ್ಚಾಗುತ್ತಿವೆ. ಅಂತಾರಾಷ್ಟ್ರೀಯ ತಂತ್ರಾಂಶ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ಅಂಗವಾಗಿ ಈಗ ಓ.ಎಸ್.  ಮತ್ತು ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳ ಬಳಕೆದಾರರಿಗೆ ಅವರದೇ ಆದ ಭಾಷೆಗಳ ಇಂಟರ್‌ಫೇಸ್ ಒದಗಿಸಲು ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್ಗಳು (ಎಲ್.ಐ.ಪಿ.ಗಳು) ಬಂದಿವೆ. ಎಲ್ಲ ತಂತ್ರಾಂಶಗಳಲ್ಲಿ ಬಳಸಬಹುದಾದ, ಯೂನಿಕೋಡ್ ಎನ್‌ಕೋಡಿಂಗ್ ಉಳ್ಳ, ದೇಸೀಯ ಭಾಷಾಲಿಪಿಗಳ ಓಪನ್ ಟೈಪ್ ಫಾಂಟುಗಳು ಬಂದಿವೆ. ಟೈಪಿಂಗ್ ಮಾಡಲು ಈ ಹಿಂದಿನಿಂದ ಬಳಕೆಯಲ್ಲಿರುವ ವೈವಿಧ್ಯಮಯ ಕೀಲಿಮಣೆ ವಿನ್ಯಾಸಗಳು (ಇನ್‌ಪುಟ್ ಮೆಥೆಡ್ ಎಡಿಟರ್ - ಐ.ಎಂ.ಇ- ಕೀಬೋರ್ಡ್ ಲೇಔಟ್‌ಗಳು) ಬಂದಿವೆ. ಆದರೂ, ಕಂಪ್ಯೂಟರುಗಳಲ್ಲಿ ಕನ್ನಡ ಭಾಷಾ ಬಳಕೆಯಲ್ಲಿ ಹೊಸಹೊಸ ಸಲಕರಣೆಗಳನ್ನು ಉಪಯೋಗಿಸುವಲ್ಲಿ ನಾವು ಹಿಂದುಳಿದಿದ್ದೇವೆ ಎನ್ನಬಹುದು.  ಇದಕ್ಕೆ ಅನೇಕ ಕಾರಣಗಳಿವೆ. ಬಹುಮುಖ್ಯವಾಗಿ ಹಳೆಯದನ್ನು ಬಿಟ್ಟು ಹೊಸತನ್ನು ಅಳವಡಿಸಿಕೊಳ್ಳುವ ಹಿಂಜರಿಕೆ ಮತ್ತು ಹೊಸ ಸಲಕರಣೆಗಳನ್ನು ಬಳಸುವಲ್ಲಿ ಪರಿಣಿತಿಯ ಕೊರತೆ ಮತ್ತು ಹೊಸ ತಂತ್ರಜ್ಞಾನದಲ್ಲಿನ ಚಿಕ್ಕಪುಟ್ಟ ಸಮಸ್ಯೆಗಳು ಇದಕ್ಕೆ ಕಾರಣವಾಗಿವೆ.

       ತಂತ್ರಜ್ಞಾನ ಮತ್ತು ಸಲಕರಣೆಗಳು ಲಭ್ಯವಿದ್ದರೂ ಅವುಗಳ ಸಮಗ್ರ ಬಳಕೆಯು ಇನ್ನೂ ಆಗುತ್ತಿಲ್ಲ ಎಂದೇ ಹೇಳಬಹುದು. ಕನ್ನಡ ಭಾಷಾ ಬಳಕೆದಾರರು ಇನ್ನೂ ಹಳೆಯ ತಂತ್ರಜ್ಞಾನವನ್ನೇ ಬಳಸುತ್ತಿರುವುದು ಕಂಡುಬರುತ್ತದೆ. ಯೂನಿಕೋಡ್ ಫಾಂಟ್‌ಗಳ ಬಳಕೆಯಲ್ಲಿ ಇನ್ನೂ ಚಿಕ್ಕಪುಟ್ಟ ಸಮಸ್ಯೆಗಳಿವೆ; ಆಸ್ಕಿ ಫಾಂಟುಗಳಿಗೆ ಹೋಲಿಸಿದರೆ ಯೂನಿಕೋಡ್ ಫಾಂಟುಗಳ ಲಿಪಿಸೌಂದರ್ಯ ಚೆನ್ನಾಗಿಲ್ಲ; ಅವು ಮುದ್ರಣಕ್ಕೆ ಸಮಂಜಸವಾಗಿಲ್ಲ; ಡಿ.ಟಿ.ಪಿ.ಪ್ಯಾಕೇಜುಗಳು ಇನ್ನೂ ಯೂನಿಕೋಡ್ ಫಾಂಟುಗಳನ್ನು ಗುರುತಿಸುತ್ತಿಲ್ಲ - ಎಂಬ ಹಲವು ಕಾರಣಗಳು ಕೇಳಿಬರುತ್ತಿವೆ. ಕನ್ನಡ ಕಂಪ್ಯೂಟರ್ ಬಳಕೆದಾರರು, ಇಂದು, ಹಳೆಯದನ್ನು ಬಿಡಲಾಗದೆ ಹೊಸದಕ್ಕೆ ಹೊರಳಿಕೊಳ್ಳಲಾಗದ ಸಂಕ್ರಮಣ ಕಾಲದಲ್ಲಿ ಇದ್ದಾರೆ ಎಂದರೆ ತಪ್ಪಿಲ್ಲ.  ಇರುವ ಭಾಗ್ಯವ ನೆನೆದು ಬಾರೆನೆಂಬುದ ಬಿಡು ಹರುಷಕ್ಕಿದೆ ದಾರಿಎಂಬ ಡಿ.ವಿ.ಜಿ.ಯವರ ನುಡಿಯನ್ನು ನಾವೆಲ್ಲರೂ ನೆನೆದು, ಇರುವ ಆಸ್ಕಿ-ಫಾಂಟ್‌ನ ಭಾಗ್ಯವನ್ನು ಬಿಟ್ಟು ಯೂನಿಕೋಡ್ ಫಾಂಟ್ ಬಳಕೆಯ ಹರುಷ ಪಡೆಯಲು ಉತ್ಸುಕರಾಗಬೇಕಿದೆ. ಹಳೆಯ ತಂತ್ರಾಂಶಗಳನ್ನು ಬಿಟ್ಟು ಯೂನಿಕೋಡ್ ಆಧಾರಿತ ತಂತ್ರಾಂಶವನ್ನು ಎಲ್ಲರೂ ಬಳಸೋಣ. ಹೊಸ ತಂತ್ರಾಂಶಗಳಲ್ಲಿ ತೊಡಕುಗಳಿದ್ದರೆ, ತಯಾರಕರನ್ನು ಜಗ್ಗಿಸಿ ಕೇಳಿ, ಜಗಳವಾಡಿಯಾದರೂ ಸರಿಯೇ, ತಂತ್ರಾಂಶ ಸುಧಾರಣೆಯನ್ನು ಮಾಡಿಕೊಂಡು ಕನ್ನಡ ಬಳಕೆಯನ್ನು ಆಧುನೀಕರಿಸಿಕೊಳ್ಳೋಣ, ಸಮಸ್ಯೆಗಳಿಂದ ಹೊರಬರೋಣ ಎನ್ನುವ ನಿರ್ಣಯವನ್ನು ಎಲ್ಲರೂ ಕೈಗೊಳ್ಳಬೇಕಿದೆ.
        
      
             
        
      
        




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...