ವಿಷಯಕ್ಕೆ ಹೋಗಿ

25. ಕಂಪ್ಯೂಟರಿನಲ್ಲಿ ಕನ್ನಡ ಟೈಪ್ ಮಾಡಲು ವಿವಿಧ ಕೀಲಿಮಣೆ ವಿನ್ಯಾಸಗಳು


       ಟೈಪಿಂಗ್ ಕೆಲಸಕ್ಕೆ ಸೀಮಿತಗೊಳಿಸಿ ಕಂಪ್ಯೂಟರ್‌ನ್ನು ಇಂದಿಗೂ ಕೇವಲ ಆಧುನಿಕ ಟೈಪ್‌ರೈಟರ್ನಂತೆ (ಗ್ಲೋರಿಫೈಡ್ ಟೈಪ್‌ರೈಟರ್) ಬಳಸಲಾಗುತ್ತಿದೆ ಎಂಬುದು ಅತಿಶಯೋಕ್ತಿಯಲ್ಲ. ಇಂಗ್ಲಿಷ್ ಭಾಷೆಗೆ ಕ್ವೆರ್ಟಿ (ಕಿWಇಖಖಿಙ) ಕೀಲಿಮಣೆ (ಕೀ-ಬೋರ್ಡ್) ವಿನ್ಯಾಸವು ಏಕೈಕ ಸ್ಟ್ಯಾಂಡರ್ಡ್ ವಿನ್ಯಾಸವಾಗಿ ಬಳಕೆಗೆ ಬಂದು ದಶಕಗಳೇ ಸಂದಿವೆ. ಇಂಗ್ಲಿಷೇತರ ಭಾಷೆಯ ಕಂಪ್ಯೂಟರ್ ಟೈಪಿಂಗ್‌ಗಾಗಿ ವಿವಿಧ ಕಾಲಘಟ್ಟದಲ್ಲಿ, ವಿವಿಧ ರೀತಿಯ ಬಳಕೆಕಾರರಿಗೆ ಅಗತ್ಯವಿದ್ದ, ವಿವಿಧ ವಿನ್ಯಾಸದ ಕೀಲಿಮಣೆಗಳನ್ನು ರೂಪಿಸಿ ತಂತ್ರಾಂಶಗಳಲ್ಲಿ ಅಳವಡಿಸುತ್ತಾ ಬರಲಾಗಿದೆ. 

ಕೇವಲ ೨೬ ಅಕ್ಷರಗಳು ಇರುವ ಇಂಗ್ಲಿಷ್‌ನ ಪಠ್ಯವನ್ನು ಕಂಪ್ಯೂಟರ್‌ಗೆ ಊಡಿಸಲು ಕ್ವೆರ್ಟಿ (QWERTY)  ಕೀಲಿಮಣೆ ಬಹಳ ಜನಪ್ರಿಯವಾಗಿದೆ. ಶಿಫ್ಟ್‌ಸಹಿತ ಮತ್ತು ಶಿಫ್ಟ್‌ರಹಿತ ಬಳಕೆಯಿಂದ ೫೨ ಸಾಧ್ಯತೆಗಳು ದೊರೆಯುತ್ತವೆ. ಇದರಿಂದ ಇಂಗ್ಲಿಷ್‌ನ ಕ್ಯಾಪಿಟಲ್ ಮತ್ತು ಸ್ಮಾಲ್ ಲೆಟರ್‌ಗಳ ಪಠ್ಯ ಮೂಡಿಸಲು ಸಾಧ್ಯವಾಗಿದೆ. ಇಂಗ್ಲಿಷ್‌ಗಿಂತ ಹೆಚ್ಚಿನ ಸಂಖ್ಯೆಯ ಮೂಲ ಅಕ್ಷರಗಳು, ಒತ್ತಕ್ಷರಗಳು ಮತ್ತು ಗುಣಿತಾಕ್ಷರಗಳಿರುವ ಭಾರತೀಯ ಭಾಷೆಗಳನ್ನೂ ಸಹ ಕಂಪ್ಯೂಟರ್‌ಗೆ ಊಡಿಸುವಲ್ಲಿ ಇದೇ ಕೀಲಿಮಣೆಯು ಬಳಕೆಯಲ್ಲಿರುವುದು ಆಶ್ಚರ್ಯದ ವಿಷಯವೇನಲ್ಲ. ಸ್ವರಗಳು ಮತ್ತು ವ್ಯಂಜನಗಳು ತಾವಾಗಿಯೇ ಸೇರ್ಪಡೆಗೊಂಡು ಗುಣಿತಾಕ್ಷರವಾಗುಂತೆ ಸಂಯೋಜನಾ ತಂತ್ರವನ್ನು ರೂಪಿಸಿ ಭಾರತೀಯ ಭಾಷಾ ಲಿಪಿಯ ಪಠ್ಯವನ್ನು ಕಂಪ್ಯೂಟರಿನಲ್ಲಿ ಮೂಡಿಸುವ ಕೀಲಿಮಣೆ ವಿನ್ಯಾಸವನ್ನು ರೂಪಿಸಲಾಗಿದೆ. ಹೀಗಾಗಿ, ಇಂಗ್ಲಿಷ್‌ನ ಸಾಂಪ್ರದಾಯಿಕ ಕ್ವೆರ್ಟಿ ಕೀಲಿಮಣೆಯೇ ಇಂದಿಗೂ ಭಾರತೀಯ ಭಾಷೆಗಳ ಲಿಪಿಮೂಡಿಕೆಗೆ ಬಳಕೆಯಲ್ಲಿದೆ. ಶಿಫ್ಟ್ ಕೀಲಿಯಂತಹ ಕಾಂಬಿನೇಷನ್ ಕೀಲಿಗಳನ್ನು ಬಳಸಿ ಟೈಪಿಂಗ್ ಕಲಿಯುವಾಗ ಬಳಕೆದಾರನ ನೆನಪಿನ ಶಕ್ತಿಗೆ ಸ್ವಲ್ಪ ಒತ್ತಡ ಇರುವುದು ಸಹಜ. ಇದನ್ನು ತಪ್ಪಿಸಲು ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಿ ಕಾರಣ ಕಾಲ ಕ್ರಮೇಣ ವಿವಿಧ ಕೀಲಿಮಣೆ ವಿನ್ಯಾಸಗಳು ರೂಪುಗೊಂಡು ಬಳಕೆಗೆ ಬಂದಿವೆ.

ಕನ್ನಡದ ಮಾತುಗಳನ್ನು ಲಿಪಿಯನ್ನಾಗಿಸಿ ನೀಡುವ ತಂತ್ರಜ್ಞಾನವು ಆವಿಷ್ಕಾರಗೊಂಡು ಬಳಕೆಯಲ್ಲಿರುವಾಗ ಕೀಲಿಮಣೆ ವಿನ್ಯಾಸಗಳ ಕುರಿತು ಬರೆಯುವುದು ಕ್ಲೀಷೆಯಾಗುವುದಿಲ್ಲ. ಅಗಾಧವಾದ ಪಠ್ಯವನ್ನು ಡಿಜಿಟೈಸ್ ಮಾಡಲು ಇಂದಿಗೂ ಕೀಲಿಮಣೆಯನ್ನೇ ಆಶ್ರಯಿಸಬೇಕಾದ ಅನಿವಾರ್ಯತೆ ಇದೆ.  ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡ ಲಿಪಿಯನ್ನು ಯಶಸ್ವಿಯಾಗಿ ಬಳಸಲು ಕಾಲಕಾಲಕ್ಕೆ ಆವಿಷ್ಕಾರಗೊಂಡ ವೈವಿಧ್ಯಮಯ ಕೀಲಿಮಣೆ ವಿನ್ಯಾಸಗಳು ಸಹಕಾರಿಯಾಗಿವೆ. ಟೈಪಿಂಗ್‌ಗಾಗಿ ಹಲವು ಕೀಲಿಮಣೆ ವಿನ್ಯಾಸಗಳಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳುವ ಸೌಲಭ್ಯವನ್ನು ತಂತ್ರಾಂಶಗಳು ಹೊಂದಿರುತ್ತವೆ. ತನಗೆ ಅಗತ್ಯಕಂಡ ಅಥವಾ ತಾನು ಈ ಮೊದಲೇ ಕಲಿತಿರುವ ವಿನ್ಯಾಸವನ್ನು ಆಯ್ದುಕೊಂಡು ಬಳಕೆದಾರನು ಟೈಪಿಂಗ್ ಮಾಡಬಹುದು. ವೈವಿಧ್ಯಮಯ ಕೀಲಿಮಣೆಗಳ ವಿನ್ಯಾಸಗಳು ಇರುವ ಕಾರಣ ಹೊಸದಾಗಿ ಕನ್ನಡ ಕಂಪ್ಯೂಟರ್ ಟೈಪಿಂಗ್ ಕಲಿಯುವವರಿಗೆ  ಗೊಂದಲ ಉಂಟಾಗುವುದು ಸಹಜ. ಯಾವ ವಿನ್ಯಾಸವನ್ನು ತಾನು ಕಲಿಯಬೇಕು? ಕಲಿಯಲು ಸುಲಭವಾದ ವಿನ್ಯಾಸ ಯಾವುದು? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ.

ಈ ಹಿಂದೆ, ಒಂದು ತಂತ್ರಾಂಶದಲ್ಲಿ ಲಭ್ಯವಿದ್ದ ಕೀಲಿಮಣೆ ವಿನ್ಯಾಸ ಮತ್ತೊಂದರಲ್ಲಿ ಬಳಕೆಗೆ ದೊರೆಯುತ್ತಿರಲಿಲ್ಲ. ಕಾಲಕಾಲಕ್ಕೆ ಬಳಕೆದಾರರ ಅಗತ್ಯಗಳಿಗೆ ತಕ್ಕಂತೆ ಬೇರೆಬೇರೆ ವಿನ್ಯಾಸಗಳನ್ನು ಎಲ್ಲ ತಂತ್ರಾಂಶ ತಯಾರಕರು ನೀಡಿದ್ದರಿಂದ ಅನೇಕ ವಿನ್ಯಾಸಗಳಿಗೆ ಕಾರಣವಾಗಿದೆ. ಇಂತಹ ಅನೇಕತೆಗಳಿಗೆ ಕೊನೆಯಿಲ್ಲದಂತಾದಾಗ, ಬಳಕೆದಾರರೇ ತಮ್ಮ ಇಚ್ಛೆಯಂತೆ (ಕಸ್ಟಮೈಸಬಲ್) ತಮ್ಮದೇ ವಿನ್ಯಾಸವನ್ನು ರೂಪಿಸಿಕೊಳ್ಳಬಹುದಾದ ಸೌಲಭ್ಯವನ್ನು ತಂತ್ರಾಂಶ ತಯಾರಕರು ಕೊಟ್ಟಿರುವುದೂ ಉಂಟು!  ಕನ್ನಡಕ್ಕೊಂದು ಏಕರೂಪ (ಸ್ಟ್ಯಾಂಡರ್ಡ್) ಕೀಲಿಮಣೆ ನಿಗದಿಯಾಗುವವರೆಗೂ ಅನೇಕ ಗೊಂದಲಗಳು ಮುಂದುವರೆದಿದ್ದವು. ಎಲ್ಲ ಗೊಂದಲಗಳ ನಿವಾರಣೆಗೆ ಕನ್ನಡಕ್ಕೆ ಒಂದು ಏಕರೂಪ ಕೀಲಿಮಣೆ ವಿನ್ಯಾಸವನ್ನು ಸರ್ಕಾರವು ೧೯೯೮ರಲ್ಲಿಯೇ ಅನುಮೋದಿಸಿದೆ. ಅದೇ ಕೆ.ಪಿ.ರಾವ್ ವಿರಚಿತ ಫೊನಟಿಕ್ ಕೀಲಿಮಣೆ ವಿನ್ಯಾಸ. ಮೊಟ್ಟಮೊದಲ ಬಾರಿಗೆ ನುಡಿ ತಂತ್ರಾಂಶದಲ್ಲಿ ಅಧಿಕೃತವಾದ ಈ ಒಂದೇ ವಿನ್ಯಾಸವನ್ನು ಅಳವಡಿಸಿ ನೀಡಲಾಗಿದೆ.

ಕನ್ನಡ ಕಂಪ್ಯೂಟರ್ ಲಿಪಿತಂತ್ರಜ್ಞಾನದ ವಿವಿಧ ಕಾಲಘಟ್ಟದಲ್ಲಿ  ಬೆರಳಚ್ಚುಯಂತ್ರದ (ಟೈಪ್‌ರೈಟರ್) ವಿನ್ಯಾಸ ಮತ್ತು ಇನ್‌ಸ್ಕ್ರಿಪ್ಟ್ (ಇಂಡಿಯನ್ ಸ್ಕ್ರಿಪ್ಟ್) ವಿನ್ಯಾಸ ಮತ್ತು ಕೆ.ಪಿ.ರಾವ್ (ಕರ್ನಾಟಕ ಸರ್ಕಾರದಿಂದ ಅಂಗೀಕೃತ) ವಿನ್ಯಾಸಗಳು ಇವೇ ಕೆಲವೇ ವಿನ್ಯಾಸಗಳು ಬಳಕೆಯಲ್ಲಿದ್ದವು. ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಕನ್ನಡ ಲಿಪಿತಂತ್ರಾಂಶಗಳು ಹೆಚ್ಚಿದಂತೆಲ್ಲಾ ಒಂದೊಂದು ಲಿಪಿತಂತ್ರಾಂಶದಲ್ಲಿ ಪ್ರತಿಯೊಬ್ಬ ತಯಾರಕರೂ ಬಳಕೆಯ ಆಯ್ಕೆಗಾಗಿ ವಿವಿಧ ರೀತಿಯ ವಿನ್ಯಾಸಗಳನ್ನು ನೀಡಲು ಆರಂಭಿಸಿದರು. ಇಂಗ್ಲಿಷ್ ಲಿಪಿಯನ್ನೇ ಬಳಸಿ ಬೆರಳಚ್ಚಿಸುವ ಮೂಲಕ ಕನ್ನಡದ ಪಠ್ಯವನ್ನು ಮೂಡಿಸುವ ಟ್ರಾನ್ಸ್‌ಲಿಟರೇಷನ್ ಕೀಲಿಮಣೆಯನ್ನೇ ಮುಖ್ಯವಾಗಿ ಪ್ರತಿಯೊಬ್ಬರೂ ಅಳವಡಿಸಿ ನೀಡಲಾರಂಭಿಸಿದರು.  ಬಹುತೇಕರಿಗೆ ಕನ್ನಡವನ್ನು ಇಂಗ್ಲಿಷ್ ಮೂಲಕ ಟೈಪಿಸುವ ಅನಿವಾರ್ಯತೆ ಎದುರಾಯಿತು.  ಕನ್ನಡ ಭಾಷಾಲಿಪಿ ಜ್ಞಾನ ಇಲ್ಲದವರಿಗೆ ಇಂದಿಗೂ ಇಂತಹ ವಿನ್ಯಾಸವೇ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ, ಕನ್ನಡ ಭಾಷಿಕರಿಗೆ ಇಂಗ್ಲಿಷ್ ಆಲೋಚನೆಯ ಮೂಲಕ ಕನ್ನಡವನ್ನು ಟೈಪಿಸುವುದು ಕಿರಿಕಿರಿಯ ವಿಷಯವೇ ಸರಿ. ಕನ್ನಡವನ್ನು ಕನ್ನಡದಲ್ಲಿಯೇ ಆಲೋಚಿಸಿ ಟೈಪಿಸುವ ತರ್ಕಬದ್ಧ ವಿಧಾನಗಳಿರುವ, ಸರಳವಾದ ಕೀಲಿಮಣೆ ವಿನ್ಯಾಸದ ಅಗತ್ಯವಿತ್ತು. ನಾಡೋಜ ಡಾ.ಕೆ.ಪಿ.ರಾವ್‌ರವರು ಅದನ್ನು ಎಂಭತ್ತರ ದಶಕದಲ್ಲಿಯೇ ಸಾಧಿಸಿ ತೋರಿಸಿದ್ದರು.

       ಸಾಂಪ್ರದಾಯಕ ಬೆರಳಚ್ಚುಯಂತ್ರದಲ್ಲಿ ಅಕ್ಷರಭಾಗಗಳನ್ನು ನೆನಪಿಟ್ಟುಕೊಂಡು ಪ್ರತಿ ಅಕ್ಷರಭಾಗ ಮೂಡಿಸಲು ಒಂದೊಂದು ಕೀಲಿಯನ್ನು ಮೂಡಿಸುವ ಕ್ರಮವನ್ನೇ ಕಂಪ್ಯೂಟರ್‌ಗೂ ಸಹ ಅಳವಡಿಸಿರುವುದನ್ನು ಬೆರಳಚ್ಚುಯಂತ್ರದ ವಿನ್ಯಾಸ (ಟೈಪ್‌ರೈಟರ್ ಲೇಔಟ್) ಎಂದು ಕರೆಯಲಾಗಿದೆ. ಉದಾಹರಣೆಗೆ, ’ಯೋಎಂಬುದನ್ನು ಟೈಪಿಸಲು ಸೊನ್ನೆ, ಕೊಂಬು, ತಲೆಕಟ್ಟು, ಏತ್ವ, ಮತ್ತೊಂದು ಕೊಂಬು, ಇಳಿ ಹಾಗು ದೀರ್ಘ ಹೀಗೆ ಅಕ್ಷರಭಾಗಗಳನ್ನು ಕ್ರಮವಾಗಿ ಬೆರಳಚ್ಚಿಸಿ ಒಂದು ಪೂರ್ಣಾಕ್ಷರವನ್ನು ಮೂಡಿಸುವ ಕ್ರಮ. ka ಎಂದು ಬೆರಳಚ್ಚಿಸಿದಾಗ ಎಂದೂ, nna ಒತ್ತಿದಾಗ ನ್ನಎಂದೂ, da ಒತ್ತಿದಾಗ ಎಂದು ಅಕ್ಷರ ಮೂಡಿಸುವ, ಒಟ್ಟಾರೆ kannada ಎಂದು ಬೆರಳಚ್ಚಿಸಿದರೆ ಅದು ಕನ್ನಡಎಂದು ಮೂಡುವ ವಿನ್ಯಾಸವನ್ನು ಇಂಗ್ಲಿಷ್ ಲಿಪ್ಯಂತರಣ ವಿನ್ಯಾಸ (ಟ್ರಾನ್ಸ್‌ಲಿಟರೇಷನ್ ಲೇಔಟ್) ಎನ್ನಲಾಗಿದೆ. ಕೀಲಿಮಣೆಯಲ್ಲಿ, ಎಡಗೈ ಬೆರಳುಗಳನ್ನು ಬಳಸುವ ಸ್ಥಾನಗಳಲ್ಲಿ ಸ್ವರಗಳನ್ನು ಹಾಗೂ ಬಲಗೈ ಬೆರಳುಗಳನ್ನು ಬಳಸುವ ಸ್ಥಾನಗಳಲ್ಲಿ ವ್ಯಂಜನಗಳನ್ನು ನಿಗದಿಪಡಿಸಿರುವ ವಿನ್ಯಾಸವನ್ನು ಇನ್‌ಸ್ಕ್ರಿಪ್ಟ್’ (ಇಂಡಿಯನ್ ಸ್ಕ್ರಿಪ್ಟ್) ವಿನ್ಯಾಸ ಎಂದು ಕರೆಯಲಾಗಿದೆ. ಎಲ್ಲಾ ಭಾರತೀಯ ಭಾಷೆಗಳಿಗಾಗಿ ಏಕರೂಪದ ಕೀಲಿಮಣೆ ವಿನ್ಯಾಸವನ್ನು ನಿಗದಿಪಡಿಸುವಾಗ ಈ ವಿನ್ಯಾಸವನ್ನು ಕನ್ನಡಕ್ಕೂ ಸಹ ನಿಗದಿಪಡಿಸಲಾಯಿತು. ಇಂದಿಗೂ ಹಲವು ತಂತ್ರಾಂಶಗಳಲ್ಲಿ ಈ ವಿನ್ಯಾಸವನ್ನು ಅಳವಡಿಸಿ ನೀಡಲಾಗುತ್ತಿದೆ. ಈ ವಿನ್ಯಾಸ ಹೆಚ್ಚು ಬಳಕೆಯಲ್ಲಿಲ್ಲ.

       ಮ್ಯಾನುವಲ್ ಟೈಪ್‌ರೈಟರ್ ಬಳಸುತ್ತಿದ್ದ ಟೈಪಿಸ್ಟ್‌ಗಳೇ ಕನ್ನಡವನ್ನು ಟೈಪ್‌ಮಾಡಬೇಕಾದ ಕಾರಣದಿಂದ ಮೊದಲಿಗೆ ಟೈಪ್‌ರೈಟರ್ ವಿನ್ಯಾಸವು ಬಳಕೆಗೆ ಬಂತು. ನಂತರದಲ್ಲಿ ಟ್ರಾನ್ಸ್‌ಲಿಟರೇಷನ್ ವಿನ್ಯಾಸವು ಬಳಕೆಗೆ ಬಂತು. ಆ ನಂತರದಲ್ಲಿ ಧ್ವನ್ಯಾತ್ಮಕ, ಅಂದರೆ, ಫೊನಟಿಕ್ ವಿನ್ಯಾಸ ಬಂತು. ತದನಂತರ ಇನ್‌ಸ್ಕ್ರಿಪ್‌ವಿನ್ಯಾಸ ಬಳಕೆಗೆ ಬಂದವು.

       ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ, ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ, ಇಂಗ್ಲಿಷ್ ಕೀಲಿಯ ಸ್ಥಾನದಲ್ಲಿಯೇ ಇರುವ  ಕನ್ನಡದ ಮೂಲಾಕ್ಷರದ ಕೀಲಿಗಳನ್ನಷ್ಟೇ ಬಳಸಿ ತರ್ಕಬದ್ಧವಾಗಿ ಕನ್ನಡವನ್ನು ಟೈಪಿಸಬಹುದಾದ ವಿನ್ಯಾಸ ಎಂದರೆ ಅದು ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸ. (ನುಡಿವಿನ್ಯಾಸ). ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಹೊಸದಾಗಿ ಕನ್ನಡ ಟೈಪಿಂಗ್ ಕಲಿಯುವವರಿಗೆ ಕೆ.ಪಿ.ರಾವ್ ವಿನ್ಯಾಸ ಸೂಕ್ತವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...