ವಿಷಯಕ್ಕೆ ಹೋಗಿ

30. ಕಂಪ್ಯೂಟರ್ ವಿಜ್ಞಾನದ ಹೊಸ ಶಾಖೆ - ಗಣನಾ ಭಾಷಾಶಾಸ್ತ್ರ


             ನಾವು ಮಾತನಾಡುವ ಮತ್ತು ಬರೆಯುವ ಭಾಷೆಯ ಧ್ವನಿ ಮತ್ತು ಬರಹರೂಪಗಳನ್ನು ಸೃಷ್ಟಿಸುವುದು, ಗುರುತಿಸುವುದು, ದಾಖಲಿಸುವುದು ಮತ್ತು ವಿಶ್ಲೇಷಿಸುವುದು ಇತ್ಯಾದಿಗಳನ್ನು ಮಾಡುವ ಕಂಪ್ಯೂಟರ್ ವ್ಯವಸ್ಥೆಗಳ ಸಂಶೋಧನೆಯನ್ನು ಭಾಷಾ ತಂತ್ರಜ್ಞಾನಎನ್ನಲಾಗಿದೆ.  ಧ್ವನಿಸಂಸ್ಕರಣೆ (ಧ್ವನಿ ಗುರುತಿಸುವುದು ಮತ್ತು ಅರ್ಥೈಸುವುದು ಹಾಗು ವಿಶ್ಲೇಷಿಸುವುದು), ಮಾಹಿತಿಯನ್ನು ಹೆಕ್ಕಿ ತೆಗೆಯುವುದು, ಕೈಬರಹ ಗುರುತಿಸುವುದು, ಯಂತ್ರ ಭಾಷಾಂತರ, ಪಠ್ಯ ಸಾರಾಂಶಗೊಳಿಸುವುದು ಮತ್ತು ಭಾಷಾ ಲಿಪಿಗಳನ್ನು ಮತ್ತು ಉಚ್ಚಾರಣೆಗಳನ್ನು ಸೃಷ್ಟಿಸುವುದು.  - ಇವುಗಳು ಭಾಷಾ ತಂತ್ರಜ್ಞಾನದ ಪ್ರಮುಖವಾದ ಸಂಶೋಧನೆಗಳು. ಕಂಪ್ಯೂಟರ್ ವಿಜ್ಞಾನ ಮತ್ತು ಭಾಷಾಶಾಸ್ತ್ರ ಇವೆರಡರ ಸಮ್ಮಿಲನದಿಂದಾಗಿ ಇಂದು ಗಣನಾ ಭಾಷಾಶಾಸ್ತ್ರ’ (ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ಸ್) ಎಂಬ ಹೊಸ ಜ್ಞಾನಶಿಸ್ತು ಆರಂಭಗೊಂಡಿದೆ.  ಕಂಪ್ಯೂಟರ್‌ಗಳ ಮೂಲಕ ಕೈಗೊಳ್ಳುವ, ಮಾನವ ಸಹಜ ಭಾಷೆಗಳ ಸರ್ವಸಾಮರ್ಥ್ಯದ ವಿವಿಧ ಆಯಾಮಗಳ ಗಣನಾಕಾರ್ಯವನ್ನು (ಕಂಪ್ಯೂಟಿಂಗ್) ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ಸ್ಎಂದು ಕರೆಯಾಗಿದೆ. ಮಾನವನ ಗ್ರಹಣಶಕ್ತಿ, ನೆನಪಿನಶಕ್ತಿ ಮತ್ತು ವಿವೇಚನಾಶಕ್ತಿಗಳ ರೀತಿಯಲ್ಲಿಯೇ, ಗಣನಕ್ರಿಯೆಗಳ ಮೂಲಕ, ಯಾಂತ್ರಿಕ ಮಾದರಿಗಳನ್ನು ತಯಾರಿಸುವ ಉದ್ದೇಶದ ಆರಂಭಗೊಂಡ ಕಂಪ್ಯೂಟೇಶನಲ್ ಲಿಂಗ್ವಿಸ್ಟಿಕ್ಸ್ಕಂಪ್ಯೂಟರ್ ವಿಜ್ಞಾನದ ಒಂದು ಹೊಸ ಶಾಖೆಯಾಗಿ ಅಭಿವೃದ್ಧಿಗೊಳ್ಳುತ್ತಿದೆ. ಗಣನಾಭಾಷಾಶಾಸ್ತ್ರದ ಉತ್ಪನ್ನಗಳಾದ ಆನ್ವಯಿಕ ತಂತ್ರಾಂಶಗಳು (ಅಪ್ಲಿಕೇಷನ್ ಸಾಫ್ಟ್‌ವೇರ್), ಕಿರುತಂತ್ರಾಂಶಗಳು (ಆಪ್‌ಗಳು) ಇಂಗ್ಲಿಷ್‌ಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ. ಇಂದು, ಕನ್ನಡವೂ ಸೇರಿದಂತೆ ಇಂಗ್ಲಿಷೇತರ ಭಾಷೆಗಳಲ್ಲಿ ಅವುಗಳು ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರುಗಳಲ್ಲಿ ಬಳಕೆಗೆ ಬಂದು ಜನಪ್ರಿಯಗೊಂಡಿವೆ.

       ಮಾತನಾಡುವ ಭಾಷೆಗಳನ್ನು ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನುಗಳು ಗುರುತಿಸಲು ಭಾಷಾ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಹಲವು ಹಂತಗಳಿವೆ.  ಭಾಷೆಯನ್ನು ಬಳಸುವ ಮತ್ತು ಅದನ್ನು ಅರ್ಥಮಾಡಿಕೊಳ್ಳುವಲ್ಲಿನ ಉಪಾಯಗಳನ್ನು ಆಲೋಚಿಸುವುದು ಮೊದಲ ಹೆಜ್ಜೆಯಾದರೆ, ಅಂತಹ ಆಲೋಚನೆಗಳನ್ನು ಪ್ರೋಗ್ರಾಮ್‌ಗಳ ಮೂಲಕ ಯಾಂತ್ರೀಕೃತ ಮಾದರಿಗಳನ್ನಾಗಿ ಪರಿವರ್ತಿಸುವುದು ಎರಡನೆಯ ಹೆಜ್ಜೆಯಾಗಿದೆ. ಇಂತಹ ಯಾಂತ್ರೀಕೃತ ಮಾದರಿಗಳೇ ಹಲವು ಪ್ರಯೋಗಗಳ ಮೂಲಕ ಗಟ್ಟಿಗೊಂಡು ತಂತ್ರಜ್ಞಾನಗಳಾಗಿ ಬಳಕೆಗೆ ಬಂದಿವೆ. ಭಾಷಾಲಿಪಿಗಳು ಕಂಪ್ಯೂಟರಿನಲ್ಲಿ ಅನುಸ್ಥಾಪನೆಗೊಂಡ ನಂತರದಲ್ಲಿ, ಭಾಷೆಯ ಪಠ್ಯವನ್ನು ವಾಕ್ಯಗಳ ರೂಪದಲ್ಲಿ ಊಡಿಸುವುದು; ಊಡಿಸಿದ ವಾಕ್ಯಗಳಲ್ಲಿನ ಪದಗಳ ಕಾಗುಣಿತವನ್ನು ಯಂತ್ರಾಧಾರಿತವಾಗಿ ಪರೀಕ್ಷಿಸುವುದು; ವಾಕ್ಯಗಳ ರಚನೆಯಲ್ಲಿ ಅಗತ್ಯವಿರುವ ಪದಗಳನ್ನು ಯಂತ್ರದಲ್ಲಿಯೇ ಅಳವಡಿಸಲಾಗಿರುವ ಅರ್ಥಕೋಶಗಳಿಂದ ಹೆಕ್ಕಿತೆಗೆದುಕೊಳ್ಳುವುದು; ಬಳಸಿದ ಪದಗಳ ಬದಲಾಗಿ ಅಗತ್ಯವಿದ್ದರೆ, ಸಮಾನಾರ್ಥಕ ಅರ್ಥಕೋಶ ಬಳಸಿ ಹೊಸ ಸಮಾನಾರ್ಥಕ ಪದಗಳನ್ನು  ತಕ್ಷಣದಲ್ಲಿ ಆಯ್ಕೆಮಾಡಿಕೊಳ್ಳುವುದು; ಪದಗಳನ್ನು ಅಕ್ಷರಾನುಕ್ರಮಣಿಕೆಯಲ್ಲಿ ವಿಂಗಡಿಸುವುದು ಮತ್ತು ಸೂಚೀಕರಿಸುವುದು - ಇವೆಲ್ಲವುಗಳನ್ನು ಪದಸಂಸ್ಕರಣೆ’ (ವರ್ಡ್‌ಪ್ರೋಸೆಸಿಂಗ್) ಎಂದು ಕರೆಯಲಾಗುವ ಭಾಷಾ ಲಿಪಿಸಂಸ್ಕರಣೆಯ ಕಾರ್ಯವಾಗಿದೆ.

       ಭಾಷಾ ಸಂಸ್ಕರಣೆಯನ್ನು ನಿರ್ವಹಿಸಲು ಕಂಪ್ಯೂಟರ್‌ಗಳಲ್ಲಿ ಕೇವಲ ಭಾಷೆಯ ಲಿಪಿವ್ಯವಸ್ಥೆಗಳಷ್ಟೇ ಸಾಕಾಗುವುದಿಲ್ಲ. ಇದಕ್ಕೆ ಡಿಜಿಟಲ್ ರೂಪದ ಅರ್ಥಕೋಶಗಳು (ಡಿಕ್ಷ್‌ನರಿ) ಮತ್ತು ಅಂತಹ ಅರ್ಥಕೋಶಗಳ ಪರಾಮರ್ಶನ ವ್ಯವಸ್ಥೆಗಳನ್ನು ತಂತ್ರಾಂಶದಲ್ಲಿ ನಿರ್ಮಿಸಲು ಪ್ರತ್ಯೇಕ ತಂತ್ರಜ್ಞಾನಗಳ ಅಗತ್ಯವಿದೆ. ಈ ಎಲ್ಲ ರೀತಿಯ ವ್ಯವಸ್ಥೆಗಳನ್ನು ಬಳಕೆದಾರನಿಗೆ ನಿರ್ಮಿಸಿಕೊಡಲು ತಂತ್ರಾಂಶ ತಯಾರಕರಿಗೆ ಭಾಷಾ ತಂತ್ರಜ್ಞಾನವು ವರದಾನವಾಗಿದೆ. ಪಠ್ಯದಲ್ಲಿನ ಪದಗಳ ಕಾಗುಣಿತ ಪರೀಕ್ಷೆ, ವಾಕ್ಯಗಳ ವ್ಯಾಕರಣ ಪರೀಕ್ಷೆ ಹಾಗೂ ಒಂದು ಭಾಷೆಯ ಲಿಪಿಯಿಂದ ಮತ್ತೊಂದು ಭಾಷೆಯ ಲಿಪಿಗೆ ಲಿಪ್ಯಂತರಿಸುವುದು; ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಭಾಷಾಂತರಿಸುವುದು; ಲಿಪಿರೂಪದ ಪಠ್ಯವನ್ನು ಉಚ್ಚಾರಣೆಯ ಧ್ವನಿರೂಪಕ್ಕೆ ಪರಿವರ್ತಿಸುವುದು;  ಮಾತಿನ ಧ್ವನಿರೂಪವನ್ನು ಲಿಪಿರೂಪದ ಪಠ್ಯಕ್ಕೆ ಪರಿವರ್ತಿಸುವುದು - ಇವೆಲ್ಲವನ್ನು ಲಾಂಗ್ವೇಜ್ ಕಂಪ್ಯೂಟಿಂಗ್ಅಂದರೆ, ‘ಭಾಷಾ ಸಂಗಣನೆಎನ್ನಲಾಗಿದೆ. ಭಾಷೆಗಳ ಲಿಪಿಗಳನ್ನು ಕಂಪ್ಯೂಟರ್‌ಗಳಲ್ಲಿ ಅಳವಡಿಸುವ ತಂತ್ರಜ್ಞಾನಕ್ಕೆ ಲಿಪಿತಂತ್ರಜ್ಞಾನ ಎನ್ನಲಾಗಿದೆ. ಹಾಗೆಯೇ, ಭಾಷಾ ಪಠ್ಯದ ವಾಕ್ಯ ವಿಶ್ಲೇಷಣೆ, ಪದಗಳ ಕನ್‌ಕಾರ್ಡೆನ್ಸ್, ಉನ್ನತ ರೀತಿಯಲ್ಲಿ ವ್ಯಾಕರಣ ಪರೀಕ್ಷೆ ಮತ್ತು ಭಾಷಾಂತರ ಇತ್ಯಾದಿಗಳನ್ನು ನಿರ್ವಹಿಸುವುದಕ್ಕೆ  ನ್ಯಾಚುರಲ್ ಲಾಂಗ್ವೇಜ್ ಪ್ರೋಸೆಸಿಂಗ್’ (ಎನ್.ಎಲ್.ಪಿ.) ಅಂದರೆ, ‘ಸಹಜ ಭಾಷಾ ಸಂಸ್ಕರಣೆಎನ್ನಲಾಗಿದೆ.  ಲಿಪಿತಂತ್ರಜ್ಞಾನ ಮತ್ತು ಸಹಜ ಭಾಷಾ ಸಂಸ್ಕರಣೆಗೆ ಬಳಕೆಯಾಗುವ ಎಲ್ಲಾ ಕಂಪ್ಯೂಟರ್ ತಂತ್ರಜ್ಞಾನಗಳನ್ನು ಒಟ್ಟಾಗಿ ಭಾಷಾ ತಂತ್ರಜ್ಞಾನಎಂದು ಕರೆಯಲಾಗಿದೆ.

ಲಿಪಿತಂತ್ರಜ್ಞಾನವು ಭಾಷಾ ತಂತ್ರಜ್ಞಾನದ ಅಡಿಯಲ್ಲಿ ಒಂದು ಪ್ರಮುಖ ಶಾಖೆಯಾಗಿದೆ. ಲಿಪಿಯು ಭಾಷೆಯ ಚಾಕ್ಷುಕ ರೂಪ ಮತ್ತು ಒಂದು ಪ್ರಮುಖ ಅಂಗ. ಲಿಪಿರೂಪದ ಮಾಹಿತಿಯನ್ನು ಪಠ್ಯಎಂದು ಕರೆಯಲಾಗಿದೆ. ಪಠ್ಯವು ಭಾಷಾ ತಂತ್ರಜ್ಞಾನದ ಮೂಲಾಧಾರ. ಡಿಜಿಟಲ್ ತಂತ್ರಜ್ಞಾನದಲ್ಲಿ ಮಾಹಿತಿಗಳನ್ನು ವಿದ್ಯುನ್ಮಾನ ಪಠ್ಯಎಂದು ಕರೆಯಲಾಗುತ್ತದೆ. ಅಕ್ಷರಗಳಿಂದಾದ ಪದಗಳು, ಪದಗಳಿಂದಾದ ವಾಕ್ಯಗಳು ಮತ್ತು ವಾಕ್ಯಗಳಿಂದಾದ ಭಾಷಾ ಪಠ್ಯವು ವಿದ್ಯುನ್ಮಾನ ಪಠ್ಯವಾಗಿ ರೂಪುಗೊಂಡಾಗ ಮಾತ್ರ ಅದರ, ಗುರುತಿಸುವಿಕೆ, ಸಂಗ್ರಹಣೆ, ಸಂಸ್ಕರಣೆ ಮತ್ತು ವಿಶ್ಲೇಷಣೆ, ಭಾಷಾಂತರ, ಲಿಪ್ಯಂತರ, ಪಠ್ಯದಿಂದ ಧ್ವನಿಗೆ ಪರಿವರ್ತನೆ; ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ - ಇವೆಲ್ಲವುಗಳನ್ನು ನಿರ್ವಹಿಸುವ ಭಾಷಾ ತಂತ್ರಜ್ಞಾನಕ್ಕೆ ಪ್ರಾಮುಖ್ಯತೆ ದೊರೆಯುತ್ತದೆ.

       ಕಂಪ್ಯೂಟರಿನಲ್ಲಿ ಭಾಷಾ ಲಿಪಿ ಬಳಕೆಯ ವ್ಯವಸ್ಥೆಯನ್ನು ರೂಪಿಸಲು ಬಳಸಲಾಗುವ ತಂತ್ರಜ್ಞಾನದ ಒಂದು ವಿಭಾಗವನ್ನು ಭಾಷಾ ಲಿಪಿತಂತ್ರಜ್ಞಾನಎಂದು ಮೊದಲಿಗೆ ಕರೆಯಲಾಯಿತು. ಇಂದು ಭಾಷಾ ಲಿಪಿತಂತ್ರಜ್ಞಾನದ ಪರಿಕಲ್ಪನೆ ಮತ್ತು ವ್ಯಾಪ್ತಿಯು ಲಿಪಿವ್ಯವಸ್ಥೆಯನ್ನೂ ಮೀರಿ ವಿಸ್ತರಿಸಿದೆ. ಸಹಜ ಭಾಷೆಯ ಲಿಪಿಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸುವುದು; ಅವುಗಳ ಸಮರ್ಥ ಬಳಕೆಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವುದು; ಪಠ್ಯರೂಪದ ಮಾಹಿತಿಗಳನ್ನು ಸಿದ್ಧಪಡಿಸುವುದು, ಪದ, ಕಾಗುಣಿತ ಮತ್ತು ವ್ಯಾಕರಣ ಪರೀಕ್ಷೆ - ಇವುಗಳಿಗಷ್ಟೇ ಲಿಪಿತಂತ್ರಜ್ಞಾನವು ಇಂದು ಸೀಮಿತವಾಗಿಲ್ಲ. ಬದಲಾಗಿ, ಭಾಷಾ ವಾಕ್ಯಗಳ ವಿಶ್ಲೇಷಣೆ, ಪರಸ್ಪರ ಭಾಷೆಗಳಿಗೆ ಲಿಪ್ಯಂತರ (ಟ್ರಾನ್ಸ್‌ಲಿಟರೇಷನ್) ಮತ್ತು ಯಂತ್ರಾಧಾರಿತ ಭಾಷಾಂತರ (ಟ್ರಾನ್ಸ್‌ಲೇಷನ್) ವ್ಯವಸ್ಥೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುವ ಮೂಲಕ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದರಿಂದ ಭಾಷಾ ತಂತ್ರಜ್ಞಾನದ ಉಪಯುಕ್ತ ಕೊಡುಗೆಯಾದ ಸಹಜ ಭಾಷಾ ಸಂಸ್ಕರಣೆ(Natural Language Processing-NLP) ಎಂಬುದು ಇಂದು ಇಂಗ್ಲಿಷೇತರ ಭಾಷೆಗಳಲ್ಲಿಯೂ ಆರಂಭಗೊಂಡಿದೆ. ಭಾಷಾ ಸಂಶೋಧಕರು ವಿವಿಧ ಸಂಶೋಧನಾ ಉದ್ದೇಶಗಳಿಗಾಗಿ ಮತ್ತು ಕೃತಿಗಳ ತೌಲನಿಕ ಆಧ್ಯಯನಕ್ಕಾಗಿ ಕೃತಿಗಳ ಕನ್‌ಕಾರ್ಡೆನ್ಸ್ ಇಂಡೆಕ್ಸ್’, ಅಂದರೆ, ’ಪದಪ್ರಯೋಗ ಕೋಶವನ್ನು ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಕಷ್ಟಕರವಾದ ಇಂತಹ ಕೆಲಸವನ್ನು ಕಂಪ್ಯೂಟರ್ ಬಳಸಿ ನಿರ್ವಹಿಸಲು ಅಗತ್ಯವಿರುವ ಸಾರ್ಟಿಂಗ್ ಮತ್ತು ಇಂಡೆಕ್ಸಿಂಗ್’ (ವರ್ಗೀಕರಣ ಮತ್ತು ಸೂಚೀಕರಣ) ಸವಲತ್ತುಗಳನ್ನು ಇಂದು ಲಿಪಿತಂತ್ರಾಂಶಗಳು ಒದಗಿಸುತ್ತಿವೆ. ಇಂಗ್ಲಿಷ್ ಅಷ್ಟೇಅಲ್ಲದೆ, ಇಂಗ್ಲಿಷೇತರ ಭಾಷಾ ಅನಕ್ಷರಸ್ಥರಿಗೆ ಹಾಗೂ ಅಂಧರಿಗೆ ವಿದ್ಯುನ್ಮಾನ ಪಠ್ಯವನ್ನು ಓದಿ ಹೇಳುವ ತಂತ್ರಜ್ಞಾನವು ಇಂದು ಅತ್ಯಗತ್ಯವಾಗಿದೆ. ಪರದೆಯಲ್ಲಿರುವ ಕನ್ನಡ ಪಠ್ಯವನ್ನು ಧ್ವನಿಗೆ ಪರಿವರ್ತಿಸಿ ಓದಿಹೇಳುವ ಇ-ಸ್ಪೀಕ್ತಂತ್ರಾಂಶವು ಕನ್ನಡಕ್ಕೆ ಲಭ್ಯವಿದೆ. ಇದೇ ಉದ್ದೇಶದ ಮಧುರವಾಚಕಎಂಬ ಹೆಸರಿನ ಸುಧಾರಿತ ತಂತ್ರಾಂಶವು ಆನ್‌ಲೈನ್‌ನಲ್ಲಿ ಲಭ್ಯವಿದೆ. ವಿದ್ಯುನ್ಮಾನ ಪಠ್ಯವನ್ನು ಧ್ವನಿರೂಪಕ್ಕೆ ಪರಿವರ್ತಿಸುವ ಟೆಕ್ಸ್ಟ್-ಟು-ಸ್ಪೇಚ್ಮತ್ತು ಧ್ವನಿರೂಪದ ಮಾತುಗಳನ್ನು ಕಂಪ್ಯೂಟರ್ ಪಠ್ಯವನ್ನಾಗಿ ಪರಿವರ್ತಿಸಿ ನೀಡುವ ಸ್ಪೇಚ್-ಟು-ಟೆಕ್ಸ್ಟ್ತಂತ್ರಾಂಶಗಳು ಭಾಷಾ ತಂತ್ರಜ್ಞಾನದ ಕೊಡುಗೆಗಳಾಗಿವೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...