ವಿಷಯಕ್ಕೆ ಹೋಗಿ

9. ಕನ್ನಡದ ವಿಚಿತ್ರಲಿಪಿಯ ಸಮಸ್ಯೆಯ ಪರಿಹಾರಕ್ಕಾಗಿ ‘ಆಸ್ಕಿ’ಯಿಂದ ‘ಯುನಿಕೋಡ್’ನತ್ತ ಪಯಣ









ನಿಮಗೆ ಬಂದಿರುವ ಇ-ಮೇಯ್ಲ್ ಅಟ್ಯಾಚ್‌ಮೆಂಟ್‌ನ್ನು ಓದಿ, ನಿಮ್ಮ ಅಭಿಪ್ರಾಯವನ್ನು ಫೋನ್‌ನಲ್ಲೇ ತಿಳಿಸುವ ತುರ್ತು ಸಂದರ್ಭ ಬಂದಿದೆ ಎಂದಿಟ್ಟುಕೊಳ್ಳಿ. ಮನೆಗೆ ಅಥವಾ ಕಚೇರಿಗೆ ಹೋಗಿ ಕಂಪ್ಯೂಟರ್ ತೆರೆದು ಓದುವ ಬದಲಾಗಿ, ಪ್ರಯಾಣದಲ್ಲಿರುವಾಗಲೇ ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಇ-ಮೇಯ್ಲ್ ಅಟ್ಯಾಚ್‌ಮೆಂಟ್ ಫೈಲ್‌ನ್ನು ತೆರೆದರೆ ಅಲ್ಲಿ ಓದಲಾಗದ ವಿಚಿತ್ರಲಿಪಿಯ ದರ್ಶನವಾಗುತ್ತದೆ. ಇದೇನಿದು ಎಂದು ಗಲಿಬಿಲಿಗೊಳ್ಳುವ ನೀವು, ಅದನ್ನು ಕಳುಹಿಸಿದ ಸ್ನೇಹಿತನಿಗೆ ಫೋನ್ ಮಾಡಿ ಕೇಳುತ್ತೀರಿ. ಅತ್ತಕಡೆಯಿಂದ ಬರುವ ಉತ್ತರ ಹೀಗಿರುತ್ತದೆ : ಓ... ನಾನು ಕಂಪ್ಯೂಟರ್‌ನಲ್ಲಿರೋ  ನುಡಿತಂತ್ರಾಂಶ ಬಳಸಿ ಕನ್ನಡದಲ್ಲಿ ಟೈಪ್‌ಮಾಡಿ ಕಳುಹಿಸಿದ್ದೇನೆ. ಪ್ರಿಂಟ್ ಮಾಡೋಕೆ ಡಿ.ಟಿ.ಪಿ.ಯವರಿಗೆ ಕೊಟ್ಟು ಡಿಸೈನ್ ಮಾಡಿಸಬೇಕು. ಅದಕ್ಕೇ ನುಡಿಬಳಸಿ ಎಂ.ಎಸ್.ವರ್ಡ್ನಲ್ಲಿ ಟೈಪ್ ಮಾಡಿದ್ದೀನಿ. ನೀನು ಕಂಪ್ಯೂಟರ್‌ನಲ್ಲೇ ಅದನ್ನು ಓದಬೇಕು. ಸ್ಮಾರ್ಟ್‌ಫೋನ್‌ನಲ್ಲಿ ಓದಲಾಗೋಲ್ಲ.ಇದೇನಿದು ಕನ್ನಡದ ಸಮಸ್ಯೆ ಎಂದು ನೀವು ತಲೆಕೆಡಿಸಿಕೊಳ್ಳುತ್ತೀರಿ. ಸ್ಮಾರ್ಟ್‌ಫೋನ್‌ಗೊಂದು ಕನ್ನಡ, ಕಂಪ್ಯೂಟರಿಗೊಂದು ಕನ್ನಡ ಇದೆಯೇನು? ಎಂಬ ಜಿಜ್ಞಾಸೆ ಆರಂಭಗೊಳ್ಳಬಹುದು.

ಇದು ಕನ್ನಡದ ಸಮಸ್ಯೆ ಅಲ್ಲ. ಇದು ಕನ್ನಡಲಿಪಿಯನ್ನು ವಿದ್ಯುನ್ಮಾನ ಉಪಕರಣಗಳಲ್ಲಿ ಅಳವಡಿಸುವ  ಎನ್‌ಕೋಡಿಂಗ್ ಸಮಸ್ಯೆ. ಂSII-ಆಸ್ಕಿ, (ಅಮೆರಿಕನ್ ಸ್ಟ್ಯಾಂಡರ್ಡ್ ಕೋಡ್ ಫಾರ್ ಇನ್‌ಫರ್‌ಮೇಷನ್ ಇಂಟರ್‌ಚೇಂಚ್) ಎಂಬ ಹಳೆಯ ಎನ್‌ಕೋಡಿಂಗ್ ಶಿಷ್ಟತೆ (ಸ್ಟ್ಯಾಂಡರ್ಡ್) ಮತ್ತು ಯುನಿಕೋಡ್ ಎಂಬ ಹೊಸ ಎನ್‌ಕೋಡಿಂಗ್ ಶಿಷ್ಟತೆ - ಎರಡೂ ವ್ಯವಸ್ಥೆಗಳನ್ನು ಕಂಪ್ಯೂಟರ್ ಪ್ರತ್ಯೇಕವಾಗಿ ಗುರುತಿಸುತ್ತದೆ. ಆದರೆ,  ಸ್ಮಾರ್ಟ್‌ಫೋನುಗಳು ಕೇವಲ ಯುನಿಕೋಡ್ ವ್ಯವಸ್ಥೆಯನ್ನು ಮಾತ್ರವೇ ಗುರುತಿಸುತ್ತವೆಯೇ ಹೊರತು ಹಳೆಯ ಆಸ್ಕಿಅದಕ್ಕೆ ಅರ್ಥವಾಗುವುದಿಲ್ಲ. ಯುನಿಕೋಡ್ಎಂಬುದು ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ವಿಶ್ವದ ಬಹುತೇಕ ಎಲ್ಲಾ ಭಾಷೆಗಳಿಗಾಗಿ ಇರುವ ಹೊಸ ಎನ್‌ಕೋಡಿಂಗ್ ಶಿಷ್ಟತೆ (ಸ್ಟ್ಯಾಂಡರ್ಡ್). ಕನ್ನಡದ ಯುನಿಕೋಡ್ ಎನ್‌ಕೋಡಿಂಗ್‌ನ್ನೂ ಸಹ ಕಂಪ್ಯೂಟರುಗಳು ತಕ್ಷಣಕ್ಕೆ ತಾವಾಗಿಯೇ ಗುರುತಿಸುತ್ತವೆ. ಜಗತ್ತಿನ ಯಾವುದೇ ಮೂಲೆಯಲ್ಲಿಯೂ ಕನ್ನಡವು ಕನ್ನಡ ಲಿಪಿಯಾಗಿಯೇ ಮೂಡುತ್ತದೆ. ಆದರೆ, ಫಾಂಟ್ ಹೆಸರನ್ನು ಆಯ್ಕೆ ಮಾಡಿಕೊಂಡರೆ ಮಾತ್ರವೇ ಆಸ್ಕಿ-ಪಠ್ಯವು ಕನ್ನಡದಲ್ಲಿ ಕಾಣುತ್ತದೆ. ಇಲ್ಲವಾದರೆ ಮತ್ತದೇ ವಿಚಿತ್ರಲಿಪಿಯಾಗಿ ಕಾಣುತ್ತದೆ. ಕನ್ನಡಕ್ಕೆ ಪ್ರತ್ಯೇಕ ಸ್ಥಾನಮಾನವಿರದಿದ್ದ ಸಂದರ್ಭದಲ್ಲಿ, ಬೇರೆ ಯೂರೋಪಿಯನ್ ಭಾಷೆಗಳ ಅಕ್ಷರಗಳ ಮೇಲೆ ಕನ್ನಡದ ಅಕ್ಷರಗಳನ್ನು ಇರಿಸಿ ಬಳಸುವ ಕಾರ್ಯತಂತ್ರವೇ ಇದಕ್ಕೆ ಕಾರಣ. ಕನ್ನಡದ ಬಹುತೇಕ ಹಳೆಯ ಲಿಪಿತಂತ್ರಾಂಶಗಳು ಇಂತಹ ಕಾರ್ಯತಂತ್ರವನ್ನು ಹೊಂದಿರುವಂಥ ತಂತ್ರಾಂಶಗಳೇ. ನುಡಿಅಥವಾ ಬರಹಇತ್ಯಾದಿಗಳನ್ನು ಬಳಸಿ ಆಸ್ಕಿ ಫಾಂಟ್‌ಗಳಲ್ಲಿ ಟೈಪ್‌ಮಾಡಲಾದ ಕನ್ನಡವಾಗಿದ್ದರೆ ಅದು ಸ್ಮಾರ್ಟ್‌ಫೋನ್‌ಗಳಲ್ಲಿ ವಿಚಿತ್ರಲಿಪಿಯಾಗಿ (ಜಂಕ್ ಕ್ಯಾರೆಕ್ಟರ್‌ಗಳಾಗಿ) ಕಾಣುವುದು ಸಹಜ.  ನಮಗೆ ಬೇಕಾದ ಹಲವಾರು ಫಾಂಟ್‌ಗಳನ್ನು ಕಂಪ್ಯೂಟರ್‌ನಲ್ಲಿ ನಾವೇ ಇನ್‌ಸ್ಟಾಲ್ ಮಾಡಿಕೊಳ್ಳುವ ರೀತಿ ಸ್ಮಾರ್ಟ್‌ಫೋನ್‌ಗೆ ಫಾಂಟ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವ ಅವಕಾಶವಿಲ್ಲ.  ಕಂಪ್ಯೂಟರ್ ಬಳಸಿ ಟೈಪ್‌ಮಾಡಲಾದ ಕನ್ನಡದ ಆಸ್ಕಿ-ಪಠ್ಯವನ್ನು ಬೇರೊಬ್ಬರಿಗೆ ಕಳುಹಿಸಬೇಕಾದಾಗ, ಅದನ್ನು ಪಿಡಿಎಫ್ (ಪೋರ್ಟಬಲ್ ಡಾಕ್ಯುಮೆಂಟ್ ಫಾರ್‌ಮ್ಯಾಟ್) ನಮೂನೆಗೆ ಪರಿವರ್ತಿಸಿ ಕಳುಹಿಸುವುದು ಒಳ್ಳೆಯದು.  ಫೈಲ್‌ನ್ನು ಪಿಡಿಎಫ್‌ಗೆ ಪರಿವರ್ತಿಸಿದಾಗ ಪಠ್ಯದೊಂದಿಗೆ ಫಾಂಟ್‌ಗಳೂ ಸಹ ಜೋಡಣೆಗೊಳ್ಳುವ (ಎಂಬೆಡ್) ಕಾರಣ ಕನ್ನಡಲಿಪಿಯಲ್ಲಿಯೇ ಪಠ್ಯವನ್ನು ಎಲ್ಲಿಯಾದರೂ ಓದಬಹುದು.

ಡಿ.ಟಿ.ಪಿ. ತಂತ್ರಾಂಶಗಳಾದ ಕೋರಲ್‌ಡ್ರಾ, ಇನ್‌ಡಿಸೈನ್ ಇತ್ಯಾದಿಗಳಲ್ಲಿ ಯುನಿಕೋಡ್ ಬೆಂಬಲವು ಇನ್ನೂ ಸಮರ್ಪಕವಾಗಿ ದೊರೆಯದಿರುವ ಕಾರಣ,  ಮುದ್ರಣದ ಕೆಲಸಗಳಿಗಾಗಿ ಆಸ್ಕಿ-ಶಿಷ್ಟತೆಯು ಇಂದಿಗೂ ಅನಿವಾರ್ಯವಾಗಿದೆ. ಆದ್ದರಿಂದ ಆಸ್ಕಿ-ಫಾಂಟುಗಳು ಇಂದಿಗೂ ಬಳಕೆಯಲ್ಲಿದೆ. ಡಿ.ಟಿ.ಪಿ.ಗೆಂದೇ ಟೈಪ್‌ಮಾಡಲಾಧ ಕನ್ನಡದ ಪಠ್ಯವನ್ನು ಬೇರೆ ಬೇರೆ ಎಲೆಕ್ಟ್ರಾನಿಕ್ ಉಪಕರಣಗಳ ಮೂಲಕ ವಿನಿಮಯ ಮಾಡಿಕೊಂಡಾಗಲೇ ಇಂತಹ ವಿಚಿತ್ರಲಿಪಿಯ ಸಮಸ್ಯೆ ಎದುರಾಗುತ್ತದೆ. ಆದ್ದರಿಂದ, ವಿವಿಧ ಎಲೆಕ್ಟ್ರಾನಿಕ್ ಉಪಕರಣಗಳ ನಡುವೆ ಒಂದೇ ಕನ್ನಡ ಪಠ್ಯವನ್ನು ಬಳಸಿಕೊಳ್ಳಲು ಯುನಿಕೋಡ್ ಶಿಷ್ಟತೆಯಿರುವ ಫಾಂಟುಗಳನ್ನು ಬಳಸುವುದು ಸೂಕ್ತ ಮತ್ತು ಅನಿವಾರ್ಯ. ಹಾಗಾದರೆ, ಈಗಾಗಲೇ ಟೈಪ್‌ಮಾಡಲಾಗಿರುವ ಪಠ್ಯವನ್ನು ಯುನಿಕೋಡ್ ಫಾಂಟ್ ಬಳಸಿ ಮತ್ತೆ ಟೈಪ್‌ಮಾಡಬೇಕೆ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇಲ್ಲ.  ಅದರ ಅಗತ್ಯವಿಲ್ಲ. ಪರಿವರ್ತಕ ತಂತ್ರಾಂಶಗಳನ್ನು (ಕನ್‌ವರ್ಟರ‍್ಸ್) ಬಳಸಿ ಅದೇ ಪಠ್ಯವನ್ನು ಪರಿವರ್ತಿಸಬಹುದು. ಅಂತರಜಾಲದಲ್ಲಿ ಪರಿವರ್ತಕ ತಂತ್ರಾಂಶಗಳು ಲಭ್ಯ. ಕನ್ನಡದ ಆಸ್ಕಿ-ಪಠ್ಯವನ್ನು ಯುನಿಕೋಡ್‌ಗೆ ಪರಿವರ್ತಿಸುವ ಆನ್‌ಲೈನ್ ಸೌಲಭ್ಯವೂ ಇದೆ.

ಯುನಿಕೋಡ್ ಕನ್ನಡ ಪಠ್ಯವನ್ನು ಅಂತರಜಾಲದಲ್ಲಿ ಹುಡುಕುವುದು ಸುಲಭ. ಆಸ್ಕಿ-ಎನ್‌ಕೋಡಿಂಗ್ ಇರುವ ಕನ್ನಡ ಪಠ್ಯವನ್ನು ಸರ್ಚ್‌ಎಂಜಿನ್‌ಗಳು ಸಮರ್ಥವಾಗಿ ಹುಡುಕಿಕೊಡುವುದಿಲ್ಲ. ಆದ್ದರಿಂದ, ಜಾಲತಾಣಗಳಲ್ಲಿ ಇರಿಸಲಾಗುವ ಕನ್ನಡದ ಮಾಹಿತಿಗಳು ಯುನಿಕೋಡ್‌ನಲ್ಲಿರುವುದು ಅತ್ಯವಶ್ಯಕ. ಕನ್ನಡದ ಭಾಷಾ ಬಳಕೆಯ ಎಲ್ಲಾ ತಾಂತ್ರಿಕ ಮತ್ತು ತಂತ್ರಜ್ಞಾನೀಯ ಸಮಸ್ಯೆಗಳಿಂದ ಹೊರಬರಲು ಹಳೆಯ ಆಸ್ಕಿ-ಫಾಂಟುಗಳನ್ನು ಬಿಟ್ಟು ಹೊಸ ಯುನಿಕೋಡ್ ಫಾಂಟುಗಳೆಡೆಗೆಹೊರಳಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...