ವಿಷಯಕ್ಕೆ ಹೋಗಿ

31. ಡಿಜಿಟಲ್ ಮತ್ತು ಸಿಲಿಕಾನ್ ವೇಫರ್ ತಂತ್ರಜ್ಞಾನ ಬಳಸಿ ಹಸ್ತಪ್ರತಿಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣೆ


ಕಳೆದ ಎರಡು ದಶಕಗಳಿಗೂ ಹಿಂದೆ, ಹಸ್ತಪ್ರತಿಗಳ ಸಂರಕ್ಷಣೆಯಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನಗಳ ಹೊರತಾಗಿ, ಮೈಕ್ರೋಫಿಲ್ಮ್ ತಂತ್ರಜ್ಞಾನವು ಅತ್ಯುತ್ತಮ ಕೊಡುಗೆಯನ್ನು ನೀಡಿತು. ಫೋಟೋಗ್ರಫಿ ತಂತ್ರಜ್ಞಾನದ ಸಹಾಯದಿಂದ ಹಸ್ತಪ್ರತಿಗಳನ್ನು ಮೈಕ್ರೋಫಿಲ್ಮ್‌ಗಳನ್ನಾಗಿ ಪರಿವರ್ತಿಸಿ ಸಂರಕ್ಷಿಸುವುದು ಆ ಕಾಲದ ಮಹತ್ವದ ತಂತ್ರಜ್ಞಾನವಾಗಿತ್ತು. ಅಗತ್ಯವಿದ್ದಾಗ, ಮೈಕ್ರೋಫಿಲ್ಮ್‌ನ್ನು ಬಳಸಿ, ಹಸ್ತಪ್ರತಿಯ ಮರುಮುದ್ರಣವನ್ನು ಪಡೆಯಬಹುದಾಗಿತ್ತು. ಮೈಕ್ರೋಫಿಲ್ಮ್ ರೀಡರ್‌ಗಳನ್ನು ಬಳಸಿ ಅವುಗಳನ್ನು ಓದಬಹುದಾಗಿತ್ತು.  ನೂರಾರು ಪುಟಗಳನ್ನು ಒಂದೇ ಪ್ಲಾಸ್ಟಿಕ್ ಹಾಳೆಯ ಮೇಲೆ ಮುದ್ರಿಸುವ, ‘ಮೈಕ್ರೋಫಿಷ್ಅಥವಾ ಮೈಕ್ರೊಫಿಲ್ಮ್ತಂತ್ರಜ್ಞಾನ ಇಂದು ತೆರೆಮರೆಗೆ ಸರಿದಿದೆ. ಗ್ರಂಥಾಲಯಗಳಲ್ಲಿ ನೋಡಲು ಲಭ್ಯವಿದ್ದ ಮೈಕ್ರೋಫಿಲ್ಮ್ ರೀಡರ್‌ಗಳು ವಸ್ತುಸಂಗ್ರಹಾಲಯವನ್ನು ಸೇರಿಕೊಂಡಿವೆ. ಹಸ್ತಪ್ರತಿಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಸಂಸ್ಕರಣೆಗಾಗಿ ಇಂದಿನ ಡಿಜಿಟಲ್ ತಂತ್ರಜ್ಞಾನವನ್ನು ಅತ್ಯುತ್ತಮವಾಗಿ ಈಗ ಬಳಸಿಕೊಳ್ಳಲಾಗುತ್ತಿದೆ.

       ಹಸ್ತಪ್ರತಿಯ ಮೂಲರೂಪವನ್ನೇ ನೇರವಾಗಿ ಕಂಪ್ಯೂಟರ್‌ನಲ್ಲಿ ದಾಖಲಿಸಲು, ಅದರ ಪ್ರತಿ ಪುಟವನ್ನು ಸ್ಕ್ಯಾನ್ ಮಾಡಿ ಚಿತ್ರರೂಪದಲ್ಲಿ ಉಳಿಸುವುದನ್ನು ಹಸ್ತಪ್ರತಿಗಳ ಡಿಜಿಟಲೀಕಣಎನ್ನಬಹುದು. ಮೂಲರೂಪದಲ್ಲಿಯೇ ಹಸ್ತಪ್ರತಿಯ ಬಿಂಬವನ್ನಾಗಿ ಸ್ಕ್ಯಾನ್ ಮಾಡಿ ಉಳಿಸಿ ಕಂಪ್ಯೂಟರ್ ಕಡತಗಳನ್ನಾಗಿಸಲು ಡಾಕ್ಯುಮೆಂಟ್ ಮ್ಯಾನೇಜ್‌ಮೆಂಟ್ ಸಾಫ್ಟ್‌ವೇರ್ನ್ನು ಬಳಸಲಾಗುತ್ತದೆ.  ಇಂತಹ ಹಸ್ತಪ್ರತಿಗಳ ಕಂಪ್ಯೂಟರ್ ದಾಖಲಾತಿಗಳನ್ನು ಉತ್ತಮೀಕರಿಸಲು ಸಾಧ್ಯವಿದೆ.  ಹಸ್ತಪ್ರತಿಯಲ್ಲಿನ ಮೂಲಪುಟದಲ್ಲಿರುವ ಅಕ್ಷರಗಳು ಮಸುಕಾಗಿದ್ದರೆ, ತ್ರುಟಿತಗೊಂಡಿದ್ದರೆ, ಅಂತಹ ಅಕ್ಷರಗಳನ್ನು ತಂತ್ರಜ್ಞಾನ ಬಳಸಿ ಮರುಸೃಷ್ಟಿಸಲು ಸಾಧ್ಯವಿದೆ. ಬೇರೆಡೆಯಲ್ಲಿರುವ ಅಕ್ಷರಗಳನ್ನು ನಕಲಿಸಿ ತಂದು ಅಗತ್ಯವಿದ್ದೆಡೆಯಲ್ಲಿ ಅಂಟಿಸುವ ಮೂಲಕ ಇಂತಹ ತೊಡಕುಗಳನ್ನು ಸರಿಪಡಿಸಿಕೊಂಡು, ಹಸ್ತಪ್ರತಿಯನ್ನು ಸಂವೃದ್ಧಿಸಬಹುದು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗವು ಕನ್ನಡದ ಹಸ್ತಪ್ರತಿಗಳ ಇಂತಹ ಡಿಜಿಟಲೀಕರಣ ಕಾರ್ಯವನ್ನು ಯಶಸ್ವಿಯಾಗಿ ಕೈಗೊಂಡಿದೆ.

ಇಂದಿನ ಸಾಹಿತಿ, ಲೇಖಕರ ಕೈಬರಹದ ಹಸ್ತಪ್ರತಿಗಳನ್ನು ಡಿ.ಟಿ.ಪಿ. (ಡೆಸ್ಕ್‌ಟಾಪ್ ಪಬ್ಲಿಷಿಂಗ್) ಮಾಡುವ ಮೂಲಕ ಪುಸ್ತಕಗಳನ್ನು ಅತ್ಯುತ್ತಮವಾಗಿ, ಆಕರ್ಷಕವಾಗಿ ಮತ್ತು ಸುಲಭವಾಗಿ ಮುದ್ರಿಸಿ ಪ್ರಕಟಿಸುವುದು ಸಾಧ್ಯವಾಗಿದೆ. ಇಲ್ಲಿ ಪಠ್ಯವನ್ನು ಟೈಪಿಂಗ್  ಮಾಡುವ ಮೂಲಕ ಕಂಪ್ಯೂಟರ್ ಮೂಲಕ ಪುಟವಿನ್ಯಾಸಗೊಳಿಸಿ ಮುದ್ರಣಕ್ಕೆ ಸಿದ್ಧಪಡಿಸಲಾಗುತ್ತದೆ.  ಲೇಖಕರ ಮೂಲ ಕೈಬರಹದ ರೂಪದಲ್ಲಿಯೇ ಪುಸ್ತಕ ಮುದ್ರಣವಾಗಬೇಕು ಎಂದಾದರೆ, ಅದಕ್ಕೆ ಇಮೇಜ್ ಸ್ಕ್ಯಾನಿಂಗ್ತಂತ್ರಜ್ಞಾನವನ್ನೇ ಬಳಸಬೇಕು.  ಕುವೆಂಪು ವಿರಚಿತ ಶ್ರೀ ರಾಮಾಯಣ ದರ್ಶನಂಕವಿಯ ಸ್ವಹಸ್ತಾಕ್ಷರದಲ್ಲಿಯೇ ಮುದ್ರಿಸಿ, ಪ್ರಕಟಿಸಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪ್ರಯತ್ನವು ಇದಕ್ಕೆ ಉತ್ತಮ ಉದಾಹರಣೆಯಾಗಿ ನಮ್ಮ ಮುಂದೆ ಇದೆ.  ಶ್ರೀ ರಾಮಾಯಣ ದರ್ಶನಂಹಸ್ತಪ್ರತಿಯಲ್ಲಿ ತ್ರುಟಿತಗೊಂಡಿದ್ದ ಅಕ್ಷರಗಳನ್ನು ಸರಿಪಡಿಸಲು, ಬೇರೆ ಪುಟದಲ್ಲಿನ ಅದೇ ಅಕ್ಷರಗಳನ್ನು ನಕಲಿಸಿ ತಂದು, ತ್ರುಟಿತಗೊಂಡಿದ್ದ ಅಕ್ಷರಗಳ ಸ್ಥಾನದಲ್ಲಿ ಉಪಾಯವಾಗಿ ಕೂರಿಸಲಾಯಿತು. ಇಷ್ಟೆಲ್ಲಾ ಸಾಹಸವನ್ನು ಮಾಡಿ, ಕವಿಯ ಹಸ್ತಾಕ್ಷರದಲ್ಲಿಯೇ ಮಹಾಕಾವ್ಯವನ್ನು ಓದುವ ಸಂತಸವನ್ನು ಓದುಗರಿಗೆ ನೀಡಲು ಸಾಧ್ಯವಾದದ್ದು, ಈ ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿದ್ದರಿಂದಲೇ.  ಇದರಿಂದಾಗಿ, ರಾಷ್ಟ್ರಕವಿಯ ಮಹಾಕಾವ್ಯವು ಆಧುನಿಕ ತಂತ್ರಜ್ಞಾನದ ತೆಕ್ಕೆಗೆ ಬಂದು ಸಂರಕ್ಷಣೆಗೊಂಡಿದೆ.  ಅಲ್ಲದೆ, ಮುಂದಿನ ಬಳಕೆಗೂ ಸಹ ಅದು ಸುಲಭದಲ್ಲಿ ಲಭ್ಯವಾಗಿದೆ. 

ಹಸ್ತಪ್ರತಿಗಳ ಡಿಜಿಟಲೀಕರಣದ ಉದ್ದೇಶಗಳು ಬೇರೆಬೇರೆ ಇರಬಹುದು.  ಸಂಗ್ರಹಣೆ ಮತ್ತು ಸಂಸ್ಕರಣೆ ಹಾಗೂ ಸುರಕ್ಷತೆಯು ಪ್ರಥಮ ಆದ್ಯತೆಯಾಗಿರುತ್ತದೆ. ಪರಾಮರ್ಶನೆಗಾಗಿ, ಪ್ರತಿಬಾರಿ ಮೂಲ ಹಸ್ತಪ್ರತಿಯನ್ನು ತೆಗೆದು ಬಳಸುವ ಬದಲಾಗಿ, ಸಂಗ್ರಹಿತ ಹಸ್ತಪ್ರತಿಗಳ ಡಿಜಿಟಲ್ ರೂಪವನ್ನು ಪರಾಮರ್ಶನೆಗಾಗಿ ಬಳಸಬಹುದು. ಅದಕ್ಕಾಗಿ, ಹಸ್ತಪ್ರತಿಗಳ ಕುರಿತಾದ ಒಂದು ಮಾಹಿತಿ ದತ್ತಸಂಚಯವನ್ನು (ಡೇಟಾಬೇಸ್) ಸಿದ್ಧಪಡಿಸಬಹುದು.  ಅಂತಹ ದತ್ತಸಂಚಯದಲ್ಲಿ ಪ್ರತಿಯೊಂದೂ ಹಸ್ತಪ್ರತಿಯ ವಿವರಗಳನ್ನು, ಅಂದರೆ, ಅದರ ವರ್ಗೀಕರಣ, ಸ್ವರೂಪ, ದೊರೆತ ದಿನಾಂಕ, ರಚನೆಯಾದ ದಿನಾಂಕ, ಸಂಶೋಧಿಸಿದವರ ಹೆಸರು, ಬರೆಪಗಾರರ ಹೆಸರು, ಶೀರ್ಷಿಕೆ ಇತ್ಯಾದಿ ವಿವರಗಳನ್ನು ನಮೂದಿಸಬಹುದು. ಆ ದತ್ತಸಂಚಯದೊಂದಿಗೆ, ಹಸ್ತಪ್ರತಿಗಳ ಸ್ಕ್ಯಾನ್‌ಮಾಡಲಾದ ಎಲ್ಲಾ ಡಿಜಿಟಲ್ ಪುಟಗಳನ್ನೂ ಸಹ ಅಳವಡಿಸಬಹುದು. ಇದೇ ದತ್ತಸಂಚಯವನ್ನು ಬಳಸಿ ಪರಾಮರ್ಶನೆ ಮಾಡಲು ಒಂದು ಆನ್ವಯಿಕ ತಂತ್ರಾಂಶವನ್ನೂ ಸಹ ಸಿದ್ಧಪಡಿಸಿ ಬಳಸಿಕೊಳ್ಳಬಹುದು. ಇಂತಹ ಆನ್ವಯಿಕ ತಂತ್ರಾಂಶವು ಸಂಶೋಧಕರಿಗಂತೂ ಅತ್ಯುಪಯುಕ್ತವಾಗಿರುತ್ತದೆ. 

       ಯಾವುದೇ ಡಿಜಿಟಲ್ ಸಂಗ್ರಹಣೆಯನ್ನು ಕಾಲಕಾಲಕ್ಕೆ ಬರುವ ಹೊಸ ತಂತ್ರಜ್ಞಾನಗಳನ್ನು ಬಳಸಿ ಉನ್ನತೀಕರಿಸಿಕೊಳ್ಳಲೇಬೇಕು. ಕಾರಣ, ಡಿಜಿಟಲೀಕರಿಸಿದ ಸಮಯದಲ್ಲಿದ್ದ ತಂತ್ರಜ್ಞಾನವು ಕಾಲಾನಂತರದಲ್ಲಿ, ಹಳತಾಗಿಹೋಗುತ್ತದೆ. ಹಳೆಯ ತಂತ್ರಜ್ಞಾನದೊಂದಿಗೆ, ನಮ್ಮ ಸಂಗ್ರಹವೂ ಸಹ ಹಳತಾಗಿಹೋಗಿ ಸಂಗ್ರಹಣೆಯೇ ನಿರುಪಯುಕ್ತವಾಗುವ ಸಾಧ್ಯತೆ ಇದೆ.  ಹಸ್ತಪ್ರತಿಗಳ ಡಿಜಿಟಲ್ ಸಂಗ್ರಹಣಾ ವಿಷಯದಲ್ಲಿ ಕಾಲಕಾಲಕ್ಕೆ ಸಂಗ್ರಹಣೆಯನ್ನು ಪರಿಷ್ಕರಿಸಿಟ್ಟುಕೊಳ್ಳುವುದು ಸವಾಲಿನ ಕೆಲಸವಾಗಿದೆ.  ಇದೇ ಹೊಸ ತಂತ್ರಜ್ಞಾನಗಳ ಮಿತಿಯೂ ಸಹ ಆಗಿದೆ.  ಹೊಸ ಹೊಸ ಡಿ.ಟಿ.ಪಿ. ತಂತ್ರಾಂಶಗಳೂ ನಿರಂತರವಾಗಿ ಬಳಕೆಗೆ ಬರುತ್ತಲೇ ಇವೆ. ಹಳೆಯ ಡೇಟಾವನ್ನು ಹೊಸ ತಂತ್ರಾಂಶಗಳಿಗೆ ವರ್ಗಾಂತರಿಸಿ (ಮೈಗ್ರೇಟ್ ಮಾಡಿ) ಇಟ್ಟುಕೊಳ್ಳಬೇಕು. ಮುಂದಿನ ಬಳಕೆಗಾಗಿ ಮಾಹಿತಿಗಳನ್ನು (ಬ್ಯಾಕಪ್) ಸಂಗ್ರಹಿಸಿಟ್ಟುಕೊಳ್ಳುವ ಫ್ಲಾಪಿಗಳು ಇಂದು ಕಣ್ಮರೆಯಾಗಿವೆ, ಸೀಡಿಗಳು ಹಳತಾಗಿ ಡೀವೀಡಿಗಳು ಬಂದವು. ಡೀವೀಡಿಗಳ ಸ್ಥಾನವನ್ನು ಇಂದು ಪೆನ್‌ಡ್ರೈವ್‌ಗಳು ಮತ್ತು ಎಕ್ಸ್‌ಟರ್‌ನಲ್ ಹಾರ್ಡ್‌ಡಿಸ್ಕ್‌ಗಳು ಆಕ್ರಮಿಸಿಕೊಂಡಿವೆ.

       ಸಿಲಿಕಾನ್ ವೇಫರ್ ತಂತ್ರಜ್ಞಾನಎಂಬ ಹೊಸ ತಂತ್ರಜ್ಞಾನವನ್ನು ಈಗ ಹಸ್ತಪ್ರತಿಗಳ ಸಂರಕ್ಷಣೆಗೂ ಸಹ ಬಳಸಿಕೊಳ್ಳಬಹುದು. ಸೀಡಿ, ಡೀವೀಡಿ, ಪೆನ್‌ಡ್ರೈವ್ ಇತ್ಯಾದಿ ಡಿಜಿಟಲ್ ಮೀಡಿಯಾಗಳ ಸ್ಥಾನವನ್ನು ಸಿಲಿಕಾನ್ ವೇಫರ್‌ಗಳು’ (ಸಿಲಿಕಾನ್ ಹಾಳೆಗಳು) ಆಕ್ರಮಿಸಿಕೊಳ್ಳುವ ಕಾಲ ಬರಬಹುದು.  ಹಸ್ತಪ್ರತಿಯ ಪ್ರತಿಯೊಂದೂ ಪುಟದ ಇನ್ಫ್ರಾರೆಡ್ ಬಿಂಬಗಳನ್ನು (ಇಮೇಜ್) ವಿವಿಧ ತರಂಗಾಂತರಗಳಲ್ಲಿ ತೆಗೆಯುವುದು (ಈ ಇನ್ಫ್ರಾರೆಡ್ ಬಿಂಬಗಳಲ್ಲಿ ಕಣ್ಣಿಗೆ ಕಾಣದಿರುವ ಗೆರೆಗಳೂ ಸಹ ಗೋಚರವಾಗುತ್ತವೆ) ನಂತರ, ಈ ಬಿಂಬಗಳನ್ನು ಒಂದರ ಮೇಲೊಂದರಂತೆ ಹೆಣೆದು ಒಂದೇ ಬಿಂಬವಾಗಿ ಪರಿವರ್ತಿಸುವುದು.  ಆ ನಂತರ, ಬಿಂಬವರ್ಧಕ ವಿಧಾನಗಳಿಂದ ಅವುಗಳಲ್ಲಿನ ಮಾಲಿನ್ಯವನ್ನು ತೆಗೆಯುವುದು. ತದನಂತರ, ಅದನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಿ ಕಪ್ಪು-ಬಿಳುಪಿನ ಬಿಂಬವಾಗಿಸುವುದು.  ಈ ಬಿಂಬವನ್ನು ಸಿಲಿಕಾನ್ ವೇಫರ್ ಮೇಲೆ ಎರಕ ಹೊಯ್ಯುವುದೇ ಸಿಲಿಕಾನ್ ವೇಫರ್ ತಂತ್ರಜ್ಞಾನ. 

       ಸಿಲಿಕಾನ್ ವೇಫರ್ ತಂತ್ರಜ್ಞಾನ ಬಳಸಿ, ಆರು ಇಂಚುಗಳ ವ್ಯಾಸವುಳ್ಳ ಸಿಲಿಕಾನ್ ತಟ್ಟೆಯ ಮೇಲೆ ಎರಡು ಸಾವಿರ ಬಿಂಬಗಳನ್ನು ಮುದ್ರಿಸಬಹುದು. ಒಂದು ಪುಟಕ್ಕೆ ಒಂದು ಬಿಂಬ ಎಂದಿಟ್ಟುಕೊಂಡರೂ, ಇಡೀ ಹಸ್ತಪ್ರತಿಯ ಎಲ್ಲಾ ಪುಟಗಳು ಅಥವಾ ಇಡೀ ಗ್ರಂಥವು ಒಂದೇ ತಟ್ಟೆಯ ಮೇಲೆ ಮುದ್ರಿತವಾಗುತ್ತದೆ. ಈ ರೀತಿ ಸಂಸ್ಕಾರಗೊಂಡ ತಟ್ಟೆಗಳು ಅಕ್ಷರಶಃ ಅವಿನಾಶಿ. ಗಾಳಿ, ಬೆಳಕು, ತೇವ, ಉಷ್ಣತೆಗಳಿಂದ ಇವು ನಾಶವಾಗಲಾರವು. ಬೆಂಕಿಯಲ್ಲಿ ಬಿದ್ದರೂ, ಮೇಲಿನ ಪ್ಲಾಸ್ಟಿಕ್ ಹೊದಿಕೆ ಕರಗಿಹೋಗಬಹುದೇ ಹೊರತು, ಸಿಲಿಕಾನ್ ವೇಫರ್ ಹಾಳಾಗುವುದಿಲ್ಲಎನ್ನುತ್ತಾರೆ ಅಮೇರಿಕದ ರಾಚೆಸ್ಟರ್ ನ್ಯಾನೋಆರ್ಕ್ ಕಂಪನಿಯ ಮುಖ್ಯಸ್ಥರಾದ ಬೆಂಗಳೂರು ಮೂಲದ ಪ್ರೊ.ಪಿ.ಆರ್.ಮುಕುಂದ್.  ಅಂತಹ ಮುದ್ರಿತ ತಟ್ಟೆಗಳಿಂದ ಮಾಹಿತಿಯನ್ನು ಓದಿ, ಕಂಪ್ಯೂಟರ್ ಮಾನಿಟರ್‌ನ ಮೇಲೆ ಪ್ರದರ್ಶಿಸಲು ಇವರು ಒಂದು ತಂತ್ರಾಂಶವನ್ನೂ ಸಹ ರೂಪಿಸಿದ್ದಾರೆ.
ಪ್ರೊ.ಮುಕುಂದ್ ಅವರು ತಮ್ಮ ಹೊಸ ತಂತ್ರಜ್ಞಾನಕ್ಕೆ, ಮೈಕ್ರೋಫಿಷ್ (ಮೈಕ್ರೋಫಲ್ಮ್) ಹೆಸರನ್ನೇ ಹೋಲುವ "ವೇಫರ್ ಫಿಷ್" ಎಂಬ ಹೆಸರನ್ನು ಇಟ್ಟಿದ್ದಾರೆ.  ಇದು ಅತ್ಯಾಧುನಿಕ ತಂತ್ರಜ್ಞಾನ. ಒಂದು ಮೈಕ್ರೊಫಿಷ್‌ನಲ್ಲಿ ಸುಮಾರು ೬೪ ಪುಟಗಳನ್ನು ಅಳವಡಿಸಬಹುದು. ಆದರೆ, ವೇಫರ್‌ಫಿಷ್‌ನಲ್ಲಿ ಸಾವಿರಾರು ಇಮೇಜ್‌ಗಳನ್ನು ಮುದ್ರಿಸಬಹುದು. ಮೈಕ್ರೋಫಿಷ್ ತೇವಾಂಶದಿಂದ ಹಾಳಾಗಬಹುದು, ಬೆಂಕಿಯಲ್ಲಿ ಸುಟ್ಟು ಹೋಗಬಹುದು. ಆದರೆ, ವೇಫರ್‌ಫಿಷ್ ಅವಿನಾಶಿ. ಸಾಮಾನ್ಯ ಬಳಕೆಯಲ್ಲಿ ಇದು ಐನೂರು ವರ್ಷ ಕಾಲ ಬಾಳಬಲ್ಲದು ಎಂದು ಹೇಳಲಾಗಿದೆ!

ಸರ್ವಮೂಲಗ್ರಂಥವು ಆಚಾರ್ಯ ಮಧ್ವ ವಿರಚಿತ ಧಾರ್ಮಿಕ ಗ್ರಂಥ.  ಜೀರ್ಣಗೊಂಡಿರುವ ಅತ್ಯಮೂಲ್ಯವಾದ ಈ ತಾಳೆಗರಿ ಗ್ರಂಥವನ್ನು ಈ ತಂತ್ರಜ್ಞಾನ ಬಳಸಿ ಈಗಾಗಲೇ ಸಿಲಿಕಾನ್ ವೇಫರ್‌ನ್ನಾಗಿಸಲಾಗಿದೆ. ನ್ಯಾನೋಆರ್ಕ್ ಸಂಸ್ಥೆಯು ಹೆರಿಟೇಜ್ ಸೀರೀಸ್ಎಂಬ ಪ್ರಕಟಣಾ ಮಾಲೆಯೊಂದನ್ನು ಆರಂಭಿಸಿದೆ. ಈ ಮಾಲೆಯ ಮೊದಲ ಪುಷ್ಪವೇ ಈ ಸರ್ವಮೂಲ ಗ್ರಂಥ.  ಕ್ರಿ.ಶ.೧೪೯೨ರಲ್ಲಿ ಮರದ ತೊಗಟೆಯ ಮೇಲೆ ನೇವಾರಿ ಲಿಪಿಯಲ್ಲಿ ಬರೆಯಲಾದ ಭಗವದ್ಗೀತೆಯ ಪ್ರತಿಯೊಂದು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿದೆ.  ಆ ವಿಶ್ವವಿದ್ಯಾಲಯದ ಸಹಯೋಗದಿಂದ ಆ ಭಗವದ್ಗೀತೆಯು ಹೆರಿಟೇಜ್ ಮಾಲೆಯ ಎರಡನೆಯ ಕುಸುಮವಾಗಿ ಹೊರಹೊಮ್ಮಿದೆ. ಸಿಲಿಕಾನ್ ವೇಫರ್ ತಂತ್ರಜ್ಞಾನವು ನಮ್ಮ ದೇಶದಲ್ಲಿಯೂ ಬಳಕೆಗೆ ಬಂದಾಗ ನಮ್ಮಲ್ಲಿಯ ಹಸ್ತಪ್ರತಿಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಸಂರಕ್ಷಣೆಗಳು ಹೊಸ ತಿರುವು ಪಡೆಯಬಹುದು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...