ವಿಷಯಕ್ಕೆ ಹೋಗಿ

26. ನಮ್ಮ ಭಾಷೆಯಲ್ಲಿಯೇ ವಿದ್ಯುನ್ಮಾನ ಉಪಕರಣಗಳನ್ನು ಬಳಸಲು ತಂತ್ರಾಂಶಗಳ ಪ್ರಾದೇಶೀಕರಣ ಮತ್ತು ಕನ್ನಡೀಕರಣ


ಇಂಗ್ಲಿಷ್ ಜೊತೆಗೆ ಇತರೆ ಭಾಷೆಗಳನ್ನು ವಿದ್ಯುನ್ಮಾನ ಉಪಕರಣಗಳಲ್ಲಿ ಅಳವಡಿಸಿ ಬಳಸಬೇಕೆಂದರೆ, ಮೊದಲಿಗೆ ಆಯಾಯ ಭಾಷೆಯ ಲಿಪಿಗಳಿಗೆ ಸ್ಥಳಾವಕಾಶವನ್ನು ಮಾಡಿಕೊಡಬೇಕಿತ್ತು. ಆದರೆ, ಹಳೆಯ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಅಕ್ಷರ ಸ್ಥಾನಗಳ ಸಂಖ್ಯೆಯು ಸೀಮಿತವಾಗಿದ್ದ ಕಾರಣ ಅಂತಾರಾಷ್ಟ್ರೀಯ ಮಟ್ಟದ ಕೆಲವೇ ಭಾಷೆಗಳ ಲಿಪಿಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಪ್ರಾದೇಶಿಕ ಭಾಷೆಗಳನ್ನು ವಿದ್ಯುನ್ಮಾನ ಉಪಕರಣಗಳಲ್ಲಿ ಬಳಸಬೇಕಾದರೆ, ಉಪಕರಣ ತಯಾರಕರಲ್ಲದವರು ಸಿದ್ಧಪಡಿಸಿದ (ಥರ್ಡ್ ಪಾರ್ಟಿ) ತಂತ್ರಾಂಶಗಳನ್ನೇ ಅವಲಂಬಿಸಬೇಕಾಗಿತ್ತು. ಕನ್ನಡವೂ ಸೇರಿದಂತೆ ಭಾರತೀಯ ಭಾಷೆಯ ಫಾಂಟುಗಳು ಇದಕ್ಕೊಂದು ಉತ್ತಮ ಉದಾಹರಣೆ. ಮೂಲ ಉಪಕರಣಗಳ ತಂತ್ರಾಂಶಕ್ಕೂ ಥರ್ಡ್‌ಪಾರ್ಟಿ ತಂತ್ರಾಂಶಕ್ಕೂ ಹಲವಾರು ಸಂದರ್ಭಗಳಲ್ಲಿ ಸಂಘರ್ಷಗಳು ಉಂಟಾಗುತ್ತಿದ್ದ ಕಾರಣ, ಬಳಕೆದಾರರು ಕಿರಿಕಿರಿಯನ್ನು ಅನುಭವಿಸುವುದು ಸರ್ವೇಸಾಮಾನ್ಯವಾಗಿತ್ತು. ಈ ಸಮಸ್ಯೆಗಳನ್ನು ಪರಿಹರಿಸಲು ವಿದ್ಯುನ್ಮಾನ ಉಪಕರಣಗಳಲ್ಲಿ ಎಲ್ಲ ಭಾಷೆಗಳಿಗೆ ಮೂಲದಲ್ಲಿಯೇ ಅವಕಾಶವನ್ನು ಕಲ್ಪಿಸುವುದು ಅಗತ್ಯವಾಗಿತ್ತು. ಮೂಲ ಉಪಕರಣ ತಯಾರಕರೇ ಎಲ್ಲ ಭಾಷೆಗಳನ್ನು ತಮ್ಮತಮ್ಮ ಉಪಕರಣಗಳಲ್ಲಿ ಅಳವಡಿಸಿ ನೀಡಬೇಕಿತ್ತು. ಆದರೆ, ನಾನಾ ಕಾರಣಗಳಿಗೆ ಇದು ಸಾಧ್ಯವಾಗಿರಲಿಲ್ಲ.

ಅಕ್ಷರ ಸ್ಥಳಾವಕಾಶ ಹೆಚ್ಚಿಸಿದ ಆಧುನಿಕ ಎನ್‌ಕೋಡಿಂಗ್ : ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನುಗಳಲ್ಲಿ ಬಳಸಲಾಗುವ ಅಂತಾರಾಷ್ಟ್ರೀಯ ಮಟ್ಟದ ತಂತ್ರಾಂಶಗಳಲ್ಲಿ ಜಗತ್ತಿನ ಎಲ್ಲ ಭಾಷೆಗಳನ್ನು ಸಮರ್ಥವಾಗಿ ಅಳವಡಿಸಿ ಬಳಸಲು ಆಯಾಯ ಭಾಷೆಗಳ ಲಿಪಿಗಳಿಗೆ ಆಧುನಿಕ ಕ್ಯಾರೆಕ್ಟರ್ ಎನ್‌ಕೋಡಿಂಗ್ವ್ಯವಸ್ಥೆಯನ್ನು ಆರಂಭಿಸುವ ಅನಿವಾರ್ಯತೆ ಬಂದೊದಗಿತು. ೮ ಬಿಟ್‌ಗಳ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಕೇವಲ ೨೫೬ ಅಕ್ಷರಗಳಿಗೆ ಮಾತ್ರವೇ ಸ್ಥಾನವಿದ್ದ ಕಾರಣ ಎಲ್ಲ ವಿಶ್ವಭಾಷೆಗಳಿಗೆ ಸ್ಥಾನವಿರಲಿಲ್ಲ. ಆಧುನಿಕ ರೀತಿಯಲ್ಲಿ ೧೬ ಬಿಟ್‌ಗಳ ಎನ್‌ಕೋಡಿಂಗ್‌ನ್ನು ಆರಂಭಿಸಲಾದ ಕಾರಣ ೬೫ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಕಂಪ್ಯೂಟರಿನ ಅಕ್ಷರಸ್ಥಾನಗಳು ದೊರೆಯಿತು.  ಎನ್‌ಕೋಡಿಂಗ್ ವ್ಯವಸ್ಥೆಯನ್ನು ಬದಲಿಸುವ ಮೂಲಕ ಅಕ್ಷರ ಸಂಕೇತಗಳ ಸಂಖ್ಯೆಯನ್ನು ಹೆಚ್ಚಿಸಲಾದ ಕಾರಣ ವಿಶ್ವದ ಎಲ್ಲ ಭಾಷೆಗಳಿಗೂ ಕಂಪ್ಯೂಟರಿನಲ್ಲಿ ಸ್ಥಾನವನ್ನು ಕಲ್ಪಿಸುವುದು ಸಾಧ್ಯವಾಯಿತು. ಈಗ, ಒಂದು ಡಾಕ್ಯುಮೆಂಟಿನಲ್ಲಿ ಕೇವಲ ಇಂಗ್ಲಿಷ್ ಮತ್ತು ಅದರೊಂದಿಗೆ ಪ್ರಾದೇಶಿಕ ಭಾಷೆಯೊಂದರ ಪಠ್ಯವನ್ನು ಟೈಪ್‌ಮಾಡಬಹುದಾದ ಕಾಲ ಮುಗಿಯಿತು. ಒಂದೇ ಡಾಕ್ಯುಮೆಂಟಿನಲ್ಲಿ ನಮಗೆ ಅಗತ್ಯವಾದ ಅನೇಕ ಭಾಷೆಗಳನ್ನು ಟೈಪ್‌ಮಾಡಿ ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಬಹುದು. ತಂತ್ರಜ್ಞಾನದ ಸುಧಾರಣೆಯಿಂದಾಗಿ ಏಕಭಾಷೆಯ ಫಾಂಟು, ದ್ವಿಭಾಷಾ ಫಾಂಟುಗಳು ಈಗ ಇಲ್ಲವಾಗಿ ಬಹುಭಾಷಾ ಫಾಂಟುಗಳು ಬಳಕೆಗೆ ಲಭ್ಯವಾಗಿವೆ.

ವಿವಿಧ ಉದ್ದೇಶದ ಫಾಂಟುಗಳು : ಕನ್ನಡ ಭಾಷೆಯ ಬಳಕೆಗಾಗಿ (ಡಿ.ಟಿ.ಪಿ. ಉದ್ದೇಶಕ್ಕಾಗಿ) ವಿವಿಧ ಅಕ್ಷರರೂಪದ (ಫಾಂಟ್ ಸ್ಟೈಲ್) ಏಕಭಾಷೆಯ ಫಾಂಟುಗಳು ಆವಿಷ್ಕಾರಗೊಂಡವು. ಪ್ರೋಗ್ರಾಮಿಂಗ್ ಉದ್ದೇಶಕ್ಕೆ ಅನುಕೂಲವಾಗುವಂತೆ ಇಂಗ್ಲಿಷ್ ಜೊತೆಗೆ ಮತ್ತೊಂದು ಪ್ರಾದೇಶಿಕ ಭಾಷೆಯ ಅಕ್ಷರಗಳು ಒಂದೇ ಫಾಂಟಿನಲ್ಲಿ ದೊರೆಯುವಂತೆ ದ್ವಿಭಾಷಾ ಫಾಂಟುಗಳು ಬಳಕೆಗೆ ಬಂದವು. ಈಗ ಯುನಿಕೋಡ್ ಸ್ಟ್ಯಾಂಡರ್ಡ್ ಅನುಷ್ಠಾನಗೊಂಡ ನಂತರದಲ್ಲಿ ಎಲ್ಲ ಉದ್ದೇಶಗಳಿಗೂ ಅನುಕೂಲವಾಗುವ ಬಹುಭಾಷಾ ಫಾಂಟುಗಳು ಬಳಕೆಗೆ ಬಂದಿವೆ. ಇಂಗ್ಲಿಷ್ ಭಾಷಾ ಇಂಟರ್‌ಫೇಸ್ ಇರುವ ಎಲ್ಲ ತಂತ್ರಾಂಶಗಳಲ್ಲಿ ಬಹುಭಾಷೆಗಳನ್ನು ಬಳಸಲು ಅನುವಾಗುವಂತೆ ಲಿಪಿತಂತ್ರಜ್ಞಾನವನ್ನು ಅಳವಡಿಸಲಾಯಿತು.

ತಂತ್ರಾಂಶಗಳ ಪ್ರಾದೇಶೀಕರಣ : ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ತಮ್ಮ ತಂತ್ರಾಂಶಗಳಿಗೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆಯನ್ನು ಹುಡುಕುವ ಪ್ರಯತ್ನಗಳಲ್ಲಿ, ತಂತ್ರಾಂಶಗಳನ್ನು ಆಯಾಯ ದೇಶಗಳ ಬಳಕೆದಾರರ ಅವಶ್ಯಕತೆಗೆ ಅನುಗುಣವಾಗಿ ಪ್ರಾದೇಶೀಕರಿಸುವ ಅಗತ್ಯಗಳನ್ನು ಮನಗಂಡರು. ಪ್ರಾದೇಶೀಕರಣದ ಪ್ರಮುಖ ಅಂಗವಾಗಿ ತಂತ್ರಾಂಶಗಳಿಗೆ ಭಾಷೆಗಳನ್ನು ಅಳವಡಿಸುವುದು ಅತ್ಯಗತ್ಯವಾಗಿತ್ತು. ಈಗಾಗಲೇ ಆಯಾಯ ದೇಶ ಭಾಷೆಗಳು ಕಂಪ್ಯೂಟರ್‌ನ ಬಳಕೆಯ ಭಾಷೆಯಾಗಿದ್ದರೂ ಸಹ, ಅವುಗಳಲ್ಲಿ ಏಕರೂಪತೆ ಇರಲಿಲ್ಲ ಮತ್ತು ಹಲವಾರು ಗೊಂದಲಗಳು ಮತ್ತು ಸಮಸ್ಯೆಗಳು ಇದ್ದವು. ಇಂತಹ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಪರಿಹಾರವಾಗಿ ತಮ್ಮ ತಂತ್ರಾಂಶಗಳನ್ನು ಪ್ರಾದೇಶೀಕರಿಸಲು ವಿಶ್ವಮಟ್ಟದಲ್ಲಿ ಮಾನಕಗಳು (ಸ್ಟ್ಯಾಂಡರ್ಡ್ಸ್) ಅಗತ್ಯ ಎಂದು ಅವು ಮನಗಂಡವು. ಅಂತಹ ಮಾನಕಗಳನ್ನು ಆಯಾಯ ದೇಶಗಳ ಬಳಕೆದಾರರು ಒಪ್ಪಿಕೊಳ್ಳುವಂತೆ ನಿರ್ಧರಿಸುವುದು ತಂತ್ರಾಂಶ ಪ್ರಾದೇಶೀಕರಣದತ್ತ ಇಡುವ ಮೊದಲ ಹೆಜ್ಜೆಯಾಗಿರಬೇಕು ಎಂಬುದನ್ನೂ ಸಹ ಅರ್ಥಮಾಡಿಕೊಳ್ಳಲಾಯಿತು.

       ಜಾಗತಿಕ ಮಟ್ಟದಲ್ಲಿ ಎಲ್ಲಾ ವಿಶ್ವಭಾಷೆಗಳಿಗೆ ಅಕ್ಷರ ಸಂಕೇತೀಕರಣವನ್ನು ಏಕರೂಪವಾಗಿ ನಿರ್ಧರಿಸಿ, ಮಾನಕವನ್ನು ರೂಪಿಸಿ, ಅಂತಹ ಮಾನಕದ ಅನುಸಾರ ತಂತ್ರಾಂಶಗಳನ್ನು ಪ್ರಾದೇಶೀಕರಿಸುವುದು ಕ್ರಮಬದ್ಧ ವಿಧಾನ. ತಂತ್ರಾಂಶ ತಯಾರಿಕಾ ಉದ್ದಿಮೆಯ ಜಾಗತಿಕ ದೈತ್ಯ ಮೈಕ್ರೋಸಾಫ್ಟ್ ಕಾರ್ಪೊರೇಷನ್ ಹೆಚ್ಚಿನ ಉತ್ಸಾಹದೊಂದಿಗೆ, ಇಂತಹ ಜಾಗತಿಕ ಮಾನಕವನ್ನು ರೂಪಿಸಲು ಹೊರಟಿತು. ಯಾವುದೇ ಒಂದು ಕಂಪನಿಯು ಒಂದು ಮಾನಕವನ್ನು ರೂಪಿಸಿ ಅದನ್ನು ಬಳಕೆದಾರರ ಮೇಲೆ ಹೇರುವುದು ಸಾಧ್ಯವಿಲ್ಲ ಎಂದು ಭಾವಿಸಿದ ಆ ಕಂಪನಿಯು, ‘ಯುನಿಕೋಡ್ ಕನ್ಸಾರ್ಷಿಯಂಎಂಬ ಹೆಸರಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ತಂತ್ರಾಂಶ ತಯಾರಕರು ಮತ್ತು ಕಂಪ್ಯೂಟರ್ ತಯಾರಕರು ಹಾಗೂ ಜಗತ್ತಿನ ನಾನಾ ದೇಶಗಳ, ರಾಜ್ಯಗಳ ಸರಕಾರಗಳನ್ನು ಒಳಗೊಂಡ ಒಂದು ಸ್ವಯಂಸೇವಾ ಸಂಘಟನೆಯನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಯಿತು.  ಜಗತ್ತಿನ ಬಹುತೇಕ ಭಾಷೆಗಳಿಗೆ ಈಗಾಗಲೇ ಆಯಾಯ ದೇಶಗಳಲ್ಲಿ ಲಭ್ಯವಿದ್ದ ದೇಶೀಯ ಮಾನಕಗಳನ್ನೇ ಇಡಿಯಾಗಿ ತೆಗೆದುಕೊಂಡು ಯುನಿಕೋಡ್ ಕನ್ಸಾರ್ಷಿಯಂಮೊದಲಿಗೆ ಅವುಗಳನ್ನು ಯುನಿಕೋಡ್ ರೂಪದಲ್ಲಿ ಅಳವಡಿಸಿ ಜಾಗತಿಕ ಮಾನಕದ ಪ್ರಥಮ ಆವೃತ್ತಿಯನ್ನು ೧೯೯೧ರಲ್ಲಿ ರೂಪಿಸಿತು. ಭಾರತೀಯ ಭಾಷೆಗಳ ಯುನಿಕೋಡ್ ಬಗ್ಗೆ ಹಲವಾರು ಚರ್ಚೆಗಳು, ಸಭೆಗಳು ನಡೆದಿವೆ. ಆ ಮೂಲಕ ಈ ಜಾಗತಿಕ ಮಾನಕವನ್ನು ಭಾರತೀಯ ಭಾಷೆಗಳ ಬಳಕೆಗಾಗಿ ಉತ್ತಮಪಡಿಸಿ ಹೊಸ ಆವೃತ್ತಿಗಳನ್ನು ಹೊರತರಲಾಗಿದೆ.  ಪ್ರಸ್ತುತ, ಮೈಕ್ರೋಸಾಫ್ಟ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ತಂತ್ರಾಂಶ ತಯಾರಕರು ತಮ್ಮ ತಂತ್ರಾಂಶಗಳಲ್ಲಿ ವಿಶ್ವ ಭಾಷೆಗಳನ್ನು ಅಳವಡಿಸಿ, ಬಹುಭಾಷಾ ಯೂಸರ್ ಇಂಟರ್‌ಫೇಸ್‌ಗಳನ್ನು ನೀಡುವ ಮೂಲಕ ತಮ್ಮ ತಂತ್ರಾಂಶಗಳನ್ನು ಪ್ರಾದೇಶೀಕರಿಸಿದ್ದಾರೆ. ಆ ಮೂಲಕ ತಮ್ಮ ತಂತ್ರಾಂಶಗಳ ಮಾರಾಟಕ್ಕಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮೈಕ್ರೋಸಾಫ್ಟ್ ಭಾರತೀಯ ಭಾಷೆಗಳಿಗೆ ಯುನಿಕೋಡ್ ಬೆಂಬಲವನ್ನು ಅಳವಡಿಸಿ, ತನ್ನ ವಿಂಡೋಸ್ ೨೦೦೦, ವಿಂಡೋಸ್-ಎಕ್ಸ್‌ಪಿ ಮತ್ತು ವಿಂಡೋಸ್ ೨೦೦೩ ಹಾಗೂ ವಿಂಡೋಸ್ ವಿಸ್ತಾ ಕಾರ್ಯಾಚರಣೆ ವ್ಯವಸ್ಥೆಗಳನ್ನು ಹಾಗೂ ಆಫೀಸ್ ೨೦೦೦, ಎಕ್ಸ್‌ಪಿ ಮತ್ತು ೨೦೦೩ ಹಾಗೂ ೨೦೦೭ ಆವೃತ್ತಿಗಳಲ್ಲಿ ಕ್ರಮವಾಗಿ ಮೊದಲಿಗೆ ವಿವಿಧ ಭಾರತೀಯ ಭಾಷೆಗಳನ್ನು  ಊಡಿಸುವ ಮತ್ತು ಮೂಡಿಸುವ ಅವಕಾಶವನ್ನು ಒದಗಿಸಿತು. ನಂತರದಲ್ಲಿ ಅವುಗಳಿಗೆ ಅಗತ್ಯವಿರುವ ಬಹುಭಾಷಾ ಇಂಟರ್‌ಫೇಸ್‌ನ್ನು ಎಲ್‌ಐಪಿಗಳು ಅಂದರೆ, ಲಾಂಗ್ವೇಜ್ ಇಂಟರ್‌ಫೇಸ್ ಪ್ಯಾಕ್‌ಗಳನ್ನು ರೂಪಿಸುವ ಮೂಲಕ ತನ್ನ ಎಲ್ಲಾ ಉತ್ಪನ್ನಗಳನ್ನು ಪ್ರಾದೇಶೀಕರಿಸಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳಾದ ವಿಂಡೋಸ್-ಎಕ್ಸ್‌ಪಿ ಮತ್ತು ಆಫೀಸ್-೨೦೦೩ರ ನಂತರದ ಆವೃತ್ತಿಗಳಲ್ಲಿ ಪೂರ್ಣಪ್ರಮಾಣದ ಕನ್ನಡ ಯುನಿಕೋಡ್ ಬೆಂಬಲವನ್ನು ನೀಡಲಾಗಿದೆ. ಮೈಕ್ರೋಸಾಫ್ಟ್ ಉತ್ಪನ್ನಗಳಲ್ಲಿ ಕನ್ನಡ ಭಾಷಾ ಬಳಕೆಯೊಂದಿಗೆ ಪ್ರಾದೇಶಿಕ ಸಂದರ್ಭದಲ್ಲಿ ಅಗತ್ಯವಿರುವ ಅನೇಕ ಸೌಲಭ್ಯಗಳನ್ನು ಅಳವಡಿಸಿ ನೀಡಲಾಗಿದೆ. ವಿಶ್ವಭಾಷೆಗಳಿಗೆ ಯುನಿಕೊಡ್ ಬಳಕೆಯ ಬೆಂಬಲ ದೊರೆತ ನಂತರದಲ್ಲಿ, ಲಿನಕ್ಸ್‌ನ ಕನ್ನಡದ ಆವೃತ್ತಿಯ ಪ್ರಾದೇಶೀಕರಣದ ಕಾರ್ಯವನ್ನು ಲಿನಕ್ಸ್ ಸಮುದಾಯದ ಉತ್ಸಾಹಿ ಕನ್ನಡಿಗ ತಂತ್ರಜ್ಞರು ೨೦೦೨ರಲ್ಲಿಯೇ ಆರಂಭಿಸಿ, ಕಾಲಕ್ರಮೇಣ ಈ ಕೆಲಸವನ್ನು ಪೂರೈಸಿದ್ದಾರೆ. ಮೈಕ್ರೋಸಾಫ್ಟ್ ಆಫೀಸ್ ಸೂಟ್‌ಗೆ ಲಿನಕ್ಸ್‌ನ ಪರ್ಯಾಯ ಆಫೀಸ್ ಸೂಟ್ ಆಗಿರುವ ಓಪನ್ ಆಫೀಸ್‌ನ ಕನ್ನಡೀಕರಣ ಕಾರ್ಯವನ್ನು, ಕನ್ನಡ ಗಣಕ ಪರಿಷತ್ತಿನ ಅನುವಾದ ಸಹಕಾರದೊಂದಿಗೆ, ಸಿ-ಡಾಕ್ ಸಂಸ್ಥೆಯು ಕೈಗೊಂಡು ಪೂರ್ಣಗೊಳಿಸಿದೆ. ಹಲವು ಉದ್ದೇಶಗಳಿಗೆ ಬಳಸಲಾಗುವ ವಿವಿಧ ರೀತಿಯ ಆನ್ವಯಿಕ ತಂತ್ರಾಂಶಗಳು (ಅಪ್ಲಿಕೇಷನ್ ಸಾಫ್ಟ್‌ವೇರ್‌ಗಳು) ಈಗ ಕನ್ನಡದಲ್ಲಿಯೇ ದೊರೆಯುತ್ತವೆ. ತಂತ್ರಾಂಶಗಳ ಕನ್ನಡೀಕರಣ ಎಂಬುದು ಒಂದು ನಿರಂತರ ಪ್ರಕ್ರಿಯೆಯಾಗಿದೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...